<p><strong>ಪತ್ತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।</strong></p>.<p><strong>ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ, ಆ ಶುದ್ಧಚಿತ್ತನಾದವನು ಅದನ್ನು ಭಕ್ತಿಯಿಂದ ಅರ್ಪಿಸಿದ್ದಾನೆಂದು ತಿಳಿದು ನಾನು ಅದನ್ನು ಸ್ವೀಕರಿಸುವೆನು.‘</p>.<p>ದೇವರನ್ನು ಹಲವು ರೀತಿಗಳಲ್ಲಿ ಪೂಜಿಸಬೇಕೆಂಬುದು ಧಾರ್ಮಿಕ ಆಚರಣೆಗಳಲ್ಲಿ ತುಂಬ ಮುಖ್ಯವಾದ ವಿವರ. ಹದಿನಾರು ವಿಧದ ಆಚರಣೆಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದನ್ನೇ ಷೋಡಶೋಪಚಾರ ಪೂಜೆ ಎಂದು ಕರೆದಿರುವುದು. ಈ ಉಪಚಾರಗಳ ಸಮಯದಲ್ಲಿ ಹಲವು ರೀತಿಯ ಪೂಜಾಸಾಮಗ್ರಿಗಳನ್ನೂ ಬಳಸುತ್ತೇವೆ; ಇವೆಲ್ಲವನ್ನೂ ಸಂಪಾದಿಸಿಕೊಂಡು ದೇವರನ್ನು ಅರ್ಚಿಸುವುದು ಸುಲಭವೇನಲ್ಲ.</p>.<p>ಷೋಡಶೋಪಚಾರವಷ್ಟೆ ಅಲ್ಲ, ಇನ್ನೂ ಹಲವು ವಿಧದ ಪೂಜೆ–ಅರ್ಚನೆಗಳನ್ನು ಶಾಸ್ತ್ರಗಳು ಹೇಳಿವೆ; ಇವುಗಳ ಜೊತೆಗೆ ಹೋಮ–ಹವನ–ತೀರ್ಥಕ್ಷೇತ್ರಗಳಂಥವನ್ನೂ ಹೇಳಲಾಗಿದೆ.</p>.<p>ಹೌದು, ಇವುಗಳ ನಿರ್ವಹಣೆ ಸುಲಭವಲ್ಲ; ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತುಂಬ ಸರಳವಾದ ಪೂಜಾವಿಧಾನವನ್ನು ಹೇಳಿರುವುದು ಗಮನಾರ್ಹ. ಇದು ನಮ್ಮ ಪರಂಪರೆಯ ಔದಾರ್ಯಕ್ಕೂ ಸಾಕ್ಷಿಯಾಗಿದೆಯೆನ್ನಿ!</p>.<p>‘ಭಕ್ತಿಯಿಂದಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಅರ್ಪಿಸಿದರೂ ಸಾಕು, ನಾನು ಅದನ್ನು ಪ್ರೀತಿಯಿಂದ ಸ್ವೀಕರಿಸುವೆ, ಒಲಿಯುವೆ‘ – ಎಂದು ಶ್ರೀಕೃಷ್ಣ ಅಭಯವನ್ನು ಕೊಟ್ಟಿದ್ದಾನೆ.</p>.<p>ಇಲ್ಲಿ ನಾವು ಗಮನಿಸಬೇಕಾಗಿರುವುದು, ಹಲವು ಶಾಸ್ತ್ರೀಯ ಕಲಾಪಗಳನ್ನೊಳಗೊಂಡ, ವೈಭವಪೂರ್ಣ ಧಾರ್ಮಿಕ ವಿಧಿ–ವಿಧಾನಗಳಿರುವ ಪರಂಪರೆಯೇ ಇಂಥ ಸರಳವಾದ ಪುಜಾವಿಧಾನವನ್ನು ಹೇಳಿರುವುದು ಗಮನೀಯ. ಮಾತ್ರವಲ್ಲ, ಪೂಜೆ–ಅರ್ಚನೆಗಳ ದಿಟವಾದ ಲಕ್ಷಣ ಏನು ಎನ್ನುವುದನ್ನೂ ಈ ಮೂಲಕ ನಿರೂಪಿಸುತ್ತಿದೆ; ಭಕ್ತಿಯೇ ಮುಖ್ಯ, ಪೂಜಾಸಲಕರಣೆಗಳಲ್ಲ ಎನ್ನುವುದು ಇಲ್ಲಿಯ ನಿಲವು.</p>.<p>ಎಲೆ, ಹೂವು, ಹಣ್ಣು, ಬೊಗಸೆಯಷ್ಟು ನೀರು – ಇವು ಕೂಡ ದೇವರ ಪೂಜೆಗೆ ಅಷ್ಟು ಮುಖ್ಯವಲ್ಲ – ಎನ್ನುವುದನ್ನೂ ಪರಂಪರೆ ಪ್ರತಿಪಾದಿಸಿದೆ. ಅದಕ್ಕೊಂದು ಉದಾಹರಣೆಯನ್ನು ಶಂಕರಾಚಾರ್ಯರ ಈ ಪದ್ಯದಲ್ಲಿ ನೋಡಬಹುದು:</p>.<p><strong>ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನಿನೇ</strong></p>.<p><strong>ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ ।</strong></p>.<p><strong>ಸಮರ್ಪ್ಯೈಕಂ ಚೇತಃಸರಸಿಜಮುಮಾನಾಥ ಭವತೇ</strong></p>.<p><strong>ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ।।</strong></p>.<p>‘ನಿನ್ನ ಪೂಜೆಗೆ ಹೂ ತರಲು ಆಳವಾದ ಸರೋವರವನ್ನೋ ನಿರ್ಜನವಾದ ಕಾಡನ್ನೋ ವಿಶಾಲವಾದ ಬೆಟ್ಟವನ್ನೋ ಹೊಕ್ಕು ತಿಳಿಗೇಡಿಗಳು ಅಲೆಯುತ್ತಾರೆ. ಎಲೈ, ಪಾರ್ವತೀಪತಿಯೇ! ತಮ್ಮ ಮನಸ್ಸು ಎಂಬ ಅದ್ವಿತೀಯವಾದ ಕಮಲವನ್ನು ನಿನಗೆ ಸಮರ್ಪಿಸಿ ಸುಖವಾಗಿರುವ ಮಾರ್ಗ ಇವರಿಗೆ ತಿಳಿಯುವುದಿಲ್ಲವಲ್ಲ, ಏನು ಆಶ್ಚರ್ಯ!!‘ – ಎಂದಿದ್ದಾರೆ, ಆಚಾರ್ಯ ಶಂಕರರು.</p>.<p>ಪೂಜೆಗೆ ಹೂವನ್ನು ತರಲು ನಾವು ಎಲ್ಲೆಲ್ಲೂ ಅಲೆಯಬೇಕು; ಕಾಡು, ಬೆಟ್ಟ, ಸರೋವರ – ಹೀಗೆ ಹಲವು ದೂರ ದೂರದ ಸ್ಥಳಗಳಲ್ಲಿ ಹುಡುಕಬೇಕು. ಆದರೆ ನಮ್ಮ ಅತ್ಯಂತ ಸನಿಹದಲ್ಲಿಯೇ ಇರುವ ಹೂವನ್ನು ನಾವು ಗಮನಿಸುವುದೇ ಇಲ್ಲ; ನಮ್ಮ ಹೃದಯಲ್ಲಿಯೇ ಇರುವ ಹೃದಯಕಮಲವನ್ನು ಅರ್ಪಿಸುವ ಮನಸ್ಸು ಮಾಡದೆ ಎಲ್ಲೆಲ್ಲೂ ಅಲೆಯುತ್ತಿದ್ದಾನಲ್ಲ ಎಂದು ಶಂಕರರು ಅಚ್ಚರಿಪಟ್ಟಿದ್ದಾರೆ. ಈ ಹೃದಯಕಮಲದ ಸೌರಭವೇ ಭಕ್ತಿ. ಇದೇ ಎಲ್ಲ ಪೂಜೆಗಳ, ವಿಧಿ–ವಿಧಾನಗಳ ದಿಟವಾದ ದ್ರವ್ಯ, ಶಕ್ತಿ, ಯುಕ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪತ್ತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।</strong></p>.<p><strong>ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ, ಆ ಶುದ್ಧಚಿತ್ತನಾದವನು ಅದನ್ನು ಭಕ್ತಿಯಿಂದ ಅರ್ಪಿಸಿದ್ದಾನೆಂದು ತಿಳಿದು ನಾನು ಅದನ್ನು ಸ್ವೀಕರಿಸುವೆನು.‘</p>.