ಕಾಳಿದಾಸ ಮಹಾಕವಿ ಎಂದೊಡನೆ ಎಲ್ಲರಿಗೂ ತಟ್ಟನೆ ನೆನಪಾಗುವುದು ‘ಅಭಿಜ್ಞಾನಶಾಕುಂತಲಮ್’ ನಾಟಕ. ಆದರೆ, ಇದಲ್ಲದೆ ಈ ಕವಿ ಇನ್ನೂ ಎರಡು ಮಹತ್ವದ ನಾಟಕ ಕೃತಿಗಳನ್ನು ರಚಿಸಿದ್ದಾನೆ. ಅವುಗಳೇ ‘ವಿಕ್ರಮೋರ್ವಶೀಯಮ್’ ಹಾಗೂ ‘ಮಾಲವಿಕಾಗ್ನಿಮಿತ್ರಮ್’ ಕೃತಿಗಳು. ಸಂಸ್ಕೃತದ ‘ಮಾಲವಿಕಾಗ್ನಿಮಿತ್ರಮ್’ ನಾಟಕವನ್ನು ಅಮ್ಮೆಂಬಳ ಶಂಕರನಾರಾಯಣ ನಾವಡರು ಹೆಚ್ಚು–ಕಡಿಮೆ 80 ವರ್ಷಗಳಷ್ಟು ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದು, ಅದು ಇತ್ತೀಚೆಗಷ್ಟೆ ಪ್ರಕಾಶನದ ಭಾಗ್ಯವನ್ನು ಕಂಡಿದೆ.