೧೮ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವುದೇ ಶಸ್ತ್ರಚಿಕಿತ್ಸೆಯನ್ನು ಈಗಿನ ಹಾಗೆ ಪ್ರಜ್ಞೆ ತಪ್ಪಿಸಿ ನೋವಿಲ್ಲದೆ ಮಾಡುತ್ತಿರಲಿಲ್ಲ. ಕೈ,ಕಾಲುಗಳನ್ನು ಕಟ್ಟಿ ಹಾಕಿ ರೋಗಿಗಳ ಆಕ್ರಂದನದ ನಡುವೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದರೆ ನಂಬಲು ಕಷ್ಟ.
ಇದಕ್ಕಿಂತ ಮುಂಚೆ ಕ್ರಿ.ಪೂ. ೫೦೦ರಲ್ಲ ನಮ್ಮ ದೇಶದ ಮಹಾನ್ ಶಸ್ತ್ರಚಿಕಿತ್ಸಕ ಶುಶ್ರೂತನ ಕಾಲದಲ್ಲಿ ಅರಿವಳಿಕೆ ಔಷಧಿಯಾಗಿ ಓಪೀಯಮ್, ವೈನ್, ಇಂಡಿಯನ್ ಹಂಪ್ ಕೊನೆಗೆ ಕೈ-ಕಾಲುಗಳನ್ನು ಕಟ್ಟಿ ಹಾಕಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಉಲ್ಲೇಖವಿದೆ. ೫೨೭ ಎ.ಡಿ. ರಾಜ ಭೋಜನಿಗೆ ಭೋಜ ಪ್ರಭಂದ ಎಂಬಾತ ತಲೆ ಬುರುಡೆಯ ಶಸ್ತ್ರ ಚಿಕಿತ್ಸೆಯನ್ನು ಸಮ್ಮೋಹಿನಿ ಮತ್ತು ಸಂಜೀವಿನಿ ಎಂಬ ತಂತ್ರಗಳನ್ನು ಬಳಸಿದ್ದ. ನಂತರ ಅಲ್ಕೋಹಾಲ್ ಬಳಕೆ ಮಹಮ್ಮದೀಯರ ಆಳ್ವಿಕೆಯ ವೇಳೆಯಲ್ಲಿ ಬಳಕೆಗೆ ಬಂತು. (೧೯೬೨ರಲ್ಲಿ ವೈದ್ಯಲೋಕಕ್ಕೆ ಕೊಡುಗೆಯಾಗಿ ಪ್ರೊ. ಎಚ್. ವಾಸ್ತಿ ಲಾಹೋರ (ಪಾಕಿಸ್ತಾನ) ಅವರು ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ) ನಂತರ ಸಮ್ಮೋಹನ ಮೂಲಕ ಪ್ರಜ್ಞೆ ತಪ್ಪಿಸುವ ತಂತ್ರ ಪ್ರಚಲಿತವಾಗಿತ್ತು. ಇವೆಲ್ಲಾ ತೊಂದರೆಗಳಿಗೆ ಕೊನೆಯಾದ ದಿನ ೧೬ ಅಕ್ಟೋಬರ್ ೧೮೪೬.
ಇದಕ್ಕಿಂತ ಪೂರ್ವದಲ್ಲಿ ಅರಿವಳಿಕೆ ಬಗ್ಗೆ ಅನೇಕ ಪ್ರಯೋಗಗಳು ಯಶಸ್ವಿಯಾಗಿದ್ದರೂ, ಅಧಿಕೃತವಾಗಿರಲಿಲ್ಲ. ಆದ್ದರಿಂದ ಅಧಿಕೃತವಾಗಿ ಅರಿವಳಿಕೆ ದ್ರಾವಣವನ್ನು ಬಳಸಿ ಸ್ಪರ್ಶ ಮತ್ತು ನೋವು ಇಲ್ಲದೇ ಶಸ್ತ್ರಚಿಕಿತ್ಸೆ ನೆರವೇರಿಸಿ ತೋರಿಸಿದ ಪ್ರಥಮ ವೈದ್ಯ ಡಾ. ಡಬ್ಲ್ಯೂ.ಟಿ.ಜಿ. ಮೋರ್ಟಾನ್. ಅವರ ಗೌರವಾರ್ಥ ಅ. 16ರಂದು ಜಗತ್ತಿನಾದ್ಯಂತ ಅರಿವಳಿಕೆ ದಿನ ಎಂಬುದಾಗಿ ಆಚರಿಸಲಾಗುತ್ತದೆ.
ಅರಿವಳಿಕೆ ಶಾಸ್ತ್ರವನ್ನು ಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ ವೈದ್ಯ ಡಾ. ಡಬ್ಲ್ಯೂ.ಟಿ.ಜಿ. ಮೋರ್ಟಾನ್ ಬೋಸ್ಟಾನ್- ಅಮೆರಿಕ ಎಂಬುವವರು ಈ ದಿನ ಗಿಲ್ಬರ್ಟ್ ಅಬಟ್ಟೊ ಎಂಬ ರೋಗಿಯ ಬಾಯಲ್ಲಿನ ಸಣ್ಣ ಗಡ್ಡೆಯನ್ನು ತೆಗೆಯುವುದಕ್ಕಾಗಿ ಈಥರ್ ಎಂಬ ದ್ರಾವಣವನ್ನು ಬಳಸಿ ನೋವಿಲ್ಲದೇ ಗಡ್ಡೆಯನ್ನು ತೆಗೆದಾಗ ವೈದ್ಯ ಲೋಕಕ್ಕಾದ ಸಂಚಲನ ಅಪಾರ.
ಅನೇಕ ಸಂದರ್ಭದಲ್ಲಿ ವೈದ್ಯರು ತಮ್ಮ ಮೇಲೆಯೇ ಅರಿವಳಿಕೆ ಮದ್ದಿನ ಪ್ರಯೋಗ ಮಾಡಿಕೊಂಡು ತೊಂದರೆ ಅನುಭವಿಸಿದ ನಿದರ್ಶನಗಳಿವೆ. ಇನ್ನೂ ಕೆಲ ವೈದ್ಯರು ಅರಿವಳಿಕೆ ಔಷಧಗಳ ವ್ಯಸನಿಗಳಾಗಿ ತೊಂದರೆ ಅನುಭವಿಸಿದ್ದಾರೆ.
ಕೆಲವು ಅರಿವಳಿಕೆ ವೈದ್ಯ ವಿಜ್ಞಾನಿಗಳ ಪರಿಚಯ ಮತ್ತು ಕೊಡುಗೆ ಕೆಳಗಿನಂತಿದೆ.
ಹೊರೆಸ್ ವೆಲ್ಸ್:- ನೈಟ್ರಸ್ ಆಕ್ಸೈಡ್ ನಿಲವನ್ನು ಅರಿವಳಿಕೆಗೆ ಬಳಸುವುದನ್ನು ತೋರಿಸಿಕೊಟ್ಟ ಮೊದಲ ವೈದ್ಯ.
ಜೇಮ್ಸ್ ಯಂಗ್ ಸಿಮ್ಸನ್:- ಕ್ಲೋರೊಫಾರ್ಮ್ ದ್ರಾವಣ ಬಳಸುವುದನ್ನು ಜಗತ್ತಿಗೆ ಪರಿಚಯಿಸಿದ ಮೊದಲ ವಿಜ್ಞಾನಿ.
ಸರ್ ಇವಾನ್ ಮ್ಯಾಗಿಲ್:- ನೇರವಾಗಿ ಶ್ವಾಸಕೋಶಕ್ಕೆ ಅರಿವಳಿಕೆ ಮದ್ದು ತಲುಪುವಂತೆ ನಳಿಕೆಗಳನ್ನು (ಎಂಡೋ ಟ್ರಕಿಯಲ್ ಟ್ಯೂಬ್) ತಯಾರಿಸಿದ ಮೊದಲ ವೈದ್ಯ.
ಕಾರ್ಲ ಕ್ವಾಲರ್:- ಎಂಬ ನೇತ್ರ ಚಿಕಿತ್ಸಾ ತಜ್ಞ, ಶಸ್ತ್ರಚಿಕಿತ್ಸೆಗೆ ಒಳಗಾಗುವ ದೇಹದ ಭಾಗದಲ್ಲಿ ಸ್ಪರ್ಶ ಜ್ಞಾನ ಇಲ್ಲದಂತೆ ಮಾಡುವ ಔಷಧ ಕೊಕೇನ್ ಅನ್ನು ಕಂಡುಹಿಡಿದ ವೈದ್ಯ.
ಆಗಸ್ಟ್ ಬೀಯರ್:- ಬೆನ್ನು ಹುರಿಯ ಮೂಲಕ ಅರಿವಳಿಕೆ ಚುಚ್ಚು ಮದ್ದು ಕಂಡು ಹಿಡಿದ ವೈದ್ಯ.
ಕ್ರೀಮಿಯಾ ವಾರ್ ಎಂಬ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಸಂದರ್ಭದಲ್ಲಿ ಮೊದಲ ಬಾರಿಗೆ ಕ್ಲೋರೋಫಾರ್ಮ್ ದ್ರಾವಣವನ್ನು ಆಮ್ಲಜನಕದೊಂದಿಗೆ ಬೆರಸಿ, ಸಿದ್ಧಪಡಿಸಿದ ಅರಿವಳಿಕೆಯನ್ನು ಬಳಸಿದರು. ಭಾರತದಲ್ಲಿ ೧೯೨೦ರಿಂದ ಕ್ಲೋರೋಫಾರ್ಮ್ ಬಳಕೆ ಆರಂಭವಾಯಿತು. ಮಹಾತ್ಮ ಗಾಂಧೀಜಿ ಅವರಿಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ದಾಟೆ ಎಂಬ ವೈದ್ಯರು (೧೨ ಜನವರಿ ೧೯೨೫, ಪುಣೆಯ ಸಸೂನ್ ಆಸ್ಪತ್ರೆ) ಕ್ಲೋರೋಫಾರ್ಮ್ ಅನ್ನು ಬಳಸಿದ್ದರು. ನಂತರ, ಪ್ರಥಮ ಜಾಗತಿಕ ಯುದ್ಧದಲ್ಲಿ ಅರಿವಳಿಕೆ ನೀಡುವ ಬಾಯಲ್ಸ್ ಯಂತ್ರವನ್ನು ಸಂಶೋಧಿಸಲಾಯಿತು.
ಸದ್ಯ ಅರಿವಳಿಕೆಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ರೋಗಿಗೆ ಒಂದು ವೇಳೆ ಅಪಾಯವಾದಲ್ಲಿ ಹೆಚ್ಚಿನ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯವೇ ಕಾರಣ ಹೊರತು ಈಗಿರುವ ಯಾವುದೇ ಅರಿವಳಿಕೆ ಮದ್ದು ಅಪಾಯಕಾರಿ ಅಲ್ಲ ಎಂದು ಹೇಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.