ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಶೃಂಗಾರದಲ್ಲಿ ಅದ್ದಿ ತೆಗೆದ ಕಂಬನಿ

Last Updated 11 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ರತಿಯ ಕಂಬನಿ
ಕವನ ಸಂಕಲನ
ನಂದಿನಿ ಹೆದ್ದುರ್ಗ
ಪ್ರ: ವಿಕಾಸ ಪ್ರಕಾಶನ
ಸಂ: 9900095204

ಒಟ್ಟು 54 ಕವಿತೆಗಳ ಸಂಕಲನವಿದು. ಜೊತೆಗೆ ‘ಹನಿ- ಇಬ್ಬನಿ’ ಎನ್ನುವ ಶೀರ್ಷಿಕೆಯಲ್ಲಿ 34 ಹನಿಕವಿತೆಗಳೂ ಇವೆ. ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಮೋಹಪರವಶರಾಗಿ ಸುದೀರ್ಘ ಮುನ್ನುಡಿಯೊಂದನ್ನೂ ಬರೆದಿದ್ದಾರೆ. ಅವರ ಪ್ರಕಾರ ಇಲ್ಲಿರುವ ಬಹುತೇಕ ಕವಿತೆಗಳೂ ರತಿಯ ಕಂಬನಿಯೇ. ‘ನಂದಿನಿಯವರ ಈ ಸಂಕಲನ ಕವಯಿತ್ರಿಯೊಬ್ಬರು ಕನ್ನಡಕ್ಕೆ ಕೊಟ್ಟ ಮೊದಲ ಪ್ರಣಯಾಯಣ. ಹೆಣ್ಣಿನ ಲೈಂಗಿಕ ಬಯಕೆಯನ್ನು ಇಡೀ ಸಂಕಲನದ ಪ್ರಧಾನ ವಸ್ತುವನ್ನಾಗಿಸಿಕೊಂಡು ಬಹು ಪ್ರಾಮಾಣಿಕತೆಯಿಂದ ಕಟ್ಟಿಕೊಟ್ಟ ಕನ್ನಡದ ಮೊದಲ ಕವನಗುಚ್ಛ’ ಎನ್ನುತ್ತಾರೆ ಅವರು.

‘ಬಿಸಿರಕ್ತದ ಯುವಜನರು 20ರ ಹರೆಯ ದಲ್ಲಿ ಕಮ್ಯುನಿಸ್ಟರಾಗಬೇಕು. 30ರ ಹರೆಯದಲ್ಲಿ ಸಮಾಜವಾದಿಗಳಾಗಬೇಕು’ ಎನ್ನುವ ಮಾತಿದೆ. ಇದನ್ನೇ ಕಾವ್ಯಲೋಕಕ್ಕೆ ಅನ್ವಯಿಸುವುದಾದರೆ, ‘20ರ ಹರೆಯದಲ್ಲಿ ಪ್ರೇಮಕವಿತೆಗಳನ್ನು ಬರೆಯುವವರು, 30ರ ಹರೆಯದಲ್ಲಿ ಪ್ರಣಯ ಕವಿತೆಗಳನ್ನು ಬರೆಯಬೇಕು’ ಎನ್ನಬಹುದು. ಕವಿಗಳೇನೋ ಅದಕ್ಕೆ ರೆಡಿ. ಆದರೆ ಕವಯಿತ್ರಿಯರು? ಮಡಿವಂತಿಕೆಯೇ ಹೆಚ್ಚಿರುವ ನಮ್ಮ ಪರಿಸರದಲ್ಲಿ ಇದು ಕಷ್ಟವೇ.

ಕವಯಿತ್ರಿಯರ ಇಂತಹ ದೇಹ – ಮೋಹ ಕೇಂದ್ರಿತ ಕವಿತೆಗಳು ಬಿಡಿಯಾಗಿ ಕಾಣಸಿಗುತ್ತ ವಾದರೂ ಒಂದಿಡೀ ಸಂಕಲನ ಇದಕ್ಕೇ ಮುಡಿ ಪಾಗಿರುವಂತಹದ್ದು ಕಾಣ ಸಿಗುವುದಿಲ್ಲ. ಕನ್ನಡ ದಲ್ಲಿ ಇಂತಹ ಕವಿತೆಗಳನ್ನು ತನ್ನದೇ ಆದ ಶೈಲಿಯಲ್ಲಿ ಬರೆದಿರುವ ಪ್ರತಿಭಾ ನಂದಕುಮಾರ್ ನೆನಪಾಗುತ್ತಾರಾದರೂ ಅವರ ಕವಿತೆಗಳು ಪ್ರೀತಿ-ಮೋಹಗಳನ್ನೂ ಮೀರಿ ಹೊಸ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತವೆ. ಎಚ್.ಆರ್.ಸುಜಾತ ಅವರ ಪ್ರೇಮದಲ್ಲೇ ಅದ್ದಿ ತೆಗೆದಂತಹ ಕವಿತೆಗಳೂ ನೆನಪಾಗುತ್ತವೆ. ಆದರೆ ಈ ಸಂಕಲನದ ಕವಿತೆಗಳು ಅವೆರಡಕ್ಕಿಂತಲೂ ‘ಬೋಲ್ಡ್‌’ ಆಗಿರುವಂಥವು.

ನಂದಿನಿಯವರ ಈ ಸಂಕಲನದಲ್ಲಿ ಒಬ್ಬ ನಾಯಕಿ ಇದ್ದಾಳೆ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ ‘ಮೋಹಿ’ನಿ ಈಕೆ. ಆದರೆ ಈಕೆ ಶ್ರೀಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿ ಭಕ್ತಿಪರವಶೆಯಾದ ಮೀರಾಳಂತೆಯೂ ಅಲ್ಲ; ಚೆನ್ನಮಲ್ಲಿಕಾರ್ಜುನನೇ ಪರದೈವ ಎಂದು ಬಗೆದು ಅಲೌಕಿಕದಾಚೆಗೆ ಜಿಗಿಯುವ ಅಕ್ಕಮಹಾದೇವಿಯಂತೆಯೂ ಅಲ್ಲ. ಇಲ್ಲೊಬ್ಬ ಅಗೋಚರ ಪ್ರೇಮಿಯಿದ್ದಾನೆ. ಆದರೆ ಆತ ಶಿವನಲ್ಲ, ಬುದ್ಧನಲ್ಲ, ರಾಮನೂ ಅಲ್ಲ. ಇಲ್ಲಿನ ಕವಿತೆಗಳಲ್ಲಿ ಇವರೆಲ್ಲರೂ ಬರುತ್ತಾರೆ. ಆದರೆ ಎಲ್ಲರ ಜೊತೆಗೂ ಜಗಳ ಈ ಕವಯಿತ್ರಿಯದ್ದು. ಜಗಳದ ಮೂಲ ಪ್ರೇಮ ಮತ್ತು ಮೋಹವೇ.

‘ಮೂರನೇ ಕಣ್ಣು ಮುಚ್ಚಿ/ ಸುಮ್ಮನೇ ಮಲಗೋ ಶಿವನೇ/ ನಿನಗೇನು ಗೊತ್ತು ರಾಜಾರೋಷ ಪ್ರೇಮದ ಬಗ್ಗೆ/ ನಾನಾದರೋ ಜೋಡಿ ಹೆಜ್ಜೆ ಗುರುತುಗಳ ಬೇಜಾನು/ ಬಿಟ್ಟು ಬಂದಿರುವೆ ರೇವೆಯಲ್ಲಿ... ’
(ರಾಜಾರೋಷ) - ಎನ್ನುತ್ತಾ ಶಿವನ ಜೊತೆಯಲ್ಲಿ ಜಗಳವಾಡುವ ನಾಯಕಿಯ ಮುಂದೆ ರಾಮನೂ ಬಂದುಹೋಗುತ್ತಾನೆ. ಆದರೆ ಕಾವ್ಯನಾಯಕಿಗೆ ರಾಮನಿಗಿಂತ ಹೆಚ್ಚಾಗಿ ಮಾರೀಚನ ಮೇಲೆ ಮೋಹ. ‘ನೆಲದ ಸೀತೆಯರದ್ದು ಮುಗಿಯದ ಬಯಕೆ/ ಇಂದಾದರೂ ಬಂದೀತೆ ನನ್ನ ಅಂಗಳಕೆ/ ಮಾರೀಚನ ಜಿಂಕೆ?/ ತಡವರಿಸಿಯಾದರೂ ಓಡಬೇಕಿದೆ ಈ ಜಗದ ಆಚೆ/ ನೋಡಬಲ್ಲೆನೇ ನಾನೂ ಕನಕಪುರಿ ಲಂಕೆ?’ ಎನ್ನುತ್ತಾ ಈ ನಾಯಕಿ ಲಕ್ಷ್ಮಣ ರೇಖೆ ಇರುವುದೇ ದಾಟುವುದಕ್ಕೆ ಎನ್ನುತ್ತಾಳೆ.

