ಸಚ್ಚಿದಾನಂದ ಹೆಗಡೆ ಕಥೆಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರು. ವಿನ್ಯಾಸ ಅವರ ವೃತ್ತಿ. ಸಂಗೀತ ಅವರ ಆಸಕ್ತಿ. ಅವರ ವ್ಯಕ್ತಿತ್ವದ ಈ ಮೂರು ಕೋನಗಳು ಸೇರಿದ ಕ್ಯಾನ್ವಾಸಿನಲ್ಲಿಯೇ ರೂಪುತಳೆದ ಕೃತಿ ‘ಸ್ವರ ವಿನ್ಯಾಸ’. ಈ ಪುಸ್ತಕದ ಶೀರ್ಷಿಕೆಯನ್ನು ಸ್ವರ ಮತ್ತು ವಿನ್ಯಾಸ ಎಂದೂ ಸ್ವರದ ವಿನ್ಯಾಸ ಎಂದೂ ಅರ್ಥೈಸಬಹುದು. ಈ ಎರಡೂ ಅರ್ಥಗಳಿಗೆ ಒಗ್ಗುವ ಹಾಗೆಯೇ ಇದರ ಬರಹಗಳಿವೆ. ಸಂಗೀತ ಮತ್ತು ವಿನ್ಯಾಸ ಎರಡರ ಕ್ರಾಸಿಂಗ್ ಪಾಯಿಂಟ್ ಆಗಿ ಅವರ ಸಾಹಿತ್ಯದ ನೋಟ ಕೆಲಸ ಮಾಡಿದೆ. ಹಾಗಾಗಿಯೇ ಯಕ್ಷಗಾನ ಕಲಾವಿದರೆಂದೇ ಪ್ರಸಿದ್ಧರಾದ ಶಂಭು ಹೆಗಡೆ ಅವರಲ್ಲಿ ಒಬ್ಬ ಕುಶಲ ವಿನ್ಯಾಸಕಾರನೂ ಪ್ರಬುದ್ಧ ಮ್ಯಾನೇಜ್ಮೆಂಟ್ ಗುರುವೂ ಇದ್ದುದನ್ನು ಗುರ್ತಿಸಲು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಜಗದ್ವಿಖ್ಯಾತ ವಿನ್ಯಾಸಕಾರ ರೇಮಂಡ್ ಲೋವಿಯ ಜೊತೆಗೆ ಶಂಭು ಹೆಗಡೆಯವರನ್ನು ನೆನಪಿಸಿಕೊಳ್ಳಲು ಸಾಧ್ಯವಾಗಿದೆ.