ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜಾ ಕಲ್ಯಾಣವೆಂಬಸಂಸ್ಕೃತಿ ಕಥನ

Last Updated 27 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮೈ ಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಮುಡುಕುತೊರೆ ಕ್ಷೇತ್ರ ಕರ್ನಾಟಕದ ದಕ್ಷಿಣ ಭಾಗದ ಹಳೇ ಮೈಸೂರು ಸೀಮೆಯ ಶೈವ ಕೇಂದ್ರಗಳಲ್ಲೊಂದು. 300 ಅಡಿಗಳಷ್ಟು ಎತ್ತರದ ಮುಡುಕುತೊರೆ ಬೆಟ್ಟದ ಮೇಲೆ ಶಿವ-ಪಾರ್ವತಿ ದೇವಾಲಯವಿದೆ. ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳ ಸೋಪಾನವಿದೆ. ಬೆಟ್ಟದ ತಪ್ಪಲಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ದಡದ ಎಡಕ್ಕೆ ಬೆಟ್ಟದ ಕಡೆಗೆ ವಿಶಾಲ ತೋಪಿದೆ. ಬೆಟ್ಟದ ಬುಡದಲ್ಲಿ ಬೆಟ್ಟಳ್ಳಿ ಎಂಬ ಊರಿದೆ. ಸಮೀಪದಲ್ಲೇ 3 ಕಿ.ಮೀ. ದೂರದಲ್ಲಿ ಕನ್ನಡ ನಾಡನ್ನಾಳಿದ ಗಂಗರ ರಾಜಧಾನಿ ಐತಿಹಾಸಿಕ ನಗರ ತಲಕಾಡು ಇದೆ. ಪ್ರಸಿದ್ಧ ತಲಕಾಡು ಪಂಚಲಿಂಗ ದರ್ಶನದ ಐದು ಲಿಂಗಗಳಲ್ಲಿ ಮುಡುಕುತೊರೆ ಬೆಟ್ಟದ ಶಿವಲಿಂಗವೂ ಒಂದು.

ಚಾಮರಾಜನಗರ ಜಿಲ್ಲೆ- ಹಳೇ ಮೈಸೂರು ಪ್ರಾಂತ್ಯದಲ್ಲಿ ಶಿವ- ಪಾರ್ವತಿ ಪ್ರಧಾನ ಗಿರಿಜಾಕಲ್ಯಾಣ ಎಂಬ ಶೈವ ಕಥನಕಾವ್ಯ ಒಂದು ಪ್ರಚಲಿತದಲ್ಲಿದೆ. ಬಹುಪಾಲು ದಲಿತ, ಹಿಂದುಳಿದ ದೇಸಿ ಸಮುದಾಯಗಳ ಮಹಿಳಾ ಜನಪದ ಗಾಯಕಿಯರು ತಮ್ಮ ತಮ್ಮ ಗ್ರಾಮಗಳ ಮದುವೆ ಶಾಸ್ತ್ರಗಳ ಸಂದರ್ಭಗಳಲ್ಲಿ ಇಂದಿಗೂ ಇದನ್ನು ಹಾಡುವ ಪದ್ಧತಿ ಇದೆ. ಆ ಪ್ರಕಾರ ಗಿರಿರಾಯ ಅನ್ನೋನು ಆಂಧ್ರಪ್ರದೇಶದ ಶ್ರೀಶೈಲ ಎಂಬ ಪರ್ವತ ರಾಜ್ಯದ ಒಡೆಯ. ಆದ್ದರಿಂದ ಅವನಿಗೆ ಪರ್ವತರಾಜ ಎಂಬ ಹೆಸರೂ ಇದೆ. ಗಿರಿರಾಯರ ಮಗಳು ಗಿರಿಜೆ, ಅಂದರೆ ಪಾರ್ವತಿ. ಗಿರಿಜೆಯ ಅಂದ ಚಂದಕ್ಕೆ ಮರುಳಾಗುವ ಶಿವ ಗೊರವಯ್ಯನ ವೇಷ ಧರಿಸಿ ಪರ್ವತರಾಜ್ಯದಲ್ಲಿ ಭಿಕ್ಷೆಗೆ ಹೋಗುತ್ತಾನೆ. ಪಾರ್ವತಿಯನ್ನು ಪ್ರೇಮಪಾಶದಲ್ಲಿ ಬಂಧಿಸಿ ಕರ್ನಾಟಕದ ಮೈಸೂರು ಸೀಮೆಯ ಕಾವೇರಿ ತೀರದ ತನ್ನ ಮುಡುಕುತೊರೆ ಕ್ಷೇತ್ರಕ್ಕೆ ಕರೆತಂದು ಮದುವೆಯಾಗುತ್ತಾನೆ. ಶ್ರೀಶೈಲ ಪಾರ್ವತಿಯ ತವರುಮನೆ, ಮುಡುಕುತೊರೆ ಗಂಡನಮನೆ ಎನಿಸುತ್ತದೆ. ಈ ಶಿವ-ಪಾರ್ವತಿಯರ ಮದುವೆ ಆಚರಣೆಗಳು ಮುಡುಕುತೊರೆಯಲ್ಲಿ 15 ದಿನಗಳ ಜಾತ್ರೆಯಾಗಿ ಅಭಿನಯಿಸಲ್ಪಡುತ್ತದೆ. ಇದನ್ನೇ ಗಿರಿಜಾ ಕಲ್ಯಾಣ ಹೆಸರಿನಲ್ಲಿ ಜನಪದರು ಮೌಖಿಕ ಕಥನವಾಗಿ ಹಾಡುತ್ತಾರೆ.

