ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಸಾಧನೆ ಮರೆಯುವುದುಂಟೇ?

Last Updated 31 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

‘ಮೀಸಲಾತಿ: ಒಡೆಯರ್ ಬೆಳಗಿದ ಹಣತೆ’ ಶೀರ್ಷಿಕೆಯ ಅಡಿ ಭಾನುವಾರದ ಪುರವಣಿಯಲ್ಲಿ ಲೇಖನ ಬರೆದಿದ್ದೆ. ಇದರ ಬಗ್ಗೆ ಹಲವರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನಾನಿಲ್ಲಿ ಒಂದು ವಿಷಯ ಸ್ಪಷ್ಟಪಡಿಸುವೆ. ನನ್ನ ಲೇಖನದ ಉದ್ದೇಶ ಯಾರ ಮನಸನ್ನೂ ನೋಯಿಸುವುದಲ್ಲ, ಯಾವ ಮಹನೀಯರನ್ನೂ ವಿಲನ್‍ಗಳಂತೆ ಚಿತ್ರಿಸುವುದು ಖಂಡಿತ ಅಲ್ಲ. ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದ್ದರೂ ಬ್ಯಾರಿಸ್ಟರ್ ಕೆ.ಎಚ್. ರಾಮಯ್ಯನವರು 1922ರಲ್ಲಿ ಬೆಂಗಳೂರಿನ ಪುರಭವನದಲ್ಲಿ ನಡೆದ ವಿಶ್ವೇಶ್ವರಯ್ಯನವರ 60ನೇ ಜಯಂತಿಯಲ್ಲಿ ಪಾಲ್ಗೊಂಡು, ಅವರನ್ನು ಹಾಡಿಹೊಗಳಿದ್ದಾರೆ.

ಇದು ಅವರಿಬ್ಬರ ನಡುವಿನ ಸುಮಧುರ ಬಾಂಧವ್ಯಕ್ಕೆ ಒಂದು ಸಣ್ಣ ಉದಾಹರಣೆ. ನಮ್ಮ ಹಿರಿಯರು ಯಾರೇ ಆಗಿರಲಿ, ಅವರೆಲ್ಲಾ ನಮಗೆ ಪ್ರಾತಃಸ್ಮರಣೀಯರು. ಅವರು ನೀಡಿದ ಬದುಕಿನ ಭಿಕ್ಷೆ ಉಂಡು ನಾವು ಬದುಕುತ್ತಿದ್ದೇವೆ. ನಾನು ಯಾವ ಹಿರಿಯರ ವ್ಯಕ್ತಿತ್ವವನ್ನೂ ಹೀಯಾಳಿಸುವುದಿಲ್ಲ.

ಓದುಗರಲ್ಲಿ ಇರಬಹುದಾದ ಕೆಲವು ಅನುಮಾನಗಳನ್ನು ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ; ಜಗತ್ತಿನಲ್ಲಿ ಅತ್ಯಂತ ಸಮರ್ಪಕವಾಗಿ ಮೊದಲು ಮೀಸಲಾತಿ ಜಾರಿಗೆ ಬಂದಿದ್ದು ಮೈಸೂರು ಸಂಸ್ಥಾನದಲ್ಲಿ. ಏಕೆಂದರೆ, 1902ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಮಹಾರಾಜ ಶಾಹು, ಶೋಷಿತ ವರ್ಗಕ್ಕೆ ಶೇಕಡ 50ರಷ್ಟು ಮೀಸಲಾತಿ ತಂದಿದ್ದರೂ, 1919ರ ಆಗಸ್ಟ್ 23ರಂದು ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳಿಗೆ ಜಾರಿಗೆ ಬಂದ ಮೀಸಲಾತಿ ವ್ಯವಸ್ಥೆಯು ಅತ್ಯಂತ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಜಾರಿಗೆ ತಂದಂಥದ್ದು. ಹಾಗೇ, 1921ರಲ್ಲಿ, ಮೀಸಲಾತಿ ಸರಿಯಾಗಿ ಅನುಷ್ಠಾನ ಆಗುತ್ತಿದೆಯಾ ಎಂದು ನೋಡಲು, ನಿಗಾ ಸಮಿತಿ ರಚಿಸಲಾಗಿತ್ತು.

