ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದ ಮಕ್ಕಳ ಮೇಲಿರಲಿ ವಿಶ್ವಾಸ

Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

‘ನನ್ನ ಮಗ ಯಾಕೋ ಇತ್ತೀಚೆಗೆ ವಿಚಿತ್ರವಾಗಿ ಆಡುತ್ತಿದ್ದಾನೆ. ಹೇಳಿದ ಮಾತೇ ಕೇಳುವುದಿಲ್ಲ. ಸದಾ ಮೊಬೈಲ್, ಟಿವಿ ನೋಡುವುದರಲ್ಲೇ ಸಮಯ ಕಳೆಯುತ್ತಾನೆ. ಮನೆಯವರೊಂದಿಗೆ ಸೇರುವುದಿಲ್ಲ. ಏನಾದರು ಕೇಳಿದರೆ ಕೋಪ ಮಾಡಿಕೊಳ್ಳುತ್ತಾನೆ. ಮೊದಲೆಲ್ಲಾ ಅವನು ಹೀಗಿರಲಿಲ್ಲ. ಒಬ್ಬನೇ ಮಗ ಎಂದು ಮುದ್ದಾಗಿ ಬೆಳೆಸಿದ್ದೇ ತಪ್ಪಾಯ್ತು ಎನ್ನಿಸುತ್ತದೆ’ ಎಂದು ಸ್ನೇಹಿತೆಯ ಬಳಿ ಗೋಳು ತೋಡಿಕೊಳ್ಳುತ್ತಾರೆ ಬ್ಯಾಂಕ್‌ನಲ್ಲಿ ಅಕೌಂಟೆಂಟ್‌ ಆಗಿರುವ ಸರಳ.

ಇದು ಸರಳ ಒಬ್ಬರ ನೋವಲ್ಲ. ಮಕ್ಕಳು ಹದಿವಯಸ್ಸಿಗೆ ಕಾಲಿರಿಸುತ್ತಿದ್ದಾರೆ ಎಂದರೆ ಪೋಷಕರಲ್ಲಿ ಏನೋ ಒಂದು ಬಗೆಯ ತಳಮಳ. ಮಕ್ಕಳ ಹರೆಯ ಎಂಬುದು ಮಕ್ಕಳು ಹಾಗೂ ಪೋಷಕರು ಇಬ್ಬರಿಗೂ ತುಂಬಾ ಸೂಕ್ಷ್ಮವಾದ ಅವಧಿ. ಆ ಸಮಯದಲ್ಲಿ ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುವುದು, ಪದೇ ಪದೇ ಸಿಟ್ಟಾಗುವುದು, ಹೇಳಿದ ಮಾತು ಕೇಳದೇ ಇರುವುದು ಹೀಗೆ ಮಕ್ಕಳ ವರ್ತನೆಯಲ್ಲಿ ಸಂಪೂರ್ಣ ಬದಲಾವಣೆ ಕಾಣಿಸಬಹುದು. ಇದು ಪೋಷಕರು ಹಾಗೂ ಮಕ್ಕಳ ಮಧ್ಯೆ ಅಂತ್ಯವಿಲ್ಲದ ವಿವಾದಕ್ಕೂ ಕಾರಣವಾಗಬಹುದು. ಮಕ್ಕಳು ಪೋಷಕರಿಗೆ ಎದುರಾಡಬಹುದು. ಆದರೆ ಪೋಷಕರು ಇದನ್ನೆಲ್ಲಾ ಜಾಣ್ಮೆಯಿಂದ ನಿಭಾಯಿಸಬೇಕು. ಆಗ ಮಾತ್ರ ಮಕ್ಕಳನ್ನು ಸರಿದಾರಿಗೆ ತರಲು ಸಾಧ್ಯ.

ತಾಳ್ಮೆಯಿಂದಿರಿ

ಮಕ್ಕಳು ಹದಿ ವಯಸ್ಸಿಗೆ ಕಾಲಿರಿಸಿದಾಗ ನೀವು ಮೊದಲು ಮಾಡಬೇಕಿರುವುದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು. ಇಬ್ಬರೂ ವಾದ ಮಾಡಿಕೊಂಡು ನಿಂತರೆ ಖಂಡಿತ ಜಗಳದಲ್ಲಿ ಮುಕ್ತಾಯವಾಗುತ್ತದೆ. ಕೂಗಾಡುವುದು, ಬೈಯುವುದು ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಆ ಕಾರಣಕ್ಕೆ ನಿಮ್ಮ ಚಿಂತೆ, ಒತ್ತಡವನ್ನೆಲ್ಲಾ ಬದಿಗಿರಿಸಿ ನಿಮ್ಮ ಮನಸ್ಸು ಶಾಂತವಾಗಿದ್ದಾಗಷ್ಟೇ ಮಕ್ಕಳೊಂದಿಗೆ ಸಂವಹನ ನಡೆಸಿ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಹದಿಹರೆಯದ ಮಕ್ಕಳು ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡುವುದು, ಅನ್ನಿಸಿದ್ದನ್ನು ವ್ಯಕ್ತಪಡಿಸುವುದು ಸಹಜ. ಹಾಗಂತ ಅವರು ಹೇಳಿದ್ದನ್ನು, ಮಾಡಿದ್ದನ್ನು ಕೇಳಿಕೊಂಡು ಅವರೊಂದಿಗೆ ವಾದ–ವಿವಾದಕ್ಕೆ ಇಳಿಯುವುದು ಸರಿಯಲ್ಲ. ಅದರ ಬದಲು ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ದಾರಿಯನ್ನು ಕಂಡುಕೊಳ್ಳಿ. ಅವರನ್ನು ಕುಳ್ಳಿರಿಸಿಕೊಂಡು ಅವರ ವರ್ತನೆಯ ಬಗ್ಗೆ ಅವರಿಗೆ ಅರಿವಾಗುವಂತೆ ಮಾಡಿ.

ಸಂವಹನ ನಡೆಸಿ

ಹದಿ ವಯಸ್ಸಿನ ಮಕ್ಕಳೊಂದಿಗೆ ಕುಳಿತು ಸ್ನೇಹಿತರಂತೆ ಮಾತನಾಡಿ. ಪ್ರತಿದಿನ ಸಂಜೆ ಕುಳಿತು ಅಂದಿನ ದಿನದ ಬಗ್ಗೆ ಕೇಳಿ. ಅವರು ಅಂದು ಏನೇನು ಸಮಸ್ಯೆ ಎದುರಿಸಿದ್ದರು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಕೆಲವೊಮ್ಮೆ ಹದಿಹರೆಯದವರಿಗೆ ತಮ್ಮೊಳಗಿನ ಹತಾಶೆಯನ್ನು ಹೊರ ಹಾಕಲು ಸರಿಯಾದ ಮಾರ್ಗ ತಿಳಿದಿರುವುದಿಲ್ಲ, ಆ ಕಾರಣದಿಂದ ಅವರು ಅದನ್ನು ತಮ್ಮೊಳಗೆ ಹುದುಗಿಸಿಕೊಂಡಿರುತ್ತಾರೆ. ಇದು ಅವರಿಗೆ ಕಾಲಾನಂತರದಲ್ಲಿ ಬೇರೆ ಸಮಸ್ಯೆಯಾಗಿ ಕಾಡಬಹುದು. ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ. ಅವರಲ್ಲಿ ಆತ್ಮವಿಶ್ವಾಸ ತುಂಬಿ.

ನಿಯಮಗಳನ್ನು ರೂಢಿಸಿ

ಮಕ್ಕಳ ಎಲ್ಲಾ ಬೇಡಿಕೆಗಳನ್ನು ಪೂರೈಸುವುದು ಸರಿಯಲ್ಲ. ಆ ಕಾರಣಕ್ಕೆ ಅವರಿಗೆಂದೇ ಕೆಲವೊಂದು ನಿಯಮಗಳನ್ನು ರೂಪಿಸಿ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ. ಅವರಿಗೂ ಆ ನಿಯಮಗಳನ್ನು ಪಾಲಿಸುವುದನ್ನು ಅಭ್ಯಾಸ ಮಾಡಿಸಿ. ನಿಮ್ಮ ಮಕ್ಕಳು ನಿಮಗೆ ಹೆದರಿಸುವುದು, ನೀವು ಕೆಟ್ಟ ಪೋಷಕರೆಂದು ಹಣೆಪಟ್ಟಿ ನೀಡಿದರೂ ಅವರಿಗೆ ನ್ಯಾಯಯುತವಾಗಿ ನಡೆದುಕೊಳ್ಳಿ. ಹದಿವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಕ್ಕಳು ಹೀಗೇ ಇರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಉದಾಹರಣೆಯ ಮೂಲಕ ತಿಳಿ ಹೇಳಿ

ಸ್ಫೂರ್ತಿದಾಯಕ ವಿಡಿಯೊಗಳು, ಸಂದೇಶಗಳು, ಇಮೇಜ್‌ಗಳು ಹಾಗೂ ಕತೆಗಳ ಮೂಲಕ ಅವರಿಗೆ ಬದುಕಿನ ಪಾಠಗಳನ್ನು ಕಲಿಸಿ. ಉದಾಹರಣೆ ಸಮೇತ ಹೇಳಿದ ವಿಷಯಗಳು ಅವರ ಮನಸ್ಸಿನಲ್ಲಿ ಹೆಚ್ಚು ಸಮಯ ಉಳಿದಿರುತ್ತದೆ. ಇದರಿಂದ ಅವರು ವಿನಮ್ರತೆ ಕಲಿಯುತ್ತಾರೆ.

ಮಕ್ಕಳನ್ನು ಅತಿಯಾಗಿ ಮುದ್ದಿಸುವ ಪೋಷಕರಿಗೆ ಮಕ್ಕಳು ಹದಿವಯಸ್ಸಿಗೆ ಬಂದ ಕೂಡಲೇ ಕಿರಿಕಿರಿ ಉಂಟಾಗಲು ಆರಂಭವಾಗುತ್ತದೆ. ಆದರೆ ಮಕ್ಕಳ ಮೇಲೆ ಅತಿಯಾಗಿ ನಿಗಾ ವಹಿಸುವುದು ಸರಿಯಲ್ಲ. ಅವರ ಸ್ವಾತಂತ್ರ್ಯ ಅವರಿಗೆ ನೀಡಿ. ಆದರೆ ಅವರು ಸುರಕ್ಷಿತವಾಗಿದ್ದಾರಾ ಎಂಬುದನ್ನು ದೂರದಿಂದಲೇ ಗಮನಿಸುತ್ತಿರಿ.

***

ನಿಧಾನಕ್ಕೆ ತಿಳಿ ಹೇಳಿ

ಹದಿಹರೆಯದ ಮಕ್ಕಳ ಸ್ವಭಾವ, ನಡೆನುಡಿಗಳನ್ನು ನಿಯಂತ್ರಣ ಮಾಡುವುದಕ್ಕಿಂತ ಅದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಬದಲಾದ ನಡೆನುಡಿಯಲ್ಲಿ ಏನೋ ಒಂದು ಸಂದೇಶವಿರುತ್ತದೆ. ಅದು ಏನು ಎಂಬುದನ್ನು ಪೋಷಕರು ಗಮನಿಸಬೇಕು. ಸಮಾಧಾನದಿಂದ ಮಕ್ಕಳ ಮನಸ್ಸನ್ನು ಅರಿಯಲು ಪ್ರಯತ್ನಿಸಬೇಕು. ನಿಧಾನಕ್ಕೆ ಪ್ರಶ್ನೆ ಕೇಳುವ ಮೂಲಕ ಅವರ ಮನಸ್ಸಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ತಿಳಿದುಕೊಳ್ಳಬೇಕು. ನೀತಿ ನಿಯಮಗಳಿಂದ ನಿರ್ಬಂಧ ಹೇರುವುದು ಸರಿಯಲ್ಲ. ಪರಿಸ್ಥಿತಿ, ಸಂದರ್ಭದ ಬಗ್ಗೆ ತಿಳಿಸಿ ಹೇಳಬೇಕು. ಒಂದು ವೇಳೆ ಪೋಷಕರಿಗೆ ತಿಳಿ ಹೇಳಲು ಕಷ್ಟವಾದರೆ ತಜ್ಞರ ಬಳಿಗೆ ಕರೆದ್ಯೊಯ್ದು ಹೇಳಿಸಬೇಕು.

- ನಡಹಳ್ಳಿ ವಸಂತ್‌,ಮನೋಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT