ಚಿತ್ರ ಸಿದ್ಧಾಂತವನ್ನು ಯೋಗದ ರೀತಿ ಅನುಸರಿಸಿ ವರ್ಣಶಿಲ್ಪಿಯಾಗಿ ಖ್ಯಾತರಾದವರು ಶ್ರೀ ಕೆ.ವೆಂಕಟಪ್ಪನವರು. ಅವರು ರಚಿಸಿದ ‘ಶಕುಂತಲೆ ಕಣ್ವಾಶ್ರಮದಿಂದ ಬೀಳ್ಕೊಳ್ಳುವ ಮೃತ್ತಿಕಾ ಚಿತ್ರದಿಂದ ಪ್ರೇರಿತವಾಗಿ’ ಕುವೆಂಪು ಅವರು ‘ವರ್ಣಶಿಲ್ಪಿ ವೆಂಕಟಪ್ಪನವರಿಗೆ’ ಕವನ ರಚಿಸಿದ್ದಾರೆ. ಆ ಚಿತ್ರ ಭೂತಕಾಲದ ಘಟನೆಯಾಗಿ, ವರ್ತಮಾನದಲ್ಲಿ ಶೋಭಿಸುತ್ತ, ಭವಿತವ್ಯದ ಚಿತ್ರಕಲಾ ಚತುರರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳುತ್ತ ಕುವೆಂಪು ಅವರು ವೆಂಕಟಪ್ಪನವರ ಕುಶಲತೆಗೆ ತಲೆಬಾಗಿ ‘ಚಿತ್ರಯೋಗಿ’ ಎಂದು ಬಣ್ಣಿಸಿದ್ದಾರೆ.