‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದ ವರ್ಷಾಂತ್ಯದಲ್ಲಿ ‘ಸಂಗಾತ ಪುಸ್ತಕ’ ಪ್ರಕಾಶನ ಶುರುಮಾಡಿದೆ. ಸಾಮಾಜಿಕ ಜಾಲತಾಣಗಳ ಅಬ್ಬರ, ಕಾಲದ ಒತ್ತಡದ ನಡುವೆ ಸಾಹಿತ್ಯ ಕೃತಿಗಳ ಓದು ಗೌಣವಾಗುತ್ತಿದೆ ಎಂಬ ಆತಂಕದ ಮಾತುಗಳು ಸಾಹಿತ್ಯ ವಲಯದಲ್ಲಿ ಆಗಾಗ ಕೇಳಿಬರುತ್ತಿವೆ. ಆದರೆ, ನನಗೆ ಹಾಗನಿಸುತ್ತಿಲ್ಲ. ಪತ್ರಿಕೆ ಆರಂಭಿಸಿದ ವರ್ಷದೊಳಗೆ ಓದುಗರು ತೋರಿದ ಅಕ್ಷರ ಪ್ರೀತಿ ಕಡಿಮೆಯೇನೂ ಅಲ್ಲ. ಸಾಹಿತಿಗಳು ಓದುವುದು ಬೇರೆಯ ಮಾತು. ಆದರೆ, ಪೋಸ್ಟ್ಮನ್, ತಲಾಟಿ, ಕ್ಲರ್ಕ್, ವಿದ್ಯಾರ್ಥಿ, ಕೂಲಿ ಕಾರ್ಮಿಕ, ರೈತ, ಗೃಹಿಣಿ, ನರ್ಸ್, ಹೋಟೆಲ್ ಮಾಲೀಕ, ಸರ್ವರ್... ಇಂಥವರೆಲ್ಲ ‘ಸಂಗಾತ’ ಪತ್ರಿಕೆಯ ಓದುಗ ವಲಯದಲ್ಲಿರುವುದು ನನ್ನ ಅಭಿಪ್ರಾಯವನ್ನು ಬದಲಿಸಿದೆ. ಅವರು ಶುದ್ಧ ಓದುಗರಷ್ಟೇ. ಓದಿನ ಸುಖ ಅನುಭವಿಸುವುದಕ್ಕಾಗಿಯೇ ಓದುತ್ತಿರುವವರು. ಪ್ರಕಾಶನ ಆರಂಭಿಸುವಾಗ ನನ್ನ ಗಮನ ಇಂಥ ಓದುಗರ ಮೇಲಿತ್ತು.