ಒಟ್ಟು 45 ಕವಿತೆಗಳ ಸಂಕಲನವಿದು. ‘ಅನಂತ ಸುಖದ ಹಸಿವು ಹೆಚ್ಚಾದಾಗ/ ದಿಢೀರನೆ ನಿಚ್ಚಳಾಗುತ್ತೇನೆ ನಿದ್ದೆಯಲ್ಲಿ/ ಜಾಗರದಲ್ಲೂ ಜಾರುವ ಜಾಣೆಯಂತೆ/ ಎಚ್ಚರದಲ್ಲೂ ಎಳೆಯುವ ಜೋಂಪಿನಂತೆ/ ಮತ್ತೆ ಮತ್ತೆ ಕಾಡುತ್ತಾಳೆ ಅಕ್ಕ/ ಕರೆಯಲೊಲ್ಲಳೇಕೆ ಕದಳಿಗೆ..’ ಎನ್ನುವ ಕವಯತ್ರಿ ಬಿಸಿಯುಸಿರ ಭಾವದ ಹಲವು ಕವನಗಳಿಗೆ ಇಲ್ಲಿ ಜೀವ ನೀಡಿದ್ದಾರೆ. ‘ಸಂಬಂಧಗಳೇ ರಕ್ತಗತವಾಗಿರುವಾಗ/ ಮನಸುಗಳ ಮಾತೇಕೆ/ ಆತ್ಮಗಳೇ ಒಂದಾಗಿರುವಾಗ/ ದೇಹಗಳ ಹಂಗೇಕೆ...’ ಹಾಗೂ ‘ಅವಳ ಕಣ್ಣೀರು/ ಹರಿದಷ್ಟೂ/ ಅಸಂಖ್ಯ ಭಗೀರಥರು/ ಭುವಿಗಿಳಿದರು...’ ಎನ್ನುವ ಹಲವು ಪುಟ್ಟ ಮಿಂಚುಗಳನ್ನೂ ಅಲ್ಲಲ್ಲಿ ಹೊಳೆಯಿಸುತ್ತಾರೆ.ಪಾದಗಂಧ, ಬೆಳಕಿನಂಗಡಿ, ಕೆಂಪುಮೀಸೆ ಮುಂತಾದ ಕವಿತೆಗಳಲ್ಲಿ ಭಾವಕ್ಕೆ ಹದವಾಗಿ ಜೀವತುಂಬಿ ಗಮನ ಸೆಳೆಯುತ್ತಾರೆ. ಆದರೆ ಸಂಕಲನದ ಹಲವು ಕವಿತೆಗಳು ಆಕಾಶದಲ್ಲಿ ಹೆಪ್ಪುಗಟ್ಟಿದ ಮೋಡ ಮಳೆ ಸುರಿಸದೆ ಮುಂದಕ್ಕೆ ಸರಿದಂತೆ, ನಿರಾಶೆ ಹುಟ್ಟಿಸುವುದು ಸುಳ್ಳಲ್ಲ. ಇತ್ತೀಚೆಗೆ ಕವಿಗಳ ಮೊದಲ ಸಂಕಲನದಲ್ಲಿ ಸಹಜವೇ ಎನ್ನಿಸುವ ಭಾವಗಳ ಬಿಕ್ಕಳಿಕೆಗಳಿಂದ ಹೊರಬಂದರೆ ಈ ಕವಯತ್ರಿಯಿಂದ ಇನ್ನಷ್ಟು ಉತ್ತಮ ಕವನಗಳನ್ನು ನಿರೀಕ್ಷಿಸಬಹುದು.