ನವದೆಹಲಿ: ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರವು ಶೇ 5ರಷ್ಟು ಕಡಿತಗೊಳಿಸಿದೆ. ಬುಧವಾರದಿಂದಲೇ (ಜೂನ್ 30) ಹೊಸ ಆಮದು ಸುಂಕ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.
ಈ ಕ್ರಮವು ದೇಶಿ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಇಳಿಕೆಗೆ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಚ್ಚಾ ತಾಳೆ ಎಣ್ಣೆಗೆ ಶೇ 15ರಷ್ಟಿದ್ದ ಆಮದು ಸುಂಕವನ್ನು ಸರ್ಕಾರ ಶೇ 10ಕ್ಕೆ ಇಳಿಕೆ ಮಾಡಿದೆ. ಇತರ ತಾಳೆ ಎಣ್ಣೆಗಳ ಮೇಲಿನ ಆಮದು ತೆರಿಗೆಯನ್ನು ಶೇ 37.5ಕ್ಕೆ ಇಳಿಸಿದೆ. ಇತರ ತಾಳೆ ಎಣ್ಣೆಗಳ ಮೇಲೆ ಶೇ 45ರಷ್ಟು ಆಮದು ತೆರಿಗೆ ವಿಧಿಸಲಾಗುತ್ತಿತ್ತು. ಹೊಸ ಪ್ರಮಾಣವು 2021ರ ಜೂನ್ 30ರಿಂದ ಸೆಪ್ಟೆಂಬರ್ 30ರ ವರೆಗೂ ಅನ್ವಯವಾಗಲಿದೆ.
2020ರ ಸೆಪ್ಟೆಂಬರ್ ಬಳಿಕ ತಾಳೆಎಣ್ಣೆ, ಸೂರ್ಯಕಾಂತಿ, ಶೇಂಗಾ ಎಣ್ಣೆಯ ಬೆಲೆ ಏರುಗತಿಯಲ್ಲಿದೆ. ಪ್ರತಿ ಲೀಟರ್ಗೆ ₹ 65ಕ್ಕೆ ದೊರೆಯುತ್ತಿದ್ದ ತಾಳೆಎಣ್ಣೆ ₹ 160ರ ವರೆಗೂ ಏರಿಕೆಯಾಗಿತ್ತು. ಫೆಬ್ರುವರಿಯಿಂದ ಈಚೆಗೆ ಖಾದ್ಯ ತೈಲದ ಬೆಲೆ ಶೇ 80ರಿಂದ ಶೇ 100ರಷ್ಟು ಹೆಚ್ಚಳವಾಗಿದೆ.