ಮಲ್ಲಯ್ಯ, ಮಲ್ಲಿಕಾರ್ಜುನ ಎನಿಸುವ ಶಿವನಿಗೂ ಗಿರಿಜೆ, ಭ್ರಮರಾಂಬ ಅಮ್ಮನವರು ಎನಿಸುವ ಪಾರ್ವತಿಗೂ ಜಾತ್ರೆ ಮೂಲಕ ಮುಡುಕುತೊರೆಯಲ್ಲಿ ಗಿರಿಜಾ ಕಲ್ಯಾಣ ಜರುಗಿದ ಮೇಲೇನೆ ಜನಸಾಮಾನ್ಯರ ಮದುವೆ ಕಾರ್ಯಗಳು ಶುರುವಾಗುವುದು. ಚಪ್ಪರ ಶಾಸ್ತ್ರದಿಂದ ಹಿಡಿದು, ಕಂಕಣಧಾರಣೆ, ಮಾಂಗಲ್ಯಧಾರಣೆ, ಧಾರೆ, ಬೀಗರ ಪದ ಒಳಗೊಂಡು ಸೋಬನದ ತನಕ ಮದುವೆಯ ಪ್ರತಿ ಶಾಸ್ತ್ರವನ್ನು ಕುರಿತು ನಾವು ಕಟ್ಟಿ ಹಾಡುವುದೇ ಸೋಬಾನೆ ಪದಗಳು ಅಥವಾ ಗಿರಿಜಾಕಲ್ಯಾಣ ಎಂಬ ಸಂಸ್ಕೃತಿ ಕಥನವಾಗಿದೆ ಎನ್ನುತ್ತಾರೆ ಕೊಳ್ಳೇಗಾಲದ ಭೀಮನಗರದ ಸೋಬಾನೆ ಕಲಾವಿದೆ ನಿಂಗರಾಜಮ್ಮ.

ಮುಡುಕುತೊರೆ ಮಲ್ಲಯ್ಯನ ಜನಪದ ಕಾವ್ಯ, ಗಿರಿಜಾಕಲ್ಯಾಣವೆಂಬ ಸಂಸ್ಕೃತಿ ಕಥನ, ಗೊರವರ ಕುಣಿತ ಎಂಬ ಕಲಾಪ್ರಕಾರ, ಗೊರವರು - ಪಾರ್ವತಿ ಗುಡ್ಡರು ಎಂಬ ಶೈವ ಪಂಥ ಇವೆಲ್ಲವೂ ಕರ್ನಾಟಕ ಜಾನಪದ ಮಹಾಕಾವ್ಯ, ಸಾಹಿತ್ಯ, ಸಂಸ್ಕೃತಿ, ಕನ್ನಡ ಶೈವ ಪಂಥ ಪರಂಪರೆಗಳ ಒಂದು ಭಾಗ ಎಂಬುದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂತಹ ಒಂದು ಸಾಂಸ್ಕೃತಿಕ ಲೋಕದ ಮೂಲನೆಲೆಯಾಗಿರುವ ಮುಡುಕುತೊರೆ ಕೂಡ ಅಲಕ್ಷ್ಯಕ್ಕೆ ಒಳಗಾದಂತಿದೆ. ಗೊರವರು- ಪಾರ್ವತಿ ಗುಡ್ಡರು ಎಂಬ ಮಲ್ಲಯ್ಯ ಪಾರ್ವತಿ ಒಕ್ಕಲುಗಳು ಈ ಕ್ಷೇತ್ರ ಮತ್ತು ಪರಂಪರೆಯ ವಾರಸುದಾರರು.

ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ 15 ದಿನಗಳ ಮುಡುಕುತೊರೆ ಜಾತ್ರೆ ನಡೆಯುತ್ತದೆ. ಜಾತ್ರೆಯ 7ನೇ ದಿನ ಶಿವಪಾರ್ವತಿ ಕಲ್ಯಾಣ ನಡೆದು, 8ನೇ ದಿನಕ್ಕೆ ದೊಡ್ಡ ತೇರು ಅಥವಾ ಬ್ರಹ್ಮರಥೋತ್ಸವ ಜರುಗುತ್ತದೆ. ಬೆಟ್ಟದ ಮೇಲಿನ ದೇವಾಲಯದಿಂದ ಶಿವ-ಪಾರ್ವತಿ ಉತ್ಸವ ಮೂರ್ತಿಗಳನ್ನು ಕೆಳಕ್ಕೆ ತಂದು ಬೆಟ್ಟದ ತಪ್ಪಲಲ್ಲಿ ರಥದ ಮೇಲಿರಿಸಿ ರಥೋತ್ಸವ ನಡೆಸಲಾಗುವುದು. ಶಿವ-ಪಾರ್ವತಿಯ ಮದುವೆ ದಿಬ್ಬಣವೇ ರಥೋತ್ಸವ. ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳ ಹಾಗೂ ಚಾಮರಾಜನಗರ, ಮೈಸೂರು ಜಿಲ್ಲೆಗಳ ವಿವಿಧ ಸಮುದಾಯಗಳು ಜಾತ್ರೆಯ ಬಾಬುದಾರಿಕೆಗಳನ್ನು ಹೊಂದಿವೆ. ಕ್ಷೇತ್ರದ ದೇವಾಲಯ ಪೂಜೆ ಮುಡುಕುತೊರೆ ಶಿವಾರ್ಚಕರಿಗೆ ಸೇರಿದ್ದು. ಉತ್ಸವ ಮೂರ್ತಿಗಳನ್ನು ಗಿರಿಯಿಂದ ಇಳಿಸಿ ಹೊತ್ತು ಮೆರೆಸುವುದು ಕುರುಬಾಳುಂಡಿ, ಕಾಳಬಸವನಹುಂಡಿ ಹಾಲುಮತದ ಕುರುಬರಿಗೆ ಸೇರಿದ್ದು. ತೇರು ಕಟ್ಟುವುದು, ರಥೋತ್ಸವ ನಡೆಸುವುದು ಅಯ್ಯನವರಹುಂಡಿ ಶೆಟ್ಟರು, ಭಗೀರಥ ಉಪ್ಪಾರ ಸಮುದಾಯಕ್ಕೆ ಸೇರಿದ್ದು ಎಂದು ಹೇಳುತ್ತಾರೆ ದೇವಾಲಯದ ಆಗಮಿಕರಾದ ತಲಕಾಡು ಕೃಷ್ಣದೀಕ್ಷಿತರು.

