ನವದೆಹಲಿ: ಹಣದುಬ್ಬರ ನಿಯಂತ್ರಿಸಲು ಕೇಂದ್ರ ಸರ್ಕಾರವು 2022–23ರಲ್ಲಿ ಹೆಚ್ಚುವರಿಯಾಗಿ ₹ 2 ಲಕ್ಷ ಕೋಟಿ ಬಂಡವಾಳ ವೆಚ್ಚ ಮಾಡಲಿದೆ ಎಂದು ಸರ್ಕಾರದ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಎಕ್ಸೈಸ್ ಸುಂಕ ಕಡಿತದಿಂದಾಗಿ ಸರ್ಕಾರದ ವರಮಾನದಲ್ಲಿ ₹ 1 ಲಕ್ಷ ಕೋಟಿ ನಷ್ಟ ಆಗಲಿದೆ ಎಂದು ತಿಳಿಸಿದ್ದಾರೆ.
ಭಾರತದ ಚಿಲ್ಲರೆ ಹಣದುಬ್ಬರವು ಏಪ್ರಿಲ್ನಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಸಗಟು ಹಣದುಬ್ಬರ ಕೂಡ ದಾಖಲೆಯ ಮಟ್ಟ ತಲುಪಿದೆ.
ಹಣದುಬ್ಬರ ಕಡಿಮೆ ಮಾಡುವುದರತ್ತ ಹೆಚ್ಚಿನ ಗಮನ ಹರಿಸಲಾಗಿದೆ. ರಷ್ಯಾ–ಉಕ್ರೇನ್ ಬಿಕ್ಕಟ್ಟು ನಿರೀಕ್ಷೆಗಿಂತಲೂ ಹೆಚ್ಚಿನ ಹಾನಿ ಉಂಟುಮಾಡಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಸಗೊಬ್ಬರ ಸಬ್ಸಿಡಿಗೆ ಇನ್ನೂ ₹ 50 ಸಾವಿರ ಕೋಟಿ ಹೆಚ್ಚುವರಿ ಹಣದ ಅಗತ್ಯ ಇದೆ ಎಂದು ತಿಳಿಸಿದ್ದಾರೆ.
ಒಂದೊಮ್ಮೆ ಕಚ್ಚಾ ತೈಲ ದರ ಏರಿಕೆ ಮುಂದುವರಿದಲ್ಲಿ ಕೇಂದ್ರ ಸರ್ಕಾರವು ಇನ್ನೊಂದು ಸುತ್ತಿನಲ್ಲಿ ತೆರಿಗೆ ಕಡಿತ ಮಾಡಬಹುದು. ಹೀಗಾದಲ್ಲಿ 2022–23ನೇ ಹಣಕಾಸು ವರ್ಷಕ್ಕೆ ವರಮಾನ ನಷ್ಟವು ₹ 1 ಲಕ್ಷ ಕೋಟಿಯಿಂದ ₹ 1.5 ಲಕ್ಷ ಕೋಟಿ ಏರಿಕೆ ಆಗಲಿದೆ.
ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ ಪ್ರಕಾರ, ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಿಂದ ₹ 14.31 ಲಕ್ಷ ಕೋಟಿ ಸಾಲ ಪಡೆಯಲಿದೆ.