ನೆಲ್ಲಿ ತಿಂದರೆ ರೋಗ ಎಲ್ಲಿ? ಎಂಬುದು ಹಿರಿಯರ ಮಾತು. ನೆಲ್ಲಿಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಅದಕ್ಕಾಗಿ ನೆಲ್ಲಿಯ ಸೊಂಪಾದ ತೋಟದ ಪರಿಚಯ ಇಲ್ಲಿದೆ ನೋಡಿ..
ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಊರು. ಇಲ್ಲಿದೆ ಒಂದು ತಾವರಗೇರಾ ಸಮೂಹ ಸಂಸ್ಥೆ. ಈ ಸಂಸ್ಥೆಯ ಸನಿಹದಲ್ಲೊಂದು ತುಂಡು ಭೂಮಿ. ಈ ಭೂಮಿಯ ಮೈದುಂಬಿ ನಿಂತಿದೆ ನೆಲ್ಲಿ. ಈ ತೋಟದಲ್ಲಿ ನೆಲ್ಲಿ ಗಿಡಗಳು ಮೈತುಂಬ ಕಾಯಿಗಳನ್ನು ತೊಟ್ಟು ಕಣ್ಣು ಕುಕ್ಕುತ್ತಿವೆ.
ಐದು ವರ್ಷಗಳ ಹಿಂದೆ ನೆಟ್ಟಿರುವ ಈ ನೆಲ್ಲಿ ಗಿಡಗಳು ಈಗ ಕಾಯಿಗಳನ್ನು ಹೊತ್ತು ನೆಲ ಮುಟ್ಟುವಷ್ಟು ಬಾಗಿ ನಿಂತಿದೆ. ರಾಸಾಯನಿಕ ಮುಕ್ತ ಫಸಲಿನೊಂದಿಗೆ ಹಚ್ಚ ಹಸಿರಾಗಿ ಕಂಗೊಳಿಸುತ್ತಿವೆ.
ನೆಲ ಮುಟ್ಟಿರುವ ನೆಲ್ಲಿ
ಈ ಗಿಡಗಳು ಕಾಯಿಗಳ ತೂಕಕ್ಕೆ ನೆಲವನ್ನು ಮುಟ್ಟಿವೆ. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕವನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಅರ್ಧ ಎಕರೆ ಭೂಮಿಯಲ್ಲಿ ಮಿಶ್ರ ಬೆಳೆಯಾಗಿ ಬಾಳೆ ಸಹ ನೆಡಲಾಗಿದೆ. ಎರಡು ವರ್ಷಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ರಾಸಾಯನಿಕ ಕಡಿಮೆ ಬಳಸಿ ಬೆಳೆದಿರುವ ಕಾಯಿಗಳಿಗೆ ಬೇಡಿಕೆ ಹೆಚ್ಚಿತ್ತು.
ಈ ವರ್ಷ ಕಾಯಿಗಳನ್ನು ಒಂದು ಕೆ.ಜಿಗೆ ೨೫ ರೂಪಾಯಿಯಂತೆ ಮಾರಾಟ ಮಾಡಿ, ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಆದಾಯ ಪಡೆದುಕೊಳ್ಳಲಾಗಿದೆ. ಈ ವರ್ಷ ಎಲ್ಲಾ ನೆಲ್ಲಿಕಾಯಿ ದಪ್ಪ ಗಾತ್ರದಲ್ಲಿ ಬೆಳೆದಿವೆ. ಮಾರಾಟಕ್ಕೆ ಮತ್ತೆ ತಯಾರಾಗಿದೆ. ಇಂತಹ ಫಸಲು ಸುತ್ತಲಿನ ಒಣ ಪ್ರದೇಶಕ್ಕೆ ಮಾದರಿಯಾಗಿ ಕಾಣುತ್ತಿದೆ.
ಹೆಚ್ಚಿನ ಖರ್ಚು ಮಾಡದೆ ಉತ್ತಮ ಫಸಲನ್ನು ಬೆಳೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತಾರೆ ಸಂಸ್ಥೆಯ ವ್ಯವಸ್ಥಾಪಕರು. ಅವರ ಸಂಪರ್ಕಕ್ಕೆ: ೯೪೪೯೮೧೫೫೩೨. -ಶರಣಬಸವ. ಕೆ.ನವಲಹಳ್ಳಿ.