ತೆಪ್ಪತೇರು ಎಂಬ ಜಲಕ್ರೀಡೆ

ಜಾತ್ರೆಯ 11ನೇ ದಿನ ತೆಪ್ಪತೇರು ಎಂಬ ವಿಶೇಷ ಜಾತ್ರೆ ನಡೆಯುತ್ತದೆ. ಬಿದಿರಿನಿಂದ 15–20 ಅಡಿ ಎತ್ತರದ ತೇರಿನ ಆಕೃತಿಯನ್ನು ಕಟ್ಟಲಾಗುತ್ತದೆ. ಅದನ್ನು ಬೊಂಬಿನಿಂದ ನಿರ್ಮಿಸಿದ ತೆಪ್ಪದ ಮೇಲಿಟ್ಟು ಶಿವಪಾರ್ವತಿ ಉತ್ಸವ ಮೂರ್ತಿಗಳನ್ನು ತೇರಿನಾಕೃತಿಯ ಒಳಗಿಟ್ಟು ಮಧ್ಯರಾತ್ರಿ ದೀಪಾಲಂಕಾರದ ನಡುವೆ ಕಾವೇರಿ ನದಿಯೊಳಗೆ ತೆಪ್ಪೋತ್ಸವ ನಡೆಸಲಾಗುವುದು. ಇದು ತೆಪ್ಪತೇರೆಂದು ಪ್ರಸಿದ್ಧಿ. ಇದು ನವ ವಧು-ವರರ ಜಲಕ್ರೀಡೆ ಎನ್ನಲಾಗುತ್ತದೆ. ಈ ತೆಪ್ಪತೇರು ಮಾಡಿಕೊಡುವುದು ಪಕ್ಕದ ಮಾವಿನಹಳ್ಳಿ ಗ್ರಾಮಸ್ಥರಿಗೆ ಸೇರಿದ್ದು. ತೇರು ಕಟ್ಟುವ ಕೆಲಸ ಕಮರವಾಡಿಯ ಜನರದು. ದೊಡ್ಡತೇರು, ತೆಪ್ಪತೇರುಗಳ ಅವಧಿಯಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳ ಕಡೆಯಿಂದ ಅಪಾರ ಸಂಖ್ಯೆಯ ದನಗಳ ಪರಿಷೆ ಇಲ್ಲಿ ಸೇರುತ್ತದೆ. ಲಕ್ಷಾಂತರ ರೂಪಾಯಿಗೆ ಜೋಡೆತ್ತುಗಳ ವ್ಯಾಪಾರದ ಭರಾಟೆ ಜೋರಿರುತ್ತದೆ. ಮುಡುಕುತೊರೆ ಜಾತ್ರೆ ದನಗಳ ಜಾತ್ರೆಗೂ ಹೆಸರುವಾಸಿ.

ಆಂಧ್ರದ ಶ್ರೀಶೈಲಕ್ಕೆ ಕನ್ನಡಿಗರ ದಿಬ್ಬಣ

ಹದಿನೈದು ದಿನಗಳ ಜಾತ್ರೆ ಮುಗಿದು ಶಿವರಾತ್ರಿಯಾದ ಸೋಮವಾರ/ ಶುಕ್ರವಾರ ಪರ್ವತ ಪರಿಷೆ ಎಂಬ ಆಚರಣೆ ಜರುಗುತ್ತದೆ. ಮದುವೆಯಾದ ಪಾರ್ವತಿ ತವರುಮನೆ ಶ್ರೀಶೈಲಕ್ಕೆ ಬಸವನ ಮೇಲೆ ಹೋಗುವುದೆ ಪರ್ವತ ಪರಿಷೆ. ಶ್ರೀಶೈಲಕ್ಕೆ ಪಾರ್ವತಿ ಕರೆದೊಯ್ಯುವ ಬಸವನನ್ನು ಆಯ್ಕೆ ಮಾಡಲು ಮಾಲೆ ಎಂಬ ಸ್ಪರ್ಧೆ ನಡೆಸಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಆಯ್ದ ಗ್ರಾಮಗಳಿಂದ 15–20 ಬಸವಗಳು ಕ್ಷೇತ್ರಕ್ಕೆ ಹಾಜರಾಗುತ್ತವೆ. ನದಿತಟದಿಂದ ಉತ್ಸವ ಮಂಟಪಕ್ಕೆ ಸ್ಪರ್ಧೆಯಲ್ಲಿ ಗೆದ್ದು ಬರುವ ಬಸವನಿಗೆ ಹೂಮಾಲೆ ಹಾಕಿ ಆಯ್ಕೆ ಮಾಡಲಾಗುತ್ತದೆ. ಈ ಬಾಬುದಾರಿಕೆ ವೀರಶೈವ ಲಿಂಗಾಯತರದು.

ಶ್ರೀಶೈಲಕ್ಕೆ ಹೋಗುವ ಪರ್ವತ ಪರಿಷೆಯಲ್ಲಿ ಮುಡುಕುತೊರೆ ಬೆಟ್ಟದ ಸುತ್ತಮುತ್ತಲ ಬೆಟ್ಟಳ್ಳಿ, ಕುರುಬಾಳುಂ⇒ಡಿ, ಕಾಳಬಸವನಹುಂಡಿ, ಚಾಮರಾಜನಗರ ಕೊಳ್ಳೇಗಾಲ ತಾಲ್ಲೂಕಿನ ಗ್ರಾಮಗಳ ದಲಿತರಲ್ಲಿನ ಬಲಗೈನವರು, ಕುರುಬರು, ವೀರಶೈವ ಲಿಂಗಾಯತರು ಇರುತ್ತಾರೆ. ಇವರನ್ನು ದಬಾಣದವರು (ದಿಬ್ಬಣದವರು), ಕಂಬಿಯವರು ಎನ್ನುತ್ತಾರೆ. ಇವರೆಲ್ಲಾ ಮಲ್ಲಯ್ಯ ಪಾರ್ವತಿ ಒಕ್ಕಲಿನ ಗೊರವರು, ಪಾರ್ವತಿ ಗುಡ್ಡರಾಗಿರುತ್ತಾರೆ. ಬೆಟ್ಟಳ್ಳಿ ಬಲಗೈ ದಲಿತರು ಏಲಕ್ಕಿ, ಮೆಣಸಿನಕಾಯಿ ಪಲಾಹಾರದ ವ್ರತದಲ್ಲಿ ತೆರಳುತ್ತಾರೆ. ಶಿವರಾತ್ರಿ ಮಾರನೆಗೆ ಹೊರಡುವ ಇವರು ಬೆಂಗಳೂರು-ನಂದಿಯಾಲ ಮಾರ್ಗ ಶ್ರೀಶೈಲಕ್ಕೆ ರೈಲಿನ ಮೂಲಕ ಯುಗಾದಿಗೆ ಸರಿಯಾಗಿ ತಲುಪುತ್ತಾರೆ. ಯುಗಾದಿ ದಿನ ಅಲ್ಲಿ ಶಿವಪಾರ್ವತಿಗೆ ಪೂಜೆ ಸಲ್ಲಿಸಿ ವ್ರತ ಕೈ ಬಿಡುತ್ತಾರೆ.

ಬಟ್ಟಲಪೂಜೆ

ಇದೇ 2016 ಮೇ 3ರಂದು ಮುಡುಕುತೊರೆಯಲ್ಲಿ ಬಟ್ಟಲಪೂಜೆಯೆಂಬ ವಿಶಿಷ್ಟ ಆಚರಣೆ ಜರಗುತ್ತದೆ. ಹೊಸ ವರ್ಷದೊಂದಿಗೆ ಶುರುವಾಗುವ 15 ದಿನಗಳ ಮುಡುಕುತೊರೆ ಗಿರಿಜಾಕಲ್ಯಾಣದ ಜಾತ್ರೆ ಬಟ್ಟಲಪೂಜೆಯೊಂದಿಗೆ ಮುಗಿಯುತ್ತದೆ. ಶ್ರೀಶೈಲದಿಂದ ಹಿಂದಿರುಗಿ ಬಂದ ದಿಬ್ಬಣದ ಗೊರವರು, ಗುಡ್ಡರು ಪಾರ್ವತಿ ಸಮೇತ ಬಸವನ ಜತೆ ಕ್ಷೇತ್ರಕ್ಕೆ ಪ್ರವೇಶಿಸುವಾಗ ಒಕ್ಕಲಿನವರು ಹಾಗೂ ಭಕ್ತಾದಿಗಳಿಗೆ ಜಾತ್ರೆಯ ಸಂಭ್ರಮ. ಶ್ರೀಶೈಲಕ್ಕೆ ಹೋಗಿ ಬಂದ ಗೊರವರು, ಗುಡ್ಡರನ್ನು ಕರೆದು ಒಕ್ಕಲಿನ ಮಹಿಳಾ ಭಕ್ತರು, ಹರಕೆ ಹೊತ್ತ ಗೃಹಿಣಿಯರು ಪಾದಪೂಜೆ ಮಾಡಿ ಅವರನ್ನು ಕೂರಿಸಿ ಅವರ ಬಟ್ಟಲಿಗೆ ಕಜ್ಜಾಯ-ತುಪ್ಪ, ಸಕ್ಕರೆ-ಬಾಳೆಹಣ್ಣು ಉಣಬಡಿಸಿ ಸತ್ಕರಿಸುತ್ತಾರೆ.

ಇದೇ ಬಟ್ಟಲಪೂಜೆ. ಗಮನಾರ್ಹವೆಂದರೆ ಇಂದಿಗೂ ಗೊರವ ಗುಡ್ಡರು ಉಣ್ಣಲು ಬಳಸುವುದು ಮಣ್ಣಿನ ಬಟ್ಟಲು. ಈ ಬಟ್ಟಲುಗಳ ಮಧ್ಯೆ ಲಿಂಗ, ಕಳಶದ ಸಣ್ಣ ಆಕೃತಿಗಳಿರುತ್ತವೆ. ಕೆಲವು ಬಟ್ಟಲು ಊಟದ ತಟ್ಟೆ, ಶಿವನ ಕಪಾಲ, ಬೌದ್ಧರ ಪಿಂಡಪಾತಗಳ ಮಾದರಿಯಲ್ಲಿರುತ್ತವೆ. ಈ ಬಟ್ಟಲುಪೂಜೆ ಸ್ವೀಕರಿಸುವ ಗುಡ್ಡರಲ್ಲಿ ಮತ್ತು ಕೊಡುವ ಮಹಿಳೆಯರಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲರೂ ಭಾಗವಹಿಸುತ್ತಾರೆ. ಇದೇ ದಿನ ಜಾತ್ರೆಗೆ ಬರುವ ಮಹಿಳೆಯರು ಐದು ಜನ ಮುತ್ತೈದೆಯರನ್ನು ಕಲೆಹಾಕಿ ಅವರ ಪಾದಪೂಜೆ ಮಾಡುವ ಸಂಪ್ರದಾಯವಿದೆ. ಇದು ಮುತ್ತೈದೆ ಪೂಜೆ ಎಂದು ಕರೆಯಲ್ಪಡುತ್ತದೆ. ಶಿವ ಗೊರವಯ್ಯನ ವೇಷದಲ್ಲಿ ಭಿಕ್ಷೆಗೆ ಹೋದದ್ದು, ಶಿವನಿಗೆ ಪಾರ್ವತಿ ಭಿಕ್ಷೆಯ ನೀಡಿ ಸತ್ಕರಿಸಿದುದು ಬಟ್ಟಲಪೂಜೆಯ ಹಿನ್ನೆಲೆ ಎಂದು, ನವ ವಧು ಪಾರ್ವತಿಯ ಆರಾಧನೆಯೇ ಮುತ್ತೈದೆ ಪೂಜೆಯ ಹಿನ್ನೆಲೆ ಎಂದು ಒಕ್ಕಲಿನವರು ನಂಬುತ್ತಾರೆ.

ಬೆಟ್ಟದ ಮೇಲಿನ ಶೈವ ಕೇಂದ್ರದ ತಪ್ಪಲಿನ ನದಿದಡದ ತೋಪಿನಲ್ಲಿ ನಡೆಯುವ ಈ ಬಟ್ಟಲಪೂಜೆ ಒಂದು ಸಂಕೀರ್ಣ ಆಚರಣೆ. ಇದೇ ದಿನ ಅನೇಕ ಮಹಿಳೆಯರಿಗೆ ಗುಡ್ಡರು ಪಿಂಡಪ್ರಸಾದ ಕೊಡುವ ಪದ್ಧತಿ ಗಮನಾರ್ಹ. ಶ್ರೀ ಶೈಲ ಮತ್ತು ಮುಡುಕುತೊರೆ ಶೈವ ಕೇಂದ್ರಗಳು ಕಾಲದಿಂದ ಕಾಲಕ್ಕೆ ನಿಗೂಢ ಪಂಥ ಪರಂಪರೆಗಳ ತಾಣಗಳಾಗಿದ್ದ ಬಗ್ಗೆ ಮಾಹಿತಿಗಳಿವೆ. ಕಾಪಾಲಿಕರು, ಪಾಶುಪಥರು, ನಾಥಸಿದ್ಧರು, ವಚನಕಾರ ಶರಣರು, ಬೌದ್ಧಸಿದ್ಧರು ಮೊದಲಾದ ತಾಂತ್ರಿಕರ ತಾಣಗಳು ಇವಾಗಿದ್ದವು. ಹಾಗಾಗಿ ತಾಂತ್ರಿಕರ ಆಚರಣೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಟ್ಟಲಪೂಜೆ, ಮುತ್ತೈದೆಪೂಜೆಗಳನ್ನು ಅವಲೋಕಿಸಬಹುದು.

ಈ ಜಾತ್ರೆ ಮತ್ತು ಆಚರಣೆಗಳು ಜಾತ್ಯತೀತ, ಸೌಹಾರ್ದ, ಸಹಬಾಳ್ವೆ ಬೆಳೆಸುವಂತಹವಾಗಿವೆ. ಬಹುಪಾಲು ದೇಸಿ ತಳಸಮುದಾಯಗಳ ಪರಂಪರೆ ಇದಾಗಿದ್ದು ಅಶುಚಿತ್ವದ ನಡುವೆ ನಡೆಯುತ್ತಿವೆ. ತಾತ್ಸಾರಕ್ಕೆ ಒಳಗಾಗಿ ಕೀಳರಿಮೆಯಿಂದ ಅಳಿದುಹೋಗುವ ಅಪಾಯದಲ್ಲಿರುವ ಈ ಸಂಸ್ಕೃತಿಯ ಕಾಯಕಲ್ಪಕ್ಕಾಗಿ, ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ನೀಲಗಾರರು, ಕಂಸಾಳೆ ಗುಡ್ಡರು, ಗೊರವರು, ಪಾರ್ವತಿ ಗುಡ್ಡರ ಮಹಾಸಂಘವನ್ನು ಹುಟ್ಟು ಹಾಕಲಾಗಿದೆ ಎನ್ನುತ್ತಾರೆ ಮುಳ್ಳೂರು ರಾಜಣ್ಣ.

ಬಟ್ಟಲ ಪೂಜೆಯಂತಹ ಜಾತ್ರೆಯ ವಿವಿಧ ಆಚರಣೆಗಳನ್ನು ನಡೆಸಲು ಭಕ್ತಾದಿಗಳ ಅನುಕೂಲಕ್ಕೆ ಕಟ್ಟಡಗಳ ನಿರ್ಮಾಣ, ಸ್ನಾನಗೃಹ, ಕುಡಿಯುವ ನೀರು, ವಸತಿ ಗೃಹ ಮೊದಲಾದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಡುಕುತೊರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೂ ಒತ್ತಾಯ ಕೇಳಿಬರುತ್ತಿದೆ

ಮುಡುಕುತೊರೆಗೆ ಸೋಮಗಿರಿ, ಸೋಮಶೈಲ ಎಂಬ ಹೆಸರಿವೆ. ಶಿವ ಇಲ್ಲಿ ಲಿಂಗ ರೂಪದಲ್ಲಿ ಉದ್ಭವಿಸಿದ. ಕಪಿಲ ಮಹರ್ಷಿ ಶತಮಾನಗಳ ಹಿಂದೆ ಇಲ್ಲಿ ಮಹಾಶಕ್ತಿ ಮೂರ್ತಿ ಸ್ಥಾಪಿಸಿ ಅದಕ್ಕೆ ಭ್ರಮರಾಂಬ ಎಂದು ಹೆಸರಿಟ್ಟರು. ಆದ್ದರಿಂದ ಇದು ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಕ್ಷೇತ್ರ ಎನಿಸಿದೆ.

ಈ ಬೆಟ್ಟದ ಪೂರ್ವಕ್ಕೆ ಕಪಿಲ ಮಹರ್ಷಿ ಆಶ್ರಮ ಇತ್ತು ನಾಡಗೌಡರ ಮನೆಯ ಕಪಿಲೆ ಎಂಬ ಹಸು ದಿನನಿತ್ಯ ಶಿವಲಿಂಗದ ಮೇಲೆ ಸ್ವಯಂಪ್ರೇರಿತ ಹಾಲುಗರೆಯುತ್ತಿತ್ತು. ಒಮ್ಮೆ ಕಪಿಲೆ ಹಸು ಘಾಸಿಗೊಂಡು ಶಿವಲಿಂಗದ ಮೇಲೆ ತನ್ನ ಪಾದ ಊರಿದ ಗುರುತು ಇಂದಿಗೂ ಲಿಂಗದ ಮೇಲಿರುವುದಾಗಿ ಐತಿಹ್ಯವಿದೆ. ಕಾವೇರಿ ನದಿ ಮುಡುಕುತೊರೆ ಬೆಟ್ಟದ ಬಳಿ ಪಶ್ಚಿಮಕ್ಕೆ ತನ್ನ ಪಾತ್ರ ಬದಲಿಸುತ್ತದೆ. ತೊರೆ ಮುರಿದು ಮುಂದೆ ಸಾಗಿದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ಮುರಿದ ತೊರೆ ಮುಡುಕುತೊರೆ ಎಂಬುದಾಗಿ ಹೆಸರು ಚಾಲ್ತಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT