ಮೇವು ಕೊಡ್ಸಿ ಸಾಹೇಬ್ರ..

ಗದಗ: `ಮಳಿ ಇಲ್ಲ, ಬೆಳಿ ಇಲ್ಲ, ದನಕರುಗಳಿಗೆ ಮೇವು ಕೊಡ್ರಿ, ರಾಷ್ಟ್ರೀಕೃತ ಬ್ಯಾಂಕಿನ್ಯಾಗಿನ ಸಾಲಾ ಮನ್ನಾ ಮಾಡಿಸ್ರಿ ಸಾಹೇಬ್ರ~
ಜಿಲ್ಲೆಯ ವಿವಿಧ ತಾಲ್ಲೂಕಿಗೆ ಬುಧವಾರ ಭೇಟಿ ನೀಡಿದ ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆಯ ವ್ಯವಸ್ಥಾಪಕ ಪ್ರವೇಶ ಶರ್ಮಾ ನೇತೃತ್ವದ ಬರ ಅಧ್ಯಯನ ತಂಡದ ಎದುರು ರೈತರು ತಮ್ಮ ಅಳಲು ತೋಡಿಕೊಂಡರು.
ಎರಡ್ ವರ್ಷದಿಂದ್ ಮಳಿ ಇಲ್ದ್ ಬೆಳಿನೂ ಬೆಳೆದಿಲ್ಲ, ದನಕರುಗಳಿಗೆ ಮೇವು ಇಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಿಸಿಕೊಡ್ರಿ, ಕೆಲಸ ಕೊಡಿಸ್ರಿ~ ಎಂದು ಅಂಗಲಾಚಿದರು.
ಮೊದಲಿಗೆ ತಂಡದ ಸದಸ್ಯರು ಗದುಗಿನ ಗೋಶಾಲೆಗೆ ಭೇಟಿ ನೀಡಿ, ಜಾನುವಾರುಗಳಿಗೆ ನೀಡುತ್ತಿರುವ ಮೇವು, ವೈದ್ಯಕೀಯ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಹೊಂಬಳ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. `ಮಳೆ ಇಲ್ದ್ ಕೆಲ್ಸಾನೂ ಇಲ್ಲ. ಮಕ್ಳು, ಹೆಣ್ಮಕ್ಕಳು ಮತ್ತು ಗಂಡಸರು ಕೂಲಿ ಹುಡ್ಕೊಂಡು ಗೋವಾ, ಮಂಗಳೂರು, ಬೆಂಗಳೂರಿಗೆ ಗುಳೆ ಹೋಗ್ಯಾರ. ಸಹಕಾರಿ ಸಂಘಗಳಲ್ಲಿ ಹೆಚ್ಚು ಸಾಲ ಕೊಡಲ್ಲ ಅದಕ್ಕ ರಾಷ್ಟ್ರೀಕೃತ ಬ್ಯಾಂಕಿನ್ಯಾಗ್ ಸಾಲ ಮಾಡಿವಿ. ಸಾಲ ಮನ್ನಾ ಮಾಡಿಸಿಕೊಡ್ರಿ ಸ್ವಾಮಿ~ ಎಂದು ಗ್ರಾಮದ ರೈತರ ಪರವಾಗಿ ಮಲ್ಲಪ್ಪ ಮನವಿ ಮಾಡಿಕೊಂಡರು.
`ಕುಡಿಯೋಕೆ ನೀರಿಲ್ಲ. ಕೆರೆ ನೀರ್ ಕುಡಿಬ್ಯಾಡಿ ಎಂದು ಡಾಕ್ಟರ್ ಹೇಳ್ಯಾರ್ ಅದಕ್ ಕೆರೆ ಹೂಳೆತ್ತಿಸಿ, ಸ್ವಚ್ಛ ಮಾಡಿಕೊಡಿ~ ಎಂದು ಆಗ್ರಹಿಸಿದರು. ಬಳಿಕ ಅಧಿಕಾರಿಗಳ ತಂಡ ಬಳಾಗನೂರ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿತು. ಎ. ನಂದಕುಮಾರ, ರಂಗಾರಡ್ಡಿ ಮತ್ತು ಮುಖೇಶ ಶರ್ಮಾ ಅವರನ್ನು ಒಳಗೊಂಡ ಮತ್ತೊಂದು ತಂಡ ಮುಂಡರಗಿ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಬೆಳಿಗ್ಗೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರೊಂದಿಗೆ ಬರ ಅಧ್ಯಯನ ತಂಡದ ಅಧಿಕಾರಿಗಳು ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.