ಮೀಟರ್ ಇಲ್ಲದ ನಲ್ಲಿ ಸಂಪರ್ಕ ಕಡಿತ

ಬೆಂಗಳೂರು: ‘ಮೇ 31ರೊಳಗೆ ಮೀಟರ್ ಅಳವಡಿಕೆ ಮಾಡಿಕೊಳ್ಳದ ಎಲ್ಲ ನಲ್ಲಿ ಸಂಪರ್ಕಗಳನ್ನು ಕಡಿತಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಜಲಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.ನೀರಿನ ಸಮಸ್ಯೆ ಕುರಿತಂತೆ ಬುಧವಾರ ನಡೆಸಲಾದ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಅವರು ಈ ಆದೇಶ ನೀಡಿದರು.
‘ಬಿಬಿಎಂಪಿ ವ್ಯಾಪ್ತಿಗೆ ಸೇರಿದ ನಗರಸಭೆ (ಸಿಎಂಸಿ)ಗಳ ಪ್ರದೇಶದಲ್ಲಿ ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಬಹುತೇಕರು ಸಂಪರ್ಕ ಪಡೆದರೂ ಮೀಟರ್ ಅಳವಡಿಸಿಕೊಂಡಿಲ್ಲ. ಇದರಿಂದ ಶೇ 70ರಷ್ಟು ಪ್ರಮಾಣದ ನೀರಿಗೆ ಯಾವುದೇ ಶುಲ್ಕ ಸಲ್ಲಿಕೆ ಆಗುತ್ತಿಲ್ಲ’ ಎಂದು ಜಲಮಂಡಳಿ ಅಧ್ಯಕ್ಷ ಎಂ.ಎಸ್. ರವಿಶಂಕರ್ ಅಸಹಾಯಕತೆ ವ್ಯಕ್ತಪಡಿಸಿದರು.
‘ಬಿಟ್ಟಿಯಾಗಿ ನೀರು ಪಡೆಯುವವರನ್ನು ಯಾವ ಪಕ್ಷದ ಮುಖಂಡರೂ ಬೆಂಬಲಿಸುವುದಿಲ್ಲ. ಮೀಟರ್ ಅಳವಡಿಕೆಗೆ ಮೇ 31ರವರೆಗೆ ಅವಕಾಶ ನೀಡಬೇಕು. ಮೀಟರ್ ಅಳವಡಿಕೆ ಮಾಡಿಕೊಳ್ಳದ ಎಲ್ಲ ಸಂಪರ್ಕಗಳನ್ನು ತೆಗೆದುಹಾಕಬೇಕು’ ಎಂದು ಸಚಿವರು ತಿಳಿಸಿದರು.‘ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ಕಾಮಗಾರಿ ಕೆಲವೆಡೆ ಅಪೂರ್ಣಗೊಂಡಿದೆ. ಆದ್ಯತೆ ಮೇರೆಗೆ ಆ ಕೆಲಸವನ್ನು ಪೂರ್ಣಗೊಳಿಸ
ಬೇಕು. ಕಾಮಗಾರಿಯಿಂದ ಜನ ತುಂಬಾ ಸಮಸ್ಯೆ ಎದುರಿಸಿದ್ದಾರೆ’ ಎಂದರು.
ಮೀಟರ್ ಇಲ್ಲದ ನಲ್ಲಿ ಸಂಪರ್ಕ ಕಡಿತ
‘ಜಲಮಂಡಳಿ ಕೆಲಸ ಮುಗಿದ ಮೇಲೆ ಹಾಳಾಗಿರುವ ರಸ್ತೆಗಳನ್ನು ಬಿಬಿಎಂಪಿ ವತಿಯಿಂದ ದುರಸ್ತಿಗೊಳಿಸಲಾಗುತ್ತದೆ ಕಾವೇರಿಯಿಂದ ರಾಜ್ಯಕ್ಕೆ ಲಭ್ಯವಾಗಿರುವ ಹೆಚ್ಚುವರಿ ನೀರಿನಲ್ಲಿ 10 ಟಿಎಂಸಿ ಅಡಿಯಷ್ಟು ನೀರನ್ನು ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಕುಡಿಯುವ ನೀರಿಗಾಗಿ ಹಂಚಿಕೆ ಮಾಡಲಾಗಿದೆ. ಕಾವೇರಿ 5ನೇ ಹಂತದ ಮೂಲಕ ಈ ಹಳ್ಳಿಗಳಿಗೆ ನೀರು ಪೂರೈಸಲು ಮುಂದಿನ ಮಾರ್ಚ್ನಿಂದ ಕಾಮಗಾರಿ ಆರಂಭವಾಗಲಿದೆ. ಅದಕ್ಕೆ ಪೂರ್ವ ತಯಾರಿಗಳು ನಡೆದಿವೆ’ ಎಂದು ಹೇಳಿದರು.
‘ಸಾರ್ವಜನಿಕ ಶೌಚಾಲಯಗಳಿಗೆ ಉಚಿತವಾಗಿ ನೀರು ಪೂರೈಸಬೇಕು’ ಎಂದು ಮೇಯರ್ ಬಿ.ಎಸ್. ಸತ್ಯನಾರಾಯಣ ಬೇಡಿಕೆ ಇಟ್ಟರು. ‘ಯಾವ ಶೌಚಾಲಯಗಳನ್ನು ಲಾಭದ ಉದ್ದೇಶದಿಂದ ನಡೆಸುವುದಿಲ್ಲವೋ ಅಂತಹ ಶೌಚಾಲಯಗಳಿಗೆ ಉಚಿತ ನೀರು ಪೂರೈಕೆ ಮಾಡಲಾಗುವುದು’ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು ಸ್ಪಷ್ಟಪಡಿಸಿದರು.
ಕೊಳವೆ ಬಾವಿಗಳು: ‘ಬಿಬಿಎಂಪಿ ಸುಪರ್ದಿಯಲ್ಲಿರುವ 12 ಸಾವಿರ ಕೊಳವೆ ಬಾವಿಗಳನ್ನು ಜಲಮಂಡಳಿಯೇ ನಿರ್ವಹಣೆ ಮಾಡಬೇಕು. ಬೇಸಿಗೆಯ ಉಳಿದ ಅವಧಿಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಮೇಯರ್ ಕೇಳಿದರು.‘ಮೋಟಾರು ಸೌಲಭ್ಯ ಹೊಂದಿದ 8,901 ಹಾಗೂ ಕೈ ಪಂಪ್ ವ್ಯವಸ್ಥೆಯುಳ್ಳ 3,300 ಕೊಳವೆ ಬಾವಿಗಳು ಜಲಮಂಡಳಿ ಸುಪರ್ದಿಯಲ್ಲಿವೆ.
ಅದರ ಜತೆಗೆ ಬಿಬಿಎಂಪಿಗೆ ಸೇರಿದ 12 ಸಾವಿರ ಕೊಳವೆ ಬಾವಿಗಳ ಹೊಣೆಯನ್ನೂ ಪಡೆದರೆ, ಅವುಗಳ ನಿರ್ವಹಣೆಗೆ ಬೇಕಾದಷ್ಟು ಹಣಕಾಸಿನ ವ್ಯವಸ್ಥೆ ನಮ್ಮಲ್ಲಿಲ್ಲ’ ಎಂದು ರವಿಶಂಕರ್ ಉತ್ತರಿಸಿದರು. ‘ಕೊಳವೆ ಬಾವಿಗಳ ನಿರ್ವಹಣೆಗೆ ವಾರ್ಷಿಕ ₨ 18 ಕೋಟಿಯಿಂದ 20 ಕೋಟಿ ಅನುದಾನ ಬೇಕಾಗುತ್ತದೆ. ಈ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕದಿಂದ ಈಗಾಗಲೇ ₨ 184 ಕೋಟಿ ಬೆಸ್ಕಾಂ ಬಾಕಿ ಮಂಡಳಿ ಮೇಲಿದೆ. ಸರ್ಕಾರಕ್ಕೆ ಪತ್ರ ಬರೆದರೆ ಅನುದಾನ ಅಲಭ್ಯ ಎಂಬ ಶರಾದೊಂದಿಗೆ ಮನವಿ ವಾಪಸು ಬಂದಿದೆ’ ಎಂದು ವಿವರಿಸಿದರು. ‘ಕೊಳವೆ ಬಾವಿಗಳ ಸಂಪರ್ಕದಿಂದ ಯಾವುದೇ ಕಂದಾಯ ಸಿಗುವುದಿಲ್ಲ. ಅಲ್ಲದೆ ಅಧಿಕ ಹೊರೆಯನ್ನು ಮಂಡಳಿ ಹೊರಬೇಕಾಗುತ್ತದೆ’ ಎಂದು ಆತಂಕ ಹೊರಹಾಕಿದರು.
‘ಕೊಳವೆ ಬಾವಿಗಳ ನಿರ್ವಹಣೆಗೆ ಅಗತ್ಯವಾದ ಅನುದಾನವನ್ನು ಬಿಬಿಎಂಪಿಯಿಂದ ಭರಿಸಲಾಗುವುದು. ವಿದ್ಯುತ್ ಬಾಕಿ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು’ ಎಂದು ಸಚಿವರು ತಿಳಿಸಿದರು. ಆಗ ಜಲಮಂಡಳಿ ಅಧಿಕಾರಿಗಳು ಬಿಬಿಎಂಪಿ ಕೊಳವೆ ಬಾವಿಗಳ ನಿರ್ವಹಣೆಗೆ ಒಪ್ಪಿಗೆ ಸೂಚಿಸಿದರು.
‘ಚರಂಡಿಗಳ ಹೂಳು ತೆಗೆಯಲು 119 ಮಷಿನ್ಗಳ ನಿಯೋಜನೆ ಮಾಡಲಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಎಲ್ಲ ದೊಡ್ಡ ಚರಂಡಿಗಳ ಹೂಳು ತೆಗೆಯಲಾಗುತ್ತದೆ’ ಎಂದು ತಿಳಿಸಿದರು.
‘ಶುಲ್ಕ ಹೆಚ್ಚಳಕ್ಕೆ ಬೇಕಿದೆ ಒಪ್ಪಿಗೆ’
ಬೆಂಗಳೂರು: ‘ಜಲಮಂಡಳಿಯು ಪ್ರತಿವರ್ಷ ₨ 200 ಕೋಟಿಯಷ್ಟು ನಷ್ಟ ಅನುಭವಿಸುತ್ತಿದ್ದು, ನೀರಿನ ಶುಲ್ಕ ಹೆಚ್ಚಳ ಮಾಡಲು ಸರ್ಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ’ ಎಂದು ಮಂಡಳಿ ಅಧ್ಯಕ್ಷ ಎಂ.ಎಸ್. ರವಿಶಂಕರ್ ತಿಳಿಸಿದರು.
ನೀರಿನ ಸಮಸ್ಯೆ ಕುರಿತು ಸಚಿವರು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ದರ ಹೆಚ್ಚಿಸಲು ಐದು ತಿಂಗಳಿನಿಂದ ಪ್ರಯತ್ನ ನಡೆಸಲಾಗುತ್ತಿದೆ. ಸರ್ಕಾರ ಇನ್ನೂ ಅನುಮತಿ ನೀಡಿಲ್ಲ’ ಎಂದು ಹೇಳಿದರು. ‘ಹತ್ತು ವರ್ಷಗಳಿಂದ ಒಮ್ಮೆಯೂ ದರ ಏರಿಕೆ ಮಾಡಿಲ್ಲ. ವೆಚ್ಚ ಮಾತ್ರ ಏರುತ್ತಲೇ ಇದೆ. ಇಂತಹ ವಾತಾವರಣದಲ್ಲಿ ಮಂಡಳಿ ತನ್ನ ಜವಾಬ್ದಾರಿ ನಿರ್ವಹಿಸುವುದು ಹೇಗೆ’ ಎಂದು ಕೇಳಿದರು.
‘ಸಿಬ್ಬಂದಿ ಕೊರತೆಯೂ ಹೆಚ್ಚಾಗಿದ್ದು, ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರದ ಒಪ್ಪಿಗೆಗಾಗಿ ಎದುರು ನೋಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಕೊಳವೆ ಬಾವಿ: ಅನುಮತಿ ಕಡ್ಡಾಯ
ಬೆಂಗಳೂರು: ‘ನಗರದಲ್ಲಿ ಇನ್ನುಮುಂದೆ ಖಾಸಗಿಯವರು ಕೊಳವೆ ಬಾವಿ ಕೊರೆಯಲು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಿಂದ ಸಮೀಕ್ಷೆ ನಡೆಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಂತರ್ಜಲದ ಮಟ್ಟವನ್ನು ಗಣನೆಗೆ ತೆಗೆದುಕೊಂಡು ಅನುಮತಿ ಕೊಡಬೇಕೋ, ಬೇಡವೋ ಎನ್ನುವ ಕುರಿತು ಸಮಿತಿ ವರದಿ ನೀಡುತ್ತದೆ’ ಎಂದು ರವಿಶಂಕರ್ ಹೇಳಿದರು.
ಕೊಳವೆ ಬಾವಿಗಳನ್ನು ಹೊಂದಿದವರು ಜಲಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಇದುವರೆಗೆ 90 ಸಾವಿರ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ನೋಂದಣಿಯಾಗದ ಕೊಳವೆ ಬಾವಿಗಳನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.