ಈಗ ನಾವು ಮೀಸಲಾತಿ ಸಮರ್ಪಕವಾಗಿ ಜಾರಿಗೆ ತರಲು ಒಳಮೀಸಲಾತಿ, ಕೆನೆ ಪದರದ ಬಗ್ಗೆ ಮಾತನಾಡುತ್ತಿದ್ದೇವೆ. ಅದನ್ನು ಆ ಕಾಲದಲ್ಲೇ ಯೋಚಿಸಿ, ಮೀಸಲಾತಿಯು ಸಮರ್ಪಕವಾಗಿ ಫಲಾನುಭವಿಗಳಿಗೆ ಸಿಗುವಂತೆ ಮಾಡಲಾಗುತ್ತಿತ್ತು. ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಮೈಸೂರು ಸಂಸ್ಥಾನದ ಮೀಸಲಾತಿ ಕರಡನ್ನು ಆಧರಿಸಿ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿವೆ.

1911ರಲ್ಲಿ ‘ಹಿಂದುಳಿದ ವರ್ಗಗಳ ಜಾಗೃತಿಯ ಮಹಾಂದೋಲನ’ದ ವಿಶೇಷಾಧಿಕಾರಿಯಾದ ಕೆ.ಎಚ್. ರಾಮಯ್ಯ ಪ್ರಕಟಿಸಿದ ಜಾತಿ ಗಣತಿ, ಶೈಕ್ಷಣಿಕ ಗಣತಿ ಮತ್ತು ಸರ್ಕಾರಿ ಉದ್ಯೋಗಸ್ಥರ ಜಾತಿವಾರು ಗಣತಿ, ಸಂಬಳಗಳನ್ನಲ್ಲದೆ, ಇಂಗ್ಲಿಷ್ ಶಿಕ್ಷಣ ಪಡೆವವರ ಗಣತಿಯನ್ನೂ ಪ್ರಕಟಿಸಿದ್ದು ಮೈಸೂರು ಸಂಸ್ಥಾನದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದನ್ನಾಧರಿಸಿಯೇ, 1912ರಲ್ಲಿ ಅನಿಬೆಸೆಂಟ್ ಅವರು ಮದ್ರಾಸ್‍ನಲ್ಲಿ ‘ಹೋಂ ರೂಲ್’ ಚಳವಳಿ ನಡೆಸಿದರು. ಅನಿಬೆಸೆಂಟ್ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಬ್ರಿಟಿಷರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಟೀಕಿಸಿದ ಪಿ. ತ್ಯಾಗರಾಜನ್ ಚೆಟ್ಟಿ ಮತ್ತು ಟಿ.ಎಂ.ನಂಬಿಯಾರ್ ಅವರು 1916ರ ನವೆಂಬರ್‌ನಲ್ಲಿ ‘ಜಸ್ಟೀಸ್ ಪಾರ್ಟಿ’ ಸ್ಥಾಪಿಸಿದರು.

1944ರಲ್ಲಿ ಆ ಪಕ್ಷದ ಅಧ್ಯಕ್ಷರಾಗಿದ್ದ, ಕನ್ನಡಿಗರಾದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ‘ಜಸ್ಟೀಸ್ ಪಾರ್ಟಿ’ ಹೆಸರನ್ನು ‘ದ್ರಾವಿಡರ್ ಕಳಗಂ’ ಎಂದು ಬದಲಾಯಿಸಿದರು. 1949ರಲ್ಲಿ, 70 ವರ್ಷ ವಯಸ್ಸಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ 14 ವರ್ಷ ವಯಸ್ಸಿನ ಮಣಿಯಮ್ಮ ಅವರನ್ನು ಮದುವೆಯಾಗಿದ್ದನ್ನು ವಿರೋಧಿಸಿ ಅಣ್ಣಾ ದೊರೈ ‘ದ್ರಾವಿಡ ಮುನ್ನೇತ್ರ ಕಳಗಂ’ ಸ್ಥಾಪಿಸಿದರು. 1977ರಲ್ಲಿ ಕರುಣಾನಿಧಿಯೊಂದಿಗೆ ಮುನಿಸಿಕೊಂಡು ಹೊರಬಂದ ಎಂಜಿಆರ್ ‘ಅಣ್ಣಾ ಡಿಎಂಕೆ’ ಸ್ಥಾಪಿಸಿ ತಮಿಳುನಾಡಿನ ಮುಖ್ಯಮಂತ್ರಿ ಆದರು.

ಹೀಗೆ ತಮಿಳುನಾಡಿನಲ್ಲಿ ಹೋಂ ರೂಲ್ ಚಳವಳಿ-ದ್ರಾವಿಡ ಪಕ್ಷಗಳ ಉದಯಕ್ಕೆ ಕಾರಣವಾದ, ಮೈಸೂರು ಸಂಸ್ಥಾನದ ಮೀಸಲಾತಿ ಹೋರಾಟವನ್ನು ಕತ್ತಲಿನಿಂದ ಬೆಳಕಿಗೆ ತರುವುದಷ್ಟೆ ನನ್ನ ಉದ್ದೇಶವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT