ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದ ಉಂಟಾಗಿರುವ ಆರ್ಥಿಕತೆ ಬಿಕ್ಕಟ್ಟು ಶಮನಕಾರಿಯಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್, ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿಲ್ಲ. ಇದರ ಪರಿಣಾಮ ಷೇರುಪೇಟೆಗಳಲ್ಲಿ ಮತ್ತೆ ಮಾರಾಟದ ಒತ್ತಡ ಸೃಷ್ಟಿಯಾಗಿದೆ.
ವಹಿವಾಟು ಆರಂಭದಿಂದ ಕುಸಿತಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಮಧ್ಯಾಹ್ನ 2:30ಕ್ಕೆ 901.81 ಅಂಶ (ಶೇ 2.82) ಕಡಿಮೆಯಾಗಿ 31,106.80 ಅಂಶ ತಲುಪಿದೆ. ಇನ್ನೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 249.75 ಅಂಶ (ಶೇ 2.66) ಇಳಿಕೆಯಾಗಿ 9,133.80 ಅಂಶ ಮುಟ್ಟಿದೆ.
ಷೇರುಪೇಟೆಯಲ್ಲಿ ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಐಟಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ಎಫ್ಎಂಸಿಜಿ ಮತ್ತು ಫಾರ್ಮಾ ಕಂಪನಿಗಳ ಷೇರುಗಳು ಮಾತ್ರ ಸಕಾರಾತ್ಮ ವಹಿವಾಟು ಕಂಡಿವೆ. ಆಟೊ ಷೇರುಗಳೂ ಸಹಕುಸಿತ ಕಂಡಿವೆ.
ಇನ್ಫೊಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್, ಐಸಿಐಸಿಐ, ಎಸ್ಬಿಐ, ಮಹಿಂದ್ರಾ ಆ್ಯಂಡ್ ಮಹೀಂದ್ರಾ ಸೇರಿದಂತೆ ಪ್ರಮುಖ ಕಂಪನಿಗಳ ಷೇರು ಬೆಲೆ ಶೇ 2ರಿಂದ ಶೇ 5ರ ವರೆಗೂ ಇಳಿಕೆಯಾಗಿದೆ.
ಸಣ್ಣ ಉದ್ದಿಮೆಗಳಿಗೆ ಸುಮಾರು ₹6 ಲಕ್ಷ ಕೋಟಿ ಸಾಲ ನೀಡುವ ಭರವಸೆಯನ್ನು ಸರ್ಕಾರ ಪ್ರಕಟಿಸಿದೆ. ಒಟ್ಟಾರೆಯಾಗಿ ಆರ್ಥಿಕ ಚೇತರಿಕೆಗೆ ₹20 ಲಕ್ಷ ಕೋಟಿ ಪ್ಯಾಕೇಜ್ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. 'ಇದು ಉತ್ತಮ ಯೋಜನೆಯಾದರೂ ತಕ್ಷಣ ಆರ್ಥಿಕತೆಗೆ ಚೇತರಿಕೆ ನೀಡದು' ಎಂದು ಐಡಿಬಿಐ ಕ್ಯಾಪಿಟಲ್ನ ಸಂಶೋಧನಾ ಮುಖ್ಯಸ್ಥ ಎ.ಕೆ.ಪ್ರಭಾಕರ್ ಅಭಿಪ್ರಾಯ ಪಟ್ಟಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ, ವೈರಸ್ ಯಾವತ್ತಿಗೂ ಬಿಟ್ಟು ಹೋಗದಿರಬಹುದು ಎಂದು ಹೇಳಿದೆ.