ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..

ನೀನಲ್ಲಿ ಹಸಿದು ಕೂತಿದ್ದೆ
ನಾನಿಲ್ಲಿ ಉಂಡು ತಾಂಬೂಲ ಮೆಲ್ಲುತ್ತಿದ್ದೆ
ನಾನು ಎಲೆ ತುಂಬ ಬಡಿಸಿಟ್ಟು ಕಾಯುತ್ತಿರುವಾಗ
ನೀನು ಮತ್ತಲ್ಲೋ ಉಂಡು ಮಲಗಿದ್ದೆ
ನಾವು ಯಾಕಾದರೂ ಹೀಗೆ
ಹೊಂದದ ಕೀಲಿಯೊಳಗಿನ ಕೀಲಿಕೈಗಳಂತೆ
ಯಾರು ಹೀಗೆ ನಮ್ಮನ್ನು ಬೆಸೆದದ್ದು
ಒಂದಾಗದ ನದಿಗಳ ಸೇರಿಸುವ
ಹಟ ತೊಟ್ಟವರಂತೆ
ನೀನಲ್ಲಿ ಸುಮ್ಮನೇ ನೆನೆದರೆ
ನಾನಿಲ್ಲಿ ಆಕಳಿಸುತ್ತೇನೆ
ನೀನಲ್ಲಿ ಹಾಳದವಳು ಎಂದು ಬೈದರೆ
ನಾನಿಲ್ಲಿ ಬಿಕ್ಕಳಿಸುತ್ತೇನೆ
ನೀ ಸಣ್ಣಗೆ ನೊಂದರೂ
ನಾನಿಲ್ಲಿ ಕಣ್ಣ ಹನಿಗಳ ಮಳೆಯಲ್ಲಿ
ತೊಯ್ಯುತ್ತೇನೆ
ನಾವು ಯಾಕಾದರೂ ಹೀಗೆ
ಉತ್ತರಗಳೇ ಇಲ್ಲದ ಪ್ರಶ್ನೆಗಳ ಮೂಟೆಯನ್ನು
ಹೊತ್ತುಬಂದಿದ್ದೇವೆ
ಲೇಖನ ಚಿಹ್ನೆಗಳ ವಿವರಿಸ ಹೊರಟು
ಅಂದಾಜು ತಪ್ಪಿದ್ದೇವೆ
ಸುಮ್ಮನೇ ನಿನ್ನ ನೆನೆಯುತ್ತ ಕೂತರೆ ಅಲ್ಪವಿರಾಮ
ನೆನೆಯುತ್ತ ಅರ್ಧಕ್ಕೆ ನೆನಪುಗಳ ಗಂಟು ಕಟ್ಟಿ
ಎಸೆದು ಹೊರಟರೆ ಅರ್ಧ ವಿರಾಮ
ನೆನಪುಗಳ ಸುಳಿಯಲ್ಲಿ ಸಿಲುಕಿಬಿಟ್ಟರೆ
ತಿಳಿದುಕೋ ಪೂರ್ಣವಿರಾಮವೇ...
ನಮ್ಮ ವಿವರಣೆ ಗುರಿ ತಲುಪುವುದಿಲ್ಲ
ನಾವು ಯಾಕಾದರೂ ಹೀಗೆ
ಬಾರಬಾರದ ಪತ್ರ ಪೋಸ್ಟಾದಂತೆ
ಬ್ರಹ್ಮ ಗಂಟಿನ ತಪ್ಪು ಲೆಕ್ಕದಲ್ಲಿ
ಬಂಧಿಯಾದವರಂತೆ
ಒಂದಾಗಿದ್ದೇವೆ ಇಲ್ಲಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.