ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಉಳಿದ ಮಾತುಗಳು ತೆರೆದಿಟ್ಟ ಲೋಕ

Last Updated 10 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸಿನಿಮಾ ರಂಗದ ಜಾಣ–ಜಾಣೆಯರ ಸುದೀರ್ಘ ಸಂದರ್ಶನಗಳ ಸಂಕಲನ ‘ಉಳಿದಾವ ಮಾತು’. ಇಲ್ಲಿನ ಸಂದರ್ಶನಗಳಿಗೆ ಥಳಕು–ಬಳಕು ಜಗತ್ತಿನ ಗ್ಲಾಮರಸ್‌ ಸಂಗತಿಗಳು ಮುಖ್ಯವಾಗಿಲ್ಲ. ಬದಲಾಗಿ ಸಿನಿಮಾದ ಪ್ರಭಾವಳಿಯಲ್ಲಿ ಇರುವವರ ಬದುಕು, ನಡೆದುಬಂದ ದಾರಿ ಹಾಗೂ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳುವ ಉಮೇದು ಎದ್ದು ಕಾಣುತ್ತದೆ. ಅದನ್ನು ಲೇಖಕರು ಆರಂಭದಲ್ಲಿಯೇ ಸ್ಪಷ್ಟಪಡಿಸಿದ್ದಾರೆ ಕೂಡ.

ಸಂದರ್ಶನಕ್ಕೆ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಸಾಕಷ್ಟು ಎಚ್ಚರ ವಹಿಸಲಾಗಿದೆ. ಗಿರೀಶ ಕಾಸರವಳ್ಳಿ, ಭಗವಾನ್‌, ಜಯಂತಿ ಅವರಂತಹ ಹಿರಿಯರು, ದರ್ಶನ್‌, ಶ್ರುತಿ ಹರಿಹರನ್‌ ಅವರಂತಹ ಈಗಿನ ತಲೆಮಾರಿನ ಪ್ರತಿಭಾನ್ವಿತರು, ‘ಶೃಂಗಾರದ ಹೊಂಗೆಮರ’ದ ಕುರಿತು ಧೇನಿಸುವ ಯೋಗರಾಜ ಭಟ್ಟರು, ರಿಚರ್ಡ್‌ ಅಟೆನ್‌ಬರೊ ಅವರ ಗಾಂಧಿ, ಕಾಸರವಳ್ಳಿ ಅವರ ಕೂರ್ಮಾವತಾರ, ಶೇಷಾದ್ರಿ ಅವರ ಮೋಹನ – ಹೀಗೆ, ಗಾಂಧಿ ಬಗೆಗಿನ ಪ್ರಮುಖ ಸಿನಿಮಾಗಳಲ್ಲಿ ಕೆಲಸ ಮಾಡಿದ ಛಾಯಾಗ್ರಹಣ ನಿರ್ದೇಶಕ ಜಿ.ಎಸ್‌. ಭಾಸ್ಕರರು... ಎಲ್ಲಾ ಇಲ್ಲಿ ಒಂದೆಡೆ ಸೇರಿದ್ದಾರೆ.

ಕೃತಿಯ ಆರಂಭದಲ್ಲಿರುವ ರಾಘವೇಂದ್ರ ರಾಜ್‌ಕುಮಾರ್‌ ಅವರ ಸಂದರ್ಶನ ಚಂದನವನದ ದಶಕಗಳ ಕಥೆಯನ್ನು ಹೇಳುವ ಜತೆಗೆ ದೊಡ್ಮನೆಯ ಹಲವು ಕುತೂಹಲದ ಸಂಗತಿಗಳನ್ನೂ ಓದುಗರ ಮುಂದೆ ತೆರೆದಿಡುತ್ತದೆ. ಡಿ. ಸತ್ಯಪ್ರಕಾಶ್‌, ಹೇಮಂತರಾವ್‌, ಅರವಿಂದ ಶಾಸ್ತ್ರಿ ಅವರಂತಹ ಪ್ರಯೋಗಶೀಲ ಮನೋಭಾವದ ಪ್ರತಿಭಾನ್ವಿತ ನಿರ್ದೇಶಕರ ಜತೆಗಿನ ಸಂವಾದ ಕೂಡ ಇಲ್ಲಿದೆ. ಕನ್ನಡ ಸಿನಿಮಾ ಜಗತ್ತಿನ ಬೆಳವಣಿಗೆಯ ಕಾಲಘಟ್ಟಗಳನ್ನು ಹಿಡಿದಿಡುವಂತಹ ಇಂತಹ ಸಂದರ್ಶನಗಳ ಗುಚ್ಛ ಇದುವರೆಗೆ ಬಂದಿರಲಿಲ್ಲ. ಆ ಕೊರತೆಯನ್ನು ಸಹ ಈ ಕೃತಿ ನೀಗಿಸಿದೆ. ಚಿತ್ರರಂಗದ ಅಧ್ಯಯನಾಸಕ್ತ ವಿದ್ಯಾರ್ಥಿಗಳು ಗಮನಿಸಲೇಬೇಕಾದ ಪಠ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT