ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಐದು ಬ್ಯಾಂಕ್ಗಳ ಬಂಡವಾಳ ಅಗತ್ಯ ಪೂರೈಸಲು ₹ 11,336 ಕೋಟಿಗಳ ನೆರವು ನೀಡುವು ದಕ್ಕೆ ಹಣಕಾಸು ಸಚಿವಾಲಯ ಸಮ್ಮತಿ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಕಾರ್ಪೊರೇಷನ್ ಬ್ಯಾಂಕ್, ಆಂಧ್ರಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ಗಳಿಗೆ ಈ ನೆರವು ಸಿಗಲಿದೆ. ಬಂಡವಾಳ ಕೊರತೆ ಎದುರಿಸುತ್ತಿರುವ ಬ್ಯಾಂಕ್ಗಳನ್ನು ಮಾತ್ರ ಈ ನೆರವು ನೀಡಲು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ನೀರವ್ ಮೋದಿ ಹಗರಣದಿಂದ ತತ್ತರಿಸಿರುವ ‘ಪಿಎನ್ಬಿ’ ಈ ನೆರವಿನಲ್ಲಿ ಹೆಚ್ಚಿನ ಪಾಲು ಪಡೆಯಲಿದೆ. ಬ್ಯಾಂಕ್ಗಳು ಹೆಚ್ಚುವರಿ ‘ಎಟಿ–1’ ಬಾಂಡ್ ಹೊಂದಿರುವವರಿಗೆ ಬಡ್ಡಿ ಪಾವತಿ ಮಾಡಬೇಕಾಗಿದೆ. ಇದರಿಂದಾಗಿ ಬ್ಯಾಂಕ್ಗಳು ನಿಯಮಗಳ ಪ್ರಕಾರ ಹೊಂದಿರಬೇಕಾದ ಬಂಡವಾಳದ ಪ್ರಮಾಣ ಕಡಿಮೆಯಾಗಲಿದೆ. ವಸೂಲಾಗದ ಸಾಲದ ಪ್ರಮಾಣದಲ್ಲಿನ ಹೆಚ್ಚಳ, ಹೆಚ್ಚುತ್ತಿರುವ ನಷ್ಟದ ಕಾರಣಕ್ಕೆ ಬ್ಯಾಂಕ್ ಗಳು ತಮ್ಮ ಸ್ವಂತ ಗಳಿಕೆಯಿಂದ ಬಾಂಡ್ಗಳಿಗೆ ಬಡ್ಡಿ ಪಾವತಿಸುವುದು ಸಾಧ್ಯವಾಗುತ್ತಿಲ್ಲ. ಈ ತೊಂದರೆ ನಿವಾರಿಸಲು ಸರ್ಕಾರ ಈ ನೆರವು ಘೋಷಿಸಿದೆ.
ಎರಡು ವರ್ಷಗಳಲ್ಲಿ ಸರ್ಕಾರ ಬ್ಯಾಂಕ್ಗಳಿಗೆ ನೀಡಲಿರುವ ₹ 2.11 ಲಕ್ಷ ಕೋಟಿ ಪುನರ್ಧನ ನೆರವಿನ ಭಾಗ ಇದಾಗಿದೆ. ಈ ಹಣಕಾಸು ವರ್ಷದ ₹ 65 ಸಾವಿರ ಕೋಟಿಗಳಲ್ಲಿನ ಮೊದಲ ಕಂತು ಈಗ ಬಿಡುಗಡೆ ಮಾಡಲಾಗುತ್ತಿದೆ. ಉಳಿದ ₹ 53,664 ಕೋಟಿಗಳನ್ನು ಮುಂಬರುವ ದಿನಗಳಲ್ಲಿ ಬ್ಯಾಂಕ್ಗಳಿಗೆ ವಿತರಿಸಲಾಗುವುದು.
ಇನ್ನೂ ಎರಡರಿಂದ ಮೂರು ಬ್ಯಾಂಕ್ಗಳ ಹಣಕಾಸು ಅಗತ್ಯಗಳನ್ನೂ ಹಣಕಾಸು ಸಚಿವಾಲಯವು ಪರಿಶೀಲಿಸುತ್ತಿದೆ. ಇವುಗಳಿಗೆ ದ್ವಿತೀಯ ತ್ರೈಮಾಸಿಕದಲ್ಲಿ ನೆರವು ನೀಡಲು ಉದ್ದೇಶಿಸಲಾಗಿದೆ.
ಕೆಲ ಬ್ಯಾಂಕ್ಗಳು ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆಗೂ ಚಾಲನೆ ನೀಡಿವೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ₹ 8 ಸಾವಿರ ಕೋಟಿ ಸಂಗ್ರಹಿಸಲು ಈಗಾಗಲೇ ಷೇರುದಾರರ ಒಪ್ಪಿಗೆ ಪಡೆದುಕೊಂಡಿದೆ.