ಇಲ್ಲಿ ಸುಭಾಷಿತ ನಮ್ಮ ಕಣ್ಣುಗಳ ಬಗ್ಗೆಯೇ ಹೇಳುತ್ತಿದೆ. ಆದರೆ ಅದು ನಮ್ಮ ಚಾಕ್ಷುಷವೂ ಭೌತಿಕವೂ ಆದ ಕಣ್ಣುಗಳ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಗಮನಾರ್ಹ. ವಿವೇಕ ಮತ್ತು ವಿದ್ವಾಂಸರ ಸಾಮೀಪ್ಯ – ಇವೆರಡನ್ನು ಅದು ಕಣ್ಣುಗಳು ಎಂದು ಹೇಳುತ್ತಿದೆ. ವಿವೇಕ ಎಂಬುದು ಒಂದು ಕಣ್ಣು; ಅದೂ ಸ್ಚಚ್ಛವಾದ ಕಣ್ಣು. ಎಂದರೆ ನಾವು ನೋಡುತ್ತಿರುವ ದಾರಿಯನ್ನು ಚೆನ್ನಾಗಿ ಕಾಣಿಸಬಲ್ಲದು ಎಂದು ಅರ್ಥ. ಈ ಒಂದು ಕಣ್ಣಿನ ಜೊತೆಗೆ ಇನ್ನೊಂದು ಕಣ್ಣಿನ ನೋಟವೂ ಸೇರಿಕೊಳ್ಳಬೇಕು. ಈ ಕಣ್ಣು ಎಂದರೆ ಅದು ಜ್ಞಾನಿಗಳ ಒಡನಾಟ. ಒಂದು ಕಣ್ಣು ನಮ್ಮ ಬುದ್ಧಿಶಕ್ತಿಯನ್ನು ಸೂಚಿಸಿದರೆ, ಇನ್ನೊಂದು ಕಣ್ಣು ಲೋಕಜ್ಞಾನವನ್ನು ಸೂಚಿಸುತ್ತದೆ. ಇವೆರಡೂ ನಮಗೆ ಬೇಕು. ಇಲ್ಲವಾದಲ್ಲಿ ನಮ್ಮ ಜೀವನಮಾರ್ಗ ಸ್ಪಷ್ಟವಾಗಿ ಕಾಣದು ಎನ್ನುತ್ತಿದೆ ಸುಭಾಷಿತ. ನಮಗೆ ಕೇವಲ ಭೌತಿಕ ಕಣ್ಣುಗಳು ಮಾತ್ರವೇ ಇದ್ದು, ವಿವೇಕನೇತ್ರಗಳು ಇಲ್ಲವಾದಲ್ಲಿ ಜೀವನದ ಹಾದಿ ಸುಗಮವಾಗಿರದು ಎಂಬುದು ಅದರ ಸಂದೇಶ.