ಇದು ಕುವೆಂಪು ಅಧ್ಯಯನ ಸರಣಿಯ ಮುಂದುವರಿದ ಭಾಗವೇ ಆಗಿದೆ. ಕುವೆಂಪು ಅವರು ಆರಂಭದಲ್ಲಿ ಇಂಗ್ಲಿಷ್ ಕವಿತೆಗಳನ್ನು ಬರೆದರು. ಅದು ಮಿಲ್ಟನ್ ಮತ್ತು ವರ್ಡ್ಸ್ವರ್ತ್ ಕವಿಗಳ ಅನುಕರಣೆಗಳಾಗಿದ್ದವು. ಐರಿಷ್ ಕವಿ ಕಸಿನ್ಸ್ ಅವರಿಗೂ ಇದನ್ನು ತೋರಿಸಿದರು. ಆಗ ಕಸಿನ್ಸ್ ಅವರು ಕುವೆಂಪು ಕವನಗಳಲ್ಲಿ ಸ್ವಂತಿಕೆ ಇಲ್ಲ ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದರು. ಕನ್ನಡ ನಾಡಿನ ಕವಿ ಕನ್ನಡದಲ್ಲಿಯೇ ಹೇಗೆ ಬರೆಯಬೇಕು ಎಂಬುದನ್ನು ಮನದಟ್ಟು ಮಾಡಿಸಿದರು. ‘ಕನ್ನಡದಲ್ಲಿ ಪದ್ಯ ಬರೆಯುವುದು ಸಾಧ್ಯವೇ?’ ಎಂಬುದು ಪುಟ್ಟಪ್ಪನವರ ಪ್ರಶ್ನೆಯಾಗಿತ್ತು. ಆದರೆ, ಕಸಿನ್ಸ್ ‘ಸಾಧ್ಯ ಮಾತ್ರವಲ್ಲ, ಅದು ಆಗಬೇಕಾದ್ದೆ ಹಾಗೇ’ ಎಂಬುದನ್ನು ಹೇಳಿದ್ದರು ಎಂಬ ಪ್ರಭುಶಂಕರ ಅವರ ‘ಕುವೆಂಪು’ ಪುಸ್ತಕದಲ್ಲಿರುವ ಸಂದರ್ಭವನ್ನು ಈ ಕೃತಿಯ ಆರಂಭದಲ್ಲಿಯೇ ತಿಳಿಸಲಾಗಿದೆ.