ಬಟಾಬಯಲು
ಲೇ: ಮುದಿಗೆರೆ ರಮೇಶ್ಕುಮಾರ್
ಪ್ರ: ಕರ್ನಾಟಕ ಅಂಧರ ವಿಮೋಚನಾ ವೇದಿಕೆ
ಸಂ: 9844769007
**
ಮುದಿಗೆರೆ ರಮೇಶ್ಕುಮಾರ್ ಅವರು ಅಂಧರಾದರೂ ಅವರೊಳಗಿನ ಕವಿಯು ಜಗತ್ತನ್ನು ಎಷ್ಟು ತೀಕ್ಷ್ಣ ದೃಷ್ಟಿಯಿಂದ ನೋಡಬಲ್ಲ ಎನ್ನುವುದಕ್ಕೆ ಸಾಕ್ಷಿ ಅವರ ಇತ್ತೀಚಿನ ಕಾವ್ಯ ಸಂಕಲನ ಬಟಾಬಯಲು. ಅಂಧರು ಎಂಬ ರಿಯಾಯಿತಿ ತೋರಿಸದೆ ನೋಡಿದಾಗಲೂ ಗಮನ ಸೆಳೆಯುವಂತಹ ಹಲವಾರು ಕವನಗಳು ಈ ಸಂಕಲನದಲ್ಲಿವೆ.
‘ಲೆಕ್ಕ ಇಟ್ಟವರಿಲ್ಲ ಕಲ್ಲುಗಳ ಹೊತ್ತವರ/ ಲೆಕ್ಕ ಇಟ್ಟವರಿಲ್ಲ ಗುಡಿ ಕಟ್ಟಿ ಮಣಿದವರ/ ಲೆಕ್ಕಕ್ಕೆ ನನದೊಂದು ನಿನದೊಂದು ಕಲ್ಲು’ ಎಂದು ಕಳವಳಿಸುವ ಕವಿಯ ಮನಸ್ಸು, ಮರೆಯಾಗುತ್ತಿರುವ ಮನುಷ್ಯತ್ವದ ಬಗ್ಗೆಯೂ ಮಾತನಾಡುತ್ತದೆ. ಉದಾಹರಣೆ ಬೇಕೇ? ‘ಬಿದ್ದುದಷ್ಟೇ ನಾವು ಕೆಳಗೆ/ಬಿದ್ದವರೆಷ್ಟೋ ಒಳಗೊಳಗೆ.’ ಕಣ್ಣು ಕಾಣದ ತಮ್ಮಂಥವರು ಬಾಹ್ಯವಾಗಿ ಬಿದ್ದರೂ ಅದರಿಂದ ಯಾವ ಅಪಾಯವೂ ಇಲ್ಲ. ಅದೇ ಕಣ್ಣಿದ್ದೂ ಅಂತಃಸಾಕ್ಷಿಯ ಮುಂದೆ ಬಿದ್ದವರು ತಂದೊಡ್ಡುವ ಅಪಾಯ ದೊಡ್ಡದು ಎಂಬುದನ್ನು ಈ ಕವನ ಸೂಚ್ಯವಾಗಿ ಹೇಳುತ್ತದೆ.
ಹಕ್ಕಿಗಳ ಚಿಲಿಪಿಲಿ ನಾದದ ಜತೆಗೆ ದುಃಖಿತರ ಆರ್ತನಾದವೂ ಕವಿಗೆ ಕೇಳಿಸುತ್ತದೆ. ದೇವರು, ಧರ್ಮ, ನಾಡು, ನುಡಿ, ನಿಸರ್ಗ ಹೀಗೆ ಇಲ್ಲಿನ ಕಾವ್ಯಗಳಲ್ಲಿ ಒಳಗಣ್ಣಿನ ದೃಷ್ಟಿ ವ್ಯಾಪಕವಾಗಿ ಹರಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.