ಬೆಂಗಳೂರು: ಆರ್ಬಿಎಲ್ ಬ್ಯಾಂಕ್ನ ಷೇರು ಬೆಲೆ ಸೋಮವಾರ ಶೇಕಡ 25ರ ವರೆಗೂ ಕುಸಿತ ದಾಖಲಿಸಿತು. ಆರ್ಬಿಎಲ್ನ ಸಿಇಒ ವೈದ್ಯಕೀಯ ರಜೆ ಮೇಲೆ ತೆರಳಿರುವುದು ಹಾಗೂ ಬ್ಯಾಂಕ್ನ ಮಂಡಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಚ್ಚುವರಿ ನಿರ್ದೇಶಕರನ್ನು ನೇಮಕ ಮಾಡಿರುವ ಬೆನ್ನಲ್ಲೇ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ.
ಆರ್ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಯೊಗೇಶ್ ದಯಾಳ್ ಅವರನ್ನು ಆರ್ಬಿಎಲ್ ಬ್ಯಾಂಕ್ನ ಹೆಚ್ಚುವರಿ ನಿರ್ದೇಶಕರಾಗಿ ಎರಡು ವರ್ಷಗಳ ಅವಧಿಗೆ ಶನಿವಾರ ನೇಮಕ ಮಾಡಲಾಗಿದೆ. ಆರ್ಬಿಎಲ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶ್ವವಿರ್ ಅಹುಜಾ ಅವರ ವೈದ್ಯಕೀಯ ರಜೆಗೆ ಆರ್ಬಿಎಲ್ ಮಂಡಳಿಯು ಅನುಮೋದನೆ ನೀಡಿದೆ.
ರಾಜೀವ್ ಅಹುಜಾ ಅವರನ್ನು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಬ್ಯಾಂಕ್ ಪ್ರಕಟಿಸಿದೆ.
ಇಂದು ಷೇರುಪೇಟೆಯಲ್ಲಿ ವಹಿವಾಟು ಆರಂಭದಲ್ಲೇ ಆರ್ಬಿಎಲ್ ಶೇ 24.7ರ ವರೆಗೂ ಕುಸಿತ ಕಂಡಿತು. 2020ರ ಜೂನ್ನಿಂದ ಇದೇ ಮೊದಲ ಬಾರಿಗೆ ಷೇರು ಬೆಲೆ ಇಷ್ಟು ಪ್ರಮಾಣದಲ್ಲಿ ಕುಸಿತ ದಾಖಲಿಸಿದೆ. ಮಧ್ಯಾಹ್ನದ ವೇಳೆಗೆ ಆರ್ಬಿಎಲ್ನ ಪ್ರತಿ ಷೇರು ₹148.65ರಲ್ಲಿ ವಹಿವಾಟು ನಡೆದಿತ್ತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 194.26 ಅಂಶ ಏರಿಕೆಯಾಗಿ 57,318.57 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 52.85 ಅಂಶ ಹೆಚ್ಚಳವಾಗಿ 17,056.60 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.