ಚಳವಳಿಯ ಬಿತ್ತದಲ್ಲಿರುವುದು ಸಮಾನತೆ ಹಾಗೂ ನ್ಯಾಯದ ಅಪೇಕ್ಷೆ. ಆ ಹಂಬಲವೇ ಇಲ್ಲಿನ ರಚನೆಗಳ ಹೂರಣವೂ ಆಗಿದೆ. ಆಕ್ರೋಶ ಮತ್ತು ಭಾವುಕತೆ ಚಳವಳಿಯ ಹಾಡುಗಳಲ್ಲಿನ ಸಾಮಾನ್ಯ ಅಂಶಗಳು. ಬರಗೂರರ ಗೀತೆಗಳಲ್ಲೂ ಭಾವುಕತೆ ಇದೆ, ಭಾವಾವೇಶವಿಲ್ಲ. ಆಕ್ರೋಶದ ಬದಲು ಸತ್ಯಾಗ್ರಹಿಯ ಸಂಯಮವಿದೆ. ಈ ಸಾವಧಾನವೇ ಇಲ್ಲಿನ ರಚನೆಗಳನ್ನು ಚಳವಳಿಯ ಹಾಡುಗಳ ಪರಂಪರೆಯಲ್ಲಿ ಭಿನ್ನವಾಗಿ ನೋಡಲು ಒತ್ತಾಯಿಸುತ್ತವೆ. ನಲವತ್ತೆರಡು ಗೀತೆಗಳು ಈ ಸಂಕಲನದಲ್ಲಿವೆ. ಈ ಗೀತೆಗಳ ಮೂಲಕ ಬರಗೂರರ ವೈಚಾರಿಕತೆಯ ಪಾರ್ಶ್ವನೋಟ ಸಾಧ್ಯ. ಬರಗೂರರ ವಿಚಾರ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣುವ ಬೆವರು, ಬೆವರಿನ ಇಂಡಿಯಾ, ಜಾಲೀಮರ, ಶ್ರಮಜೀವಿ, ಕರುಳು, ಸೂರ್ಯ, ಮುಂತಾದ ಪ್ರತಿಮೆಗಳು ಇಲ್ಲಿನ ಹಾಡುಗಳಲ್ಲೂ ಇವೆ.