ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲೋಕೆ ನಿಕ್ಕರ್, ಗೆಲ್ಲೋಕೆ ಕುಕ್ಕರ್!.. ಮತದಾರರನ್ನೂ ಮೂರ್ಖರನ್ನಾಗಿಸುವ ಹಬ್ಬ

Last Updated 25 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಮೂರ್ಖರ ದಿನ ಮತ್ತೆ ಬಂದಿದೆ. ಮತದಾರರನ್ನೂ ಮೂರ್ಖರನ್ನಾಗಿಸುವ ಹಬ್ಬವನ್ನೂ ಕರೆತಂದಿದೆ.

ಬಾಗಿಲು ಸದ್ದಾದಾಗ ವಿಶ್ವ ತನ್ನ ಗೆಳೆಯ ಮೋಹನನ ಜೊತೆ ಹರಟುತ್ತಿದ್ದ.

‘ರೀ, ಮೋಹನ್ ಜೊತೆ ಹರಟೆ ಸಾಕು. ಯಾರೋ ಬಾಗಿಲು ಬಡೀತಾ ಇದ್ದಾರೆ ತೆಗೀರಿ’ ಎಂದಳು ಮಡದಿ ವಿಶಾಲು.
‘ಬಡಿಯೋರು ನಿಮ್ಮ ಪೈಕೀನೇ ಇರ್ತಾರೆ, ನೀನೇ ತೆಗೀ’ ಎಂದು ವಿಶ್ವ ರೇಗಿದ.

‘ಈ ಮಟಮಟ ಮಧ್ಯಾಹ್ನ ದೆವ್ವ ಕುಣಿಯೋ ಹೊತ್ತಲ್ಲಿ ನಮ್ಮ ಬಂಧುಗಳು ಬರೊಲ್ಲ. ನಾನು ಬಾಗಿಲು ತೆಗೆಯೊಲ್ಲ’ ಎಂದು ವಿಶಾಲು ಹಟ ಮಾಡಿದಳು.

‘ಮುಂಬಾಗಿಲು ಕಿತ್ತು ಹಿಂಬಾಗಿಲು ಮಾಡಿಸ್ತೀನಿ. ಆಗ ಏನು ಬಡೀತಾರೆ ?’ ಎಂದ ವಿಶ್ವ.

ಬಾಗಿಲ ಶಬ್ದ ಜಾಸ್ತಿ ಆಯ್ತು.

‘ಕಿತ್ತು ಬಂದ್ರೆ ಕಷ್ಟ, ನಾನೇ ಹೋಗಿ ನೋಡ್ತೀನಿ, ನಿಮಗಂತೂ ಜವಾಬ್ದಾರಿ ಇಲ್ಲ’

ಗೊಣಗುತ್ತಾ ವಿಶಾಲು ಹೋಗಿ ಬಾಗಿಲನ್ನು ತೆಗೆದಳು. ಬಾವುಟಗಳನ್ನು ಹಿಡಿದಿದ್ದ ಇಪ್ಪತ್ತು ಜನ ನಿಂತಿದ್ದರು. ಯಾವುದೋ ಪಾರ್ಟಿಯಿಂದ ಮತಬೇಟೆಗೆ ಬಂದಿದ್ದರು. ಎಲ್ಲರೂ ಭಕ್ತಿಯಿಂದ ಅಣ್ಣಮ್ಮನ ಗುಡಿ ಟೈಪಲ್ಲಿ ನಮಸ್ಕಾರ ಮಾಡಿದರು. ಗುಂಪಿನ ನಾಯಕನೊಬ್ಬ ತುಂಬಾ ಕಾಳಜಿ ತೋರಿಸಿದ.

‘ನಮಸ್ಕಾರ ವಿಶಾಲು ಅವರೇ, ತಾವು ನಮ್ಮ ಕ್ಷೇತ್ರದಲ್ಲಿರೋದು ಈ ಏರಿಯಾಗೇ ಭೂಷಣ’ ಎಂದ.

‘ಓಹ್! ಏನು ಎಲ್ಲಾ ಬಾವುಟಗಳು ಹಿಡ್ಕೊಂಡು ಬಂದಿದ್ದೀರ. ಐದು ವರ್ಷಗಳಿಂದ ಯಾರೂ ಬಂದಿರಲಿಲ್ಲ?’ ಎನ್ನುತ್ತಾ ವಿಶ್ವ ಬಂದು ಬಾಗಿಲ ಬಳಿ ನಿಂತ. ಅವನ ಹಿಂದೆ ಮೋಹನ್ ಸಹ ಬಂದ. ಈ ಮನೆಯಲ್ಲಿ ಮೂರು ಓಟಿದೆ ಎಂದು ತಿಳಿದ ಪಾರ್ಟಿ ಜನರಿಗೆ ಖುಷಿಯಾಯ್ತು. ಪ್ರತಿಯೊಬ್ಬರಿಗೂ ಬೇರೆ ಬೇರೆ ನಮಸ್ಕಾರಗಳು ಬಿದ್ದವು.

ಬ್ರಹ್ಮಕಮಲ 12 ವರ್ಷಕ್ಕೆ ಒಮ್ಮೆ ಅರಳುತ್ತೆ. ರಾಜಕಾರಣಿಗಳು 5 ವರ್ಷಕ್ಕೆ ಒಮ್ಮೆ ಕೆರಳ್ತಾರೆ ಎಂದುಕೊಂಡ ವಿಶ್ವ.

‘ನಮಸ್ಕಾರ ಸಾರ್, ನೀವು ಸಿಕ್ಕಿದ್ದು ಮೊಸರನ್ನದಲ್ಲಿ ಗೋಡಂಬಿ ಸಿಕ್ಕಂತಾಯ್ತು. ಭಾನುವಾರದ ಮಧ್ಯಾಹ್ನ ಊಟ ಮಾಡಿ ಮನೇಲೇ ಇರ್ತೀರ ಅಂತ ಗೊತ್ತಾಯ್ತು. ಅದಕ್ಕೆ ನಿಮ್ಗೆ ನಮಸ್ಕಾರ ಹಾಕೋಣ ಅಂತ ಬಂದ್ವಿ’ ಎಂದು ಲೀಡರ್ ಹೇಳಿದ.
‘ಏನಾಗ್ಬೇಕಾಗಿತ್ತು ನಮ್ಮಿಂದ?’ ವಿಶಾಲು ವಿಷಯಕ್ಕೆ ಬಂದಳು.

‘ಮೇಡಂ, ನಿಮ್ಮ ಮನೆಯ ಕುಕ್ಕರ್ ಸೈಜ್, ನಿಮ್ಮೆಜಮಾನರ ನಿಕ್ಕರ್ ಸೈಜ್ ಬೇಕಿತ್ತು’ ಎಂದ ನಾಯಕ.

ವಿಶಾಲು ಗೊಳ್ಳನೆ ನಕ್ಕಳು. ನಮ್ಮೆಜಮಾನರ ನಿಕ್ಕರ್ ಸೈಜ್ ನನಗೇ ಗೊತ್ತಿಲ್ವಲ್ಲ ಎನ್ನಿಸಿತು. ವಿಶ್ವನ ಮುಖ ನೋಡಿದಳು.

‘ಲೇ, ಮದ್ವೆ ಆಗಿ ಇಷ್ಟು ವರ್ಷ ಆಗಿದೆ. ಗಂಡನ ನಿಕ್ಕರ್ ಸೈಜ್ ಗೊತ್ತಿಲ್ಲ ಅಂದ್ರೆ ಹೇಗೆ? ಈ ವಿಷಯ ನಾಳೆ ಪೇಪರಲ್ಲಿ ಬಂದ್ಬಿಡುತ್ತೆ’ ಎಂದು ವಿಶ್ವ ಮೆಲ್ಲನೆ ಎಚ್ಚರಿಸಿದ. ‘ರೀ, ನಿಕ್ಕರ್‍ಗೆ ಸೈಜ್ ಇರುತ್ತೇನ್ರೀ ?’ ಎಂದು ವಿಶಾಲೂ ಕೇಳಿದಾಗ ನಾಯಕ ತಿದ್ದುಪಡಿಯನ್ನು ಕೊಟ್ಟ.

‘ಹೌದು ಮೇಡಂ, ನಾವು ಲಾಡಿ ಹಾಕೋ ನಿಕ್ಕರು, ಬೀಡಿ ಇಡೋ ನಿಕ್ಕರ್ ಕೊಡೊಲ್ಲ. ಅದು ಹಳೇ ಫ್ಯಾಷನ್. ನಮ್ಮ ನಿಕ್ಕರ್‍ಗೆ ಬೆಲ್ಟ್ ಇರುತ್ತೆ. ಆ ಬೆಲ್ಟಲ್ಲಿ ಮೊಬೈಲ್ ಸಿಕ್ಕಿಸಿಕೊಳ್ಳೋಕೆ, ಪೆನ್ ಇಟ್ಕೊಳ್ಳೋಕೆ, ಬೇಕಾದ್ದೆಲ್ಲ ತುಂಬ್ಸೋಕೆ ಅಂಗಡಿಯಿಂದ ದಿನಸಿ ತರೋಕೆ ದೊಡ್ಡ ಜೇಬುಗಳು ಇರುತ್ವೆ, ಬ್ಯಾಗ್ ಬೇಕಾಗೊಲ್ಲ’ ಎಂದು ನಾಯಕ ಹೊಗಳಿದ.

ಅಷ್ಟರಲ್ಲಿ ಶಿಷ್ಯನೊಬ್ಬ ವಿಶ್ವ ಹಾಗೂ ಮೋಹನ ಇಬ್ಬರ ಸೊಂಟದ ಅಳತೆಯನ್ನು ತೆಗೆದುಕೊಂಡ. ‘ಅಯ್ಯೋ! ನನ್ನ ಸೊಂಟದ ಅಳತೆ ಯಾಕೆ?’ ಎಂದ ಮೋಹನ.

‘ತೆಪ್ಪಗೆ ನಿಂತ್ಕೋ ಮೋಹನ. ತೆಪ್ಪೋತ್ಸವ ನಡೆಯೋವಾಗ ತೆಪ್ಪಗೆ ಕೈ ಮುಗಿದರೆ ಬಾಳೆಹಣ್ಣು ಸಿಗುತ್ತೆ’ ಎಂದ ವಿಶ್ವ. ಕುಕ್ಕರ್ ಬಗ್ಗೆ ವಿಶಾಲೂ ಹೇಳಿದಳು.

‘ಹನ್ನೆರಡು ಲೀಟರ್ ಕುಕ್ಕರ್ ತಗೋಬೇಕು ಅಂತ ಇದ್ದೆ’ ಎಂದು ಇಂಡೆಂಟ್ ಹಾಕಿದಳು. ‘ನೀವು ಕೊಡೋ ಕುಕ್ಕರ್ ಶಿಳ್ಳೆ ಹೊಡೆಯುತ್ತಾ?’

‘ಮೇಡಂ, ಶಿಳ್ಳೆ ಹೊಡೆಯೊಲ್ಲ. ಗೋವಿಂದಾ ಗೋವಿಂದಾ ಅಂತ ಮ್ಯೂಸಿಕ್ ಹೇಳುತ್ತೆ. ಹೊಸ ಟೈಪು!’

‘ಗೋವಿಂದಾನೇ ಇರ್ಲಿ ಚೆನ್ನಾಗಿರುತ್ತೆ’ ಎಂದು ವಿಶಾಲೂ ಒಪ್ಪಿದಾಗ ವಿಶ್ವನ ಅನುಮಾನ ಜಾಸ್ತಿ ಆಯ್ತು.

‘ನಾವು ನಿಮಗೆ ಗುರುತಿಲ್ಲ, ಪರಿಚಯ ಇಲ್ಲ. ಇದೆಲ್ಲ ಯಾಕೆ?’ ಎಂದ ವಿಶ್ವ.

‘ನಿಮ್ಮ ಮನೆಯಲ್ಲಿರೋ ಎಲ್ಲಾ ಓಟುಗಳೂ ನಮ್ಮ ಪಕ್ಷಕ್ಕೆ ಬೀಳ್ಬೇಕು. ಈ ಮೊದಲು ಯಾರೂ ನಮ್ಮ ಟೈಪ್ ರಾಜ್ಯಭಾರ ಮಾಡಿರೊಲ್ಲ ಸಾರ್. 3ನೇ ಪುಟಕ್ಕೆ... ಮೈಸೂರು ಮಹಾರಾಜರು ಬಿಟ್ಮೇಲೆ ನಾವೇ ಈಗ. ನಮಗೊಂದು ಅವಕಾಶ ನೀವು ಕೊಡ್ಬೇಕು’ ಎಂದು ಕಾಲಿಗೆ ಬಿದ್ದ. ‘ಬಿಡೆನು ನಿನ್ನ ಪಾದ’ ಹಾಡಿದ.

‘ಬದಲಾವಣೆ ಜಗದ ನಿಯಮ. ಅವಕಾಶ ಕೊಡೋಣ’ ಎಂದು ಮೋಹನ ಸಮರ್ಥಿಸಿದ. ಯಾಕೆಂದರೆ ಅವನ ಸೊಂಟದ ಅಳತೆಯನ್ನು ಕೂಡ ತೆಗೆದಿದ್ದರು.

‘ಕುಕ್ಕರ್ರು ನಿಕ್ಕರ್ರು ಕೊಡ್ತಾ ಇದ್ದೀವಿ. ಸ್ವೀಕರಿಸಬೇಕು. ಓಟು ಕೊಡ್ತೀವಿ ಅಂತ ದಯವಿಟ್ಟು ಪ್ರಮಾಣ ಮಾಡಿದ್ರೆ ಸಾಕು’
ಒಂದು ದೇವರ ಫೋಟೊವನ್ನು ನಾಯಕ ಕೈಲಿ ಹಿಡಿದು ಪ್ರಮಾಣ ಮಾಡಿಸಿಕೊಂಡ.

‘ನಿಮಗೇ ಹಾಕ್ತೀವಿ’ ಎಂದು ವಿಶ್ವ, ವಿಶಾಲು ಹೇಳಿದರು. ಏನು ಹಾಕ್ತೀವಿ ಅಂತ ಕಮಿಟ್ ಆಗಲಿಲ್ಲ. ಸುಪ್ರೀತನಾದ ನಾಯಕ. ಇನ್ನಷ್ಟು ಲಾಭಗಳ ಬಗ್ಗೆ ಹೇಳಿದ.

‘ಮೇಡಂ, ನಿಮ್ಗೆ ಪ್ರತೀ ತಿಂಗಳೂ ಕಾಸ್ಮೆಟಿಕ್ಸ್‌ಗೆ ಅಂತ ಎರಡು ಸಾವಿರ ರೂಪಾಯಿ ನಾವು ಕೊಡ್ತೀವಿ. ಪೌಡರ್ರು, ಸ್ನೋ, ಲಿಪ್‍ಸ್ಟಿಕ್ಕು ಎಲ್ಲಾ ಖರ್ಚೂ ನಮ್ದೇನೇ’ ವಿಶಾಲೂಗೆ ಖುಷಿಯಾಯ್ತು. ಗಂಡನಿಗಿಂತ ಇವರೇ ಬೆಸ್ಟು ಅಂದುಕೊಂಡಳು.

‘ಒಳ್ಳೇದಾಯ್ತು. ಹೇರ್‍ಪಿನ್‍ಗೂ ಗಂಡನ ಹತ್ರ ಗೋಗರೀಬೇಕಾಗಿತ್ತು. ಇನ್ಮೇಲೆ ಗಂಡ ಬೇಕಾಗೊಲ್ಲ. ಪ್ರತಿ ತಿಂಗಳೂ ಹಣ ಕೊಡೋಕೆ ನೀವೇ ಇರ್ತೀರಾ. ಬಹಳ ಸಂತೋಷ’ ಎಂದು ಬೀಗಿದಳು.

ಒಂದು ಕುಕ್ಕರ್ ಮತ್ತು ಎರಡು ನಿಕ್ಕರನ್ನು ಕೊಟ್ಟರು. ತಮ್ಮ ಬಳಿ ಇದ್ದ ಓಟರ್ಸ್ ಲಿಸ್ಟಲ್ಲಿ ಟಿಕ್ ಮಾಡಲು ಹೆಸರುಗಳನ್ನು ಹುಡುಕಿದರು. ಮೋಹನನ ಓಟು ಮಾತ್ರ ಸಿಗಲಿಲ್ಲ. ‘ನನ್ನ ಓಟು ಮಂಗಳೂರಲ್ಲಿದೆ. ನನ್ನ ಫ್ರೆಂಡನ್ನ ನೋಡೋಕೆ ಬೆಂಗಳೂರಿಗೆ ಬಂದಿದ್ದೆ ಅಷ್ಟೇ’ ಎಂದ ಮೋಹನ.

ನಾಯಕನ ಮುಖದ ಮೇಲೆ ಸಿಟ್ಟು ಕಾಣಿಸಿಕೊಳ್ತು. ಕೊಟ್ಟ ನಿಕ್ಕರ್‍ನ ವಾಪಸ್ ಪಡೆಯುವಂತಿಲ್ಲ. ‘ತೊಟ್ಟ ಬಾಣ ತೊಡಬೇಡ, ಕೊಟ್ಟ ನಿಕ್ಕರ್ ಹಿಂಪಡೆಯಬೇಡ’ ಅಂತ ಗಾದೆ ಇದೆ.

‘ಇರ್ಲಿ ಬಿಡಿ. ಬೆಂಗಳೂರಲ್ಲಿರೋ ನಿಮ್ಮ ಸ್ನೇಹಿತರಿಗೆಲ್ಲ ನಮ್ಮ ಪಾರ್ಟಿ ಬಗ್ಗೆ ಹೇಳಿ. ನಿಕ್ಕರ್‍ನ ನೀವೇ ಇಟ್ಕೋಬಹುದು. ನಿಮ್ದು ಓಟಿಲ್ಲದಿದ್ರೂ ನಿಕ್ಕರ್ ಕೊಡ್ತಾ ಇದ್ದೀವಿ’ ಎಂದು ಹೇಳಿ ಹೊರಟ. ದುರ್ದಾನ ಪಡೆದವರಂತೆ ಎಲ್ಲರೂ ಹಾಲ್‍ಗೆ ಬಂದರು. ವಿಶ್ವ ಏನೋ ತಪ್ಪು ಮಾಡಿದವನಂತೆ ತಲೆ ತಗ್ಗಿಸಿ ಕುಳಿತ. ಯೋಚಿಸಿ ತಲೆ ಕೆಡಿಸಿಕೊಂಡಿದ್ದ ಮೋಹನ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದ.

‘ಅಲ್ವೋ, ಈ ರೀತಿ ಎಲೆಕ್ಷನ್ನುಗಳಲ್ಲಿ ಬಿಟ್ಟಿ ಬಹುಮಾನಗಳು ಕೊಡ್ತಿದ್ರೆ ಕಡೆಗೆ ದೇಶ ಏನಾಗುತ್ತೆ ಗೊತ್ತಾ?’

‘ರೀ, ಎಲ್ಲಿಂದ ಕೊಡ್ತಾರ್ರೀ ಅವರು? ಈ ದುಡ್ಡು ಅವರಿಗೆ ಎಲ್ಲಿ ಸಿಗುತ್ತೆ?’ ಎಂದಳು ವಿಶಾಲು.

‘ನಾವು ಕೊಡೋ ಟ್ಯಾಕ್ಸ್ ದುಡ್ಡಲ್ಲೇ ಅವರು ಗಿಫ್ಟ್ ಕೊಡೋದು. ಇನ್ನೇನು ಸ್ವಂತ ಹಣದಿಂದ ಕೊಡ್ತಾರಾ? ಸಾವಿರ ರೂಪಾಯಿ ಬಂಡವಾಳ ಹಾಕಿದ್ರೆ ಒಂದು ಲಕ್ಷ ದುಡೀಬಹುದು. ಅದು ಕುಕ್ಕರ್ ಸ್ಕೀಮು’

‘ನನಗೆ ಗೊತ್ತೇ ಇರ್ಲಿಲ್ಲ’ ಎಂದು ವಿಶಾಲು ಪೇಚಾಡಿದಳು.

‘ಗಾಳಕ್ಕೆ ಎರೇಹುಳೂನ ಸಿಕ್ಕಿಸ್ತಾರೆ. ಸಿಗೋ ಮೀನು ಸಾವಿರಾರು ರೂಪಾಯಿ ಬೆಲೆ ಬಾಳುತ್ತೆ’ ‘ಇದರಿಂದ ದೇಶಕ್ಕೆ ತೊಂದ್ರೆ ಆಗುತ್ತಾ ?’ ತಾವು ಗೆಲ್ಲಬೇಕು ಅಂತ ಇದೇ ಥರ ‘ಫ್ರೀ ಬೀಸ್’ ಎಲ್ಲರಿಗೂ ಕೊಟ್ರು.
‘ಹೌದು ವಿಶಾಲೂ ಅವರೇ, ಶ್ರೀಲಂಕಾ ಪಾಪರ್ ಆಗಿದ್ದು ಹಾಗೇ. ಶ್ರೀಲಂಕಾದಲ್ಲಿ ಅರಾಜಕತೆ ಕಾಣಿಸಿಕೊಳ್ತು. ಅಲ್ಲಿನ ಪಾರ್ಲಿಮೆಂಟ್‍ಗೆ ನುಗ್ಗಿದ ಜನ ದಾಂಧಲೆ ಮಾಡಿದರು. ಅಲ್ಲಿ ಇವತ್ತು ತಿನ್ನೋಕೆ ಹಿಟ್ಟಿಲ್ಲ. ಎಲ್ಲಾ ಫ್ರೀಬೀಸ್ ಪ್ರಭಾವ. ನೆಟ್‍ನಲ್ಲಿ ನೋಡಿ. ನಮ್ಮ ದೇಶದಲ್ಲೂ ಅನೇಕ ರಾಜ್ಯಗಳು ಫ್ರೀಬೀಸ್‍ನಿಂದ ಹಾಳಾಗ್ತಿವೆ. ಬಿಟ್ಟಿ ಬಂದಿದ್ದನ್ನ ತಗೋಬಾರ್ದು. ಕಂಡವರ ಕೊಡುಗೆ ದೇಶದ ನೆಮ್ಮದಿ ಸ್ಥಿತಿಗೆ ವಿಷ ಬೆರೆಸುತ್ತೆ’ ಎಂದ.

‘ಅಲ್ವೇ, ನಿನ್ನ ಮುಖಕ್ಕೆ ಕಾಸ್ಮೆಟಿಕ್ಸ್ ಬಳ್ಕೊಳ್ಳೋಕೆ ದುಡ್ಡು ಕೊಡೋಕೆ ಅವನ್ಯಾರೇ? ಅವನಿಗೂ, ನಿನಗೂ ಏನು ಸಂಬಂಧ?’

ಜಗಳ ಅತಿರೇಕಕ್ಕೆ ಹೋಯಿತು. ಮೋಹನ್ ಇಬ್ಬರಿಗೂ ಸಮಾಧಾನ ಮಾಡಿದ. ‘ಆ ಕಾಲದಲ್ಲಿ ಹರಿಶ್ಚಂದ್ರ ತನ್ನನ್ನು ತಾನು ಹರಾಜ್ ಮಾಡ್ಕೊಂಡ. ಇವತ್ತು ನಾವು ಒಂದು ನಿಕ್ಕರ್‍ಗೆ, ಒಂದು ಕುಕ್ಕರ್‍ಗೆ ನಮ್ಮ ತನಾನ, ನಮ್ಮ ಹಕ್ಕನ್ನ ಹರಾಜ್ ಮಾಡ್ಕೋತಾ ಇದ್ದೀವಿ’ ಎಂದ.

ಮೋಹನನ ಮಾತು ಕೆನ್ನೆಗೆ ರಪ್ಪನೆ ಬಡಿದಂತಾಯಿತು. ವಿಶ್ವ, ವಿಶಾಲೂ ತಲೆ ತಗ್ಗಿಸಿ ನಿಂತರು. ಇಂಥ ಆಮಿಷಗಳಿಗೆ ನಮ್ಮನ್ನ ಒಳಗಾಗಿಸಬೇಡ ದೇವರೇ ಎಂದು ಭಾರತಾಂಬೆಯ ಫೋಟೊಕ್ಕೆ ಕೈ ಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT