ಬೀದಿಯಲ್ಲಿ ವೈಲಿನ್ ನುಡಿಸುತ್ತಾ, ಜನಪದ ಗೀತೆ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ಮಾರೆಪ್ಪ ಮಾರೆಪ್ಪ ದಾಸರ್ ಪಂ.ಮಲ್ಲಿಕಾರ್ಜುನ ಮನಸೂರ ಅವರ ಕಣ್ಣಿಗೆ ಬಿದ್ದರು. ಭಿಕ್ಷುಕನನ್ನು ಮನೆಗೆ ಕರೆದೊಯ್ದ ಮನಸೂರರು ಸ್ನೇಹಿತರು, ಶಿಷ್ಯರನ್ನು ಆಹ್ವಾನಿಸಿ ಜನಪದ ಗಾಯನ ಕಛೇರಿ ಆಯೋಜಿಸಿದರು. ಸ್ವರಯೋಗಿಗಳೆದರು ಮಾರೆಪ್ಪ ತನ್ನ ಎದೆಯೊಳಗಿದ್ದ ಜನಪದ, ಲಾವಣಿ, ತತ್ವಪದಗಳನ್ನು ತೆರೆದಿಟ್ಟರು. ಮಾರೆಪ್ಪನ ಗಾಯನ ಪ್ರತಿಭೆಗೆ ಮೆಚ್ಚಿದ ಮನಸೂರರು ಧಾರವಾಡ ಆಕಾಶವಾಣಿಯಲ್ಲಿ ‘ಬಿ ಹೈ’ಶ್ರೇಣಿ ಕಲಾವಿದನನ್ನಾಗಿ ರೂಪಿಸಿದರು. ಅನ್ನಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಾರೆಪ್ಪ ನಂತರ ಗೌರವಧನಕ್ಕಾಗಿ ಆಕಾಶವಾಣಿ ಸ್ಟುಡಿಯೊದಲ್ಲಿ ಹಾಡಿದರು. ಅಲೆಮಾರಿ ಕುಟುಂಬದಲ್ಲಿ ಹುಟ್ಟಿ ಊರೂರು ಅಲೆಯುತ್ತಿದ್ದ ಅವರು ಜನಪದ ಕಲಾವಿದನಾಗಿ ಬೆಳೆದ ಪರಿಯ ಹಿಂದೆ ರೋಚಕ ಕತೆಗಳಿವೆ. ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿ ಮಾರೆಪ್ಪ ಅವರ ಸಾಧನೆಯ ಪಕ್ಷಿನೋಟವಿದೆ, ಹಿತಾನುಭವವಿದೆ.