ನವದೆಹಲಿ: ದೇಶದಲ್ಲಿ ಹಣಕಾಸು ಹರಿವು ಹೆಚ್ಚಿಸಲುಮತ್ತುಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್ಬಿಐ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗವರ್ನರ್ ಶಕ್ತಿಕಾಂತದಾಸ್ ಬುಧವಾರ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 23.9 ರಷ್ಟು ಇಳಿಕೆ ಕಂಡಿದೆ.
ಕೈಗಾರಿಕಾ ಸಂಸ್ಥೆ ಎಫ್ಐಸಿಸಿಐ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ದಾಸ್, ಸರ್ಕಾರ ಬಿಡುಗಡೆ ಮಾಡಿದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರವುಕೋವಿಡ್-19 ಎಂಬ ವಿನಾಶದ ಪ್ರತಿಬಿಂಬವಾಗಿದೆ.
ಆದಾಗ್ಯೂ, ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಹೇಳಿದ ಅವರು ಕೆಲವು ಕ್ಷೇತ್ರಗಳಲ್ಲಿ ಜೂನ್ ಮತ್ತು ಜುಲೈನಲ್ಲಿನ ಬೆಳವಣಿಗೆ ಸಮತೋಲನ ಸಾಧಿಸಿಕೊಂಡಿವೆ. ಈ ಎಲ್ಲಾ ಸೂಚನೆಗಳ ಪ್ರಕಾರ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಆರ್ಥಿಕತೆ ಕ್ರಮೇಣ ಚೇತರಿಕೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 23.9 ರಷ್ಟು ಕುಸಿದಿದ್ದು, ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಚ್ ಅಂತ್ಯದ ವೇಳೆಗೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಾದ ಲಾಕ್ಡೌನ್ ಇದಕ್ಕೆ ಕಾರಣವಾಗಿದೆ.
ಕೊರೊನಾ ರೋಗ ಮತ್ತು ಲಾಕ್ಡೌನ್ ಉದ್ಯಮದ ಮೇಲೆ ಪರಿಣಾಮ ಬೀರಿರುವುದರಿಂದ ಲಿಕ್ವಿಡಿಟಿ ಸೌಲಭ್ಯ ಮತ್ತು ವ್ಯವಹಾರಗಳಿಗೆ ಹಣ ಲಭ್ಯಲಾಗುವಂತೆ ಮಾಡುವ ಉಪಕ್ರಮಗಳ ಬಗ್ಗೆ ಶಕ್ತಿಕಾಂತ್ ದಾಸ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಕೋವಿಡ್ -19 ನಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಹೊರಬರಲು ಉದ್ಯಮ ಮತ್ತು ವ್ಯವಹಾರಗಳಿಗೆ ಸಹಾಯ ಮಾಡಲು ಆರ್ಬಿಐ ಸಿದ್ಧವಾಗಿದೆ. ಇದಕ್ಕೆ ಅಗತ್ಯವಿರುವ ಯಾವುದೇ ಕ್ರಮಗಳನ್ನು ಆರ್ಬಿಐ ತೆಗೆದುಕೊಳ್ಳುತ್ತದೆ ಎಂದು ಗವರ್ನರ್ ಭರವಸೆ ನೀಡಿದ್ದಾರೆ.
ಅದೇ ವೇಳೆ ಕೋವಿಡ್ 19 ರೋಗವು ಜಾಗತಿಕ ಮಟ್ಟದಲ್ಲಿ ಸೃಷ್ಟಿಸಿದ ಹೊಸ ಅವಕಾಶಗಳ ಲಾಭಪಡೆದುಕೊಳ್ಳುವಂತೆ ಅವರು ಉದ್ಯಮಿಗಳಿಗೆ ಹೇಳಿದ್ದಾರೆ.