ಅಧ್ಯಾತ್ಮಗುರು ಬುದ್ಧನ ಮೇಲೂ ಮೋಹದ ದಾಳಿ ಈ ನಾಯಕಿಯದ್ದು. ಬುದ್ಧನನ್ನೇ ಅಪಹರಿಸುವ ಈ ಕವಿತೆ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೋ ಎಂಬ ಅನುಮಾನ ಮೂಡಿಸು ತ್ತಲೇ ‘ಒದ್ದಾಡೋ ಬುದ್ಧ, ಒದೆ ಯುವ ಬುದ್ಧ, ಮೊಲೆ ಕುಡಿವ ಬುದ್ಧ, ಅಂಬೆಗಾಲಿನ ಬುದ್ಧ.. ಎಷ್ಟೊಂದು ಬುದ್ಧರು, ಈ ಜಗದ ಉದ್ದ’ ಎನ್ನುತ್ತಾ ಹೊಸ ದಾರಿಯೊಂದಕ್ಕೆ ತೆರೆದುಕೊಳ್ಳುತ್ತದೆ.

ನಂದಿನಿಯವರ ಎಲ್ಲ ಕವಿತೆಗಳಲ್ಲೂ ಇರುವ ಚಿತ್ರಕಶಕ್ತಿ ಗಮನಾರ್ಹ. ‘ಲಯ ವಿಲಯ’ ಇದಕ್ಕೊಂದು ಉದಾಹರಣೆ. ಶೈಲಿಯಲ್ಲಿಎಚ್.ಎಸ್.ಶಿವಪ್ರಕಾಶರ ಕವಿತೆಗಳನ್ನು ನೆನಪಿಸುವ ಈ ಕವಿತೆ ಕಟ್ಟಿಕೊಡುವ ಮನೋಲೋಕ ಮಾತ್ರ ವಿಭಿನ್ನವಾದದ್ದು. ‘ಕನಸಿನೊಳಗಿನ ಕಣಸು’ ಬೇಂದ್ರೆ ಮತ್ತು ಜಿಎಸ್ಸೆಸ್ ಕವಿತೆಗಳನ್ನು ನೆನಪಿಸುತ್ತದೆ. ಆದರೆ, ‘ಮೊಗದ ತುಂಬೆಲ್ಲ ಮೆತ್ತಿಕೊಂಡಿದೆ/ ಯಾವುದೋ ಲೋಕದ ಮಮತೆ’ ಎನ್ನುತ್ತಲೇ ತಮ್ಮದೇ ಆದ ಕವಲುದಾರಿಗೆ ಹೊರಳುತ್ತಾರೆ ಕವಯಿತ್ರಿ. ಕಿರುಬೆರಳ ತುದಿಯಲ್ಲಿ ಕರೆದರೂ ಗುಬ್ಬಚ್ಚಿಗಳ ಹಿಂಡಿನಂತೆ ಬಂದಿಳಿಯುವ ಪ್ರತಿಮೆಗಳ ರಾಶಿಯೇ ಈ ಸಂಕಲನದಲ್ಲಿದೆ. ಆ ಪ್ರತಿಮೆಗಳೂ ಹೆಣ್ಣಲೋಕದಲ್ಲಿ ಮಾತ್ರ ಸಿಗಬಹುದಾದವು ಎನ್ನುವುದು ಗಮನಾರ್ಹ. ಗಝಲ್‌ಗಳ ಭಾವತೀವ್ರತೆ, ಭಾವಗೀತೆಗಳ ಲಾಲಿತ್ಯ ಎರಡನ್ನೂ ಮಿಶ್ರಣ ಮಾಡಿದಂತೆ ಕಾಣುವ ಹಲವು ಸಾಲುಗಳು ಕವಿತೆಗಳ ಓದನ್ನು ಮುದಗೊಳಿಸುತ್ತದೆ.

ಎಲ್ಲವನ್ನೂ ಓದಿದ ಬಳಿಕ ‘ನಡೆದ ಹಾದಿ ಯಲ್ಲೇ ನಡೆದು ಎಷ್ಟು ದೂರ ಸಾಗಬಹುದು?’ ಎನ್ನುವ ಪ್ರಶ್ನೆ ಮೂಡುತ್ತದೆ. ಅದೇ ವೇಳೆ ‘ಕೆಂಪು ಹಾಡೊಂದು’ ಕಾಣಿಸುತ್ತದೆ. ಆದರೆ ಅದು ತನ್ನ ಹಾದಿಯಲ್ಲ ಎನ್ನುತ್ತಾರೆ ಕವಯಿತ್ರಿ. ‘ಕವಿತೆ ಕಟ್ಟುವುದಲ್ಲ, ಹುಟ್ಟುವುದು’ ಎನ್ನುವುದು ಅವರ ದೃಢನಂಬಿಕೆ. ಹೀಗಾದಾಗ ಆರಂಭದ ಸಾಲಿನ ಲಯಬದ್ಧ ಬಂಧ, ಬಳಿಕ ಅಡ್ಡಾದಿಡ್ಡಿ ತೆವಳಿ ರಸಭಂಗವಾಗುವ ಉದಾಹರಣೆಗಳೂ ಇಲ್ಲಿವೆ. 105 ಸಾಲುಗಳ ಸುದೀರ್ಘ ಕವಿತೆಯಲ್ಲೂ (ಅಕಾರಣ, ಅಕಾಲದಲ್ಲಿ) ಕವಿತೆಯ ಹೃದಯ ತೆರೆದುಕೊಳ್ಳುವುದು 50ನೇ ಸಾಲಿನ ಬಳಿಕ. ಕೊನೆಯ ಸಾಲಿಗೆ ಬಂದರೆ ‘ಇದು ಧಗೆಯ ದೂಳು ತುಂಬಿದ ಒಂದು ಮಧ್ಯಾಹ್ನ/ ಆರಂಭವಾಗಿಲ್ಲ ನನ್ನ ಪ್ರೀತಿಯಿನ್ನೂ’ ಎಂದು ಮುಗಿಯುತ್ತದೆ. ಪ್ರೇಮ-ಮೋಹದ ಹಾದಿಯಲ್ಲಿ ತಾನು ಇನ್ನಷ್ಟು ನಡೆಯಬೇಕಿದೆ ಎನ್ನುವುದನ್ನೇ ಸೂಚಿಸುವಂತಿದೆ ಈ ಕವಿತೆ.

ಇತ್ತೀಚೆಗೆ ಬಂದಿರುವ ಕವಿತೆಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಗಮನಾರ್ಹ ಸಂಕಲನವಿದು. ಆದರೆ ಸವೆದ ಹಾದಿಯಲ್ಲೇ ಮತ್ತೆ ಮತ್ತೆ ಹೆಜ್ಜೆ ಹಾಕುವಾಗ ಹೊಸ ಹುಲ್ಲು ಹುಟ್ಟುವುದಿಲ್ಲ ಎನ್ನುವುದನ್ನೂ ನೆನಪಿಸಿ ಕೊಳ್ಳುವುದು ಒಳ್ಳೆಯದು. ಕೊನೆಯ ಕೆಲವು ಕವಿತೆಗಳೂ ಈ ಮಾತನ್ನು ಸಮರ್ಥಿಸುವಂತಿವೆ. ಲಯಗಾರಿಕೆ, ಚಿತ್ರಕ ಶಕ್ತಿಗಳ ಮೂಲಕ ಗಮನ ಸೆಳೆಯುವ ಕವಯಿತ್ರಿ ಆರಂಭದಲ್ಲಿ ಹೇಳಿದಂತೆ, ತಾವು ಕಂಡುಂಡ ಕಾಫಿ ತೋಟ, ಹಸಿರು ವನರಾಶಿ, ಕೆರೆಕಟ್ಟೆ, ಅಮ್ಮನ ಮನೆಯೆಂಬ ಮೂರು ಬೆಟ್ಟದ ತಪ್ಪಲಿನ ಸ್ವರ್ಗ, ನಾಕು ಹೆಜ್ಜೆ ಇಟ್ಟರೆ ಸಿಗುವ ಪಾರ್ವತಮ್ಮನ ಬೆಟ್ಟದಲ್ಲಿ ಹುಟ್ಟಬಹುದಾದ ಕಾವ್ಯತೊರೆಗಳನ್ನು ಇನ್ನಷ್ಟೇ ಹುಡುಕಬೇಕಿದೆ. ಸೀಮಿತ ವಸ್ತುವಿನ ಆಯ್ಕೆ, ಮಿತಿಯೂ ಆಗದಂತೆ ನೋಡಿಕೊಳ್ಳಬೇಕಿದೆ. ವ್ಯಕ್ತಿಕೇಂದ್ರಿತ ಬಿಂದುವಿನಿಂದ ಸಮಷ್ಟಿಯ ಆಕಾಶಕ್ಕೆ ಜಿಗಿಯುವತ್ತ ಮನಸ್ಸು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT