ಮತ ಎಣಿಕೆಗೆ ಸಕಲ ಸಿದ್ಧತೆ

ನರಗುಂದ: ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ನಾಲ್ಕು ದಿನ ಗತಿಸಿದೆ. ಅಭ್ಯರ್ಥಿಗಳ ಚಿತ್ತ ಮತ ಎಣಿಕೆಯತ್ತ ಇದ್ದರೆ, ತಾಲ್ಲೂಕು ಆಡಳಿತ ಹಾಗೂ ಚುನಾವಣೆ ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಸಬೇಕು ಎಂಬ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಇರಿಸಲಾಗಿದೆ. ಇದೇ 5ರಂದು ಇದೇ ಕಾಲೇಜಿನಲ್ಲಿ ಮತ ಎಣಿಕೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ವಿ.ಎಚ್.ಕೊತಬಾಳ, ಗ್ರೇಡ್–2 ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ಸಿಬ್ಬಂದಿ ಮತ ಎಣಿಕೆ ಕೊಠಡಿಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ 13 ಗ್ರಾಮ ಪಂಚಾಯ್ತಿಗಳ 158 ಸ್ಥಾನಗಳಿಗೆ ಚುನಾವಣೆ ನಡೆದದ್ದು ಶೇ 83.32 ಮತದಾನ ನಡೆದಿದೆ. 41,115 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 21,524 ಪುರುಷರು, 19,591 ಮಹಿಳೆಯರು ಮತ ಚಲಾಯಿಸಿದ್ದಾರೆ.
ಈ ಎಲ್ಲ ಮತಗಳ ಎಣಿಕೆ ಇದೇ 5ರಂದು ಸಿದ್ದೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಇಲ್ಲಿ 4 ಕೊಠಡಿಗಳಲ್ಲಿ 19 ಟೇಬಲ್ಗಳಲ್ಲಿ ಎಣಿಕೆಗೆ ಸಿದ್ಧತೆ ನಡೆದಿದೆ. ಮತ ಎಣಿಕೆ ಮಾಡುವ 21 ಸಿಬ್ಬಂದಿಗೆ ಇದೇ 3ರಂದು ಗದಗನಲ್ಲಿ ತರಬೇತಿ ನಡೆಯಲಿದೆ. ಒಟ್ಟು 61 ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಗೊಳ್ಳಲಿದ್ದಾರೆ.
ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಗೊಂದಲ ನಡೆಯದಂತೆ ಪೊಲೀಸ್ ಸಿಬ್ಬಂದಿಯಿಂದ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ ಎಂದು ತಹಶೀಲ್ದಾರ್ ವಿ.ಎಚ್.ಕೊತಬಾಳ ತಿಳಿಸಿದರು.ಈ ಸಂದರ್ಭದಲ್ಲಿ ಡಿಎಸ್ಪಿ ಗುರು ಮತ್ತೂರು, ಸಿಪಿಐ ರಮಾಕಾಂತ, ಕಂದಾಯ ನಿರೀಕ್ಷಕ ಎಂ.ಬಿ.ವೇಲೂರು, ಕೊಂಗವಾಡ, ರಡ್ಡೇರ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.