ಹೊಸಪೇಟೆ (ಬಳ್ಳಾರಿ) : ‘ಬಿಜೆಪಿ ತತ್ವಗಳು ನಮ್ಮ ರಾಜ್ಯಕ್ಕೆ ಒಪ್ಪುವುದಿಲ್ಲ’ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿ ನಡೆಯುತ್ತಿರುವ ‘ಜನಾರ್ಶೀವಾದ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಜಾತ್ಯಾತಿತತೆ, ಸಮಾಜವಾದ, ಇಂದಿರಾ ತತ್ವಗಳಲ್ಲಿ ನಂಬಿಕೆ ಇರಿಸಿದೆ. ಈ ತತ್ವಗಳನ್ನು ಜನರು ಬಯಸುತ್ತಾರೆ’ ಎಂದರು.
‘ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ನೆಹರೂ, ಇಂದಿರಾ ಮತ್ತು ಅವರ ಕುಟುಂಬ ದೇಶಕ್ಕಾಗಿ ಯಾವ ಕೆಲಸ ಮಾಡಿಲ್ಲ ಎಂದು ಜೋರಾಗಿ ಮಾತಾಡುತ್ತಾರೆ. ಅವರು ಏನು ಮಾಡದಿದ್ದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯುತ್ತಿತ್ತೆ? ಚಹಾ ಮಾರುವ ವ್ಯಕ್ತಿಯೊಬ್ಬ ಪ್ರಧಾನಿಯಾಗಲು ಸಾಧ್ಯವಾಗುತ್ತಿತ್ತೆ? ಎಂದು ನಾನು ಮೋದಿಯನ್ನು ಪ್ರಶ್ನಿಸಿದ್ದೆ’ ಎಂದರು.
‘ಬಿಜೆಪಿಯವರು ಓಟುಗಳಿಗಾಗಿ ಅಂಬೇಡ್ಕರ್, ಸರ್ದಾರ್ ಪಟೇಲರನ್ನು ನೆನಪಿಸಿಕೊಳ್ಳುತ್ತಾರೆ. ನಾವು ಅವರ ತತ್ವ ಮತ್ತು ದೇಶಸೇವೆಯ ಕಾರಣಕ್ಕೆ ಸ್ಮರಿಸುತ್ತೇವೆ’ ಎಂದು ಹೇಳಿದರು.
‘ನೆಹರೂ ಕಾಶ್ಮೀರವನ್ನು ಬಿಟ್ಟುಕೊಟ್ಟರು ಎಂದು ಮೋದಿ ಆರೋಪಿಸುತ್ತಾರೆ. ಆ ಆರೋಪ ಸಾಬೀತು ಮಾಡಿದರೆ, ಇವತ್ತೇ ರಾಜೀನಾಮೆ ಕೋಡುತ್ತೇನೆ’ ಎಂದು ಸವಾಲು ಹಾಕಿದರು.
‘ಮೋದಿ ಏನು ಕೆಲಸ ಮಾಡಿಲ್ಲ. ನೋಟು ಅಮಾನ್ಯಿಕರಣ ಮಾಡಿ ಜನರಿಗೆ ತೊಂದರೆ ನೀಡಿದರು. ಬಡವರ ಸಬ್ಸಿಡಿಗಳನ್ನು ಕಿತ್ತುಕೊಂಡರು’ ಎಂದು ದೂರಿದರು.
‘ಪ್ರಧಾನಿ ಗುಜರಾತ್ ಮಾದರಿ ಬಗ್ಗೆ ಮಾತನಾಡುತ್ತಾರೆ. ಆ ರಾಜ್ಯದಲ್ಲಿ ಹೆಣ್ಣು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ, ‘‘ಹೆಣ್ಣು ಮಕ್ಕಳು ಸಣ್ಣಗೆ–ಸುಂದರವಾಗಿ ಕಾಣಲು ಊಟ ಬಿಟ್ಟಿದ್ದಾರೆ’’ ಎಂಬ ಉತ್ತರ ನೀಡುತ್ತಾರೆ. ಸಂಸದೆಯೊಬ್ಬರನ್ನು ಪರೋಕ್ಷವಾಗಿ ಶೂರ್ಪನಕಿಗೆ ಹೋಲಿಸುತ್ತಾರೆ. ಇದು ಅವರ ಆಡಳಿತದ ವೈಖರಿ ಸೂಚಿಸುತ್ತದೆ’ ಎಂದು ನುಡಿದರು.
‘ಕಾಂಗ್ರೆಸ್ನಿಂದಾಗಿಯೇ ದೇಶದ ಜನರೆಲ್ಲರಿಗೂ ಹಕ್ಕುಗಳು ಸಿಕ್ಕಿವೆ’ ಎಂದು ಪಕ್ಷವನ್ನು ಸಮರ್ಥಿಸಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.