<p>ದೇವರನ್ನು ಹಲವು ರೀತಿಗಳಲ್ಲಿ ಪೂಜಿಸಬೇಕೆಂಬುದು ಧಾರ್ಮಿಕ ಆಚರಣೆಗಳಲ್ಲಿ ತುಂಬ ಮುಖ್ಯವಾದ ವಿವರ. ಹದಿನಾರು ವಿಧದ ಆಚರಣೆಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದನ್ನೇ ಷೋಡಶೋಪಚಾರ ಪೂಜೆ ಎಂದು ಕರೆದಿರುವುದು. ಈ ಉಪಚಾರಗಳ ಸಮಯದಲ್ಲಿ ಹಲವು ರೀತಿಯ ಪೂಜಾಸಾಮಗ್ರಿಗಳನ್ನೂ ಬಳಸುತ್ತೇವೆ; ಇವೆಲ್ಲವನ್ನೂ ಸಂಪಾದಿಸಿಕೊಂಡು ದೇವರನ್ನು ಅರ್ಚಿಸುವುದು ಸುಲಭವೇನಲ್ಲ.</p>.<p>ಷೋಡಶೋಪಚಾರವಷ್ಟೆ ಅಲ್ಲ, ಇನ್ನೂ ಹಲವು ವಿಧದ ಪೂಜೆ–ಅರ್ಚನೆಗಳನ್ನು ಶಾಸ್ತ್ರಗಳು ಹೇಳಿವೆ; ಇವುಗಳ ಜೊತೆಗೆ ಹೋಮ–ಹವನ–ತೀರ್ಥಕ್ಷೇತ್ರಗಳಂಥವನ್ನೂ ಹೇಳಲಾಗಿದೆ.</p>.<p>ಹೌದು, ಇವುಗಳ ನಿರ್ವಹಣೆ ಸುಲಭವಲ್ಲ; ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತುಂಬ ಸರಳವಾದ ಪೂಜಾವಿಧಾನವನ್ನು ಹೇಳಿರುವುದು ಗಮನಾರ್ಹ. ಇದು ನಮ್ಮ ಪರಂಪರೆಯ ಔದಾರ್ಯಕ್ಕೂ ಸಾಕ್ಷಿಯಾಗಿದೆಯೆನ್ನಿ!</p>.<p>‘ಭಕ್ತಿಯಿಂದಒಂದು ಎಲೆ, ಒಂದು ಹೂವು, ಒಂದು ಹಣ್ಣು, ಕಡೆಗೆ ಒಂದು ಬೊಗಸೆಯಷ್ಟು ನೀರು – ಇವುಗಳಲ್ಲಿ ಯಾವುದನ್ನಾದರೂ ಅರ್ಪಿಸಿದರೂ ಸಾಕು, ನಾನು ಅದನ್ನು ಪ್ರೀತಿಯಿಂದ ಸ್ವೀಕರಿಸುವೆ, ಒಲಿಯುವೆ‘ – ಎಂದು ಶ್ರೀಕೃಷ್ಣ ಅಭಯವನ್ನು ಕೊಟ್ಟಿದ್ದಾನೆ.</p>.<p>ಇಲ್ಲಿ ನಾವು ಗಮನಿಸಬೇಕಾಗಿರುವುದು, ಹಲವು ಶಾಸ್ತ್ರೀಯ ಕಲಾಪಗಳನ್ನೊಳಗೊಂಡ, ವೈಭವಪೂರ್ಣ ಧಾರ್ಮಿಕ ವಿಧಿ–ವಿಧಾನಗಳಿರುವ ಪರಂಪರೆಯೇ ಇಂಥ ಸರಳವಾದ ಪುಜಾವಿಧಾನವನ್ನು ಹೇಳಿರುವುದು ಗಮನೀಯ. ಮಾತ್ರವಲ್ಲ, ಪೂಜೆ–ಅರ್ಚನೆಗಳ ದಿಟವಾದ ಲಕ್ಷಣ ಏನು ಎನ್ನುವುದನ್ನೂ ಈ ಮೂಲಕ ನಿರೂಪಿಸುತ್ತಿದೆ; ಭಕ್ತಿಯೇ ಮುಖ್ಯ, ಪೂಜಾಸಲಕರಣೆಗಳಲ್ಲ ಎನ್ನುವುದು ಇಲ್ಲಿಯ ನಿಲವು.</p>.<p>ಎಲೆ, ಹೂವು, ಹಣ್ಣು, ಬೊಗಸೆಯಷ್ಟು ನೀರು – ಇವು ಕೂಡ ದೇವರ ಪೂಜೆಗೆ ಅಷ್ಟು ಮುಖ್ಯವಲ್ಲ – ಎನ್ನುವುದನ್ನೂ ಪರಂಪರೆ ಪ್ರತಿಪಾದಿಸಿದೆ. ಅದಕ್ಕೊಂದು ಉದಾಹರಣೆಯನ್ನು ಶಂಕರಾಚಾರ್ಯರ ಈ ಪದ್ಯದಲ್ಲಿ ನೋಡಬಹುದು:</p>.<p><strong>ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನಿನೇ</strong></p>.<p><strong>ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ ।</strong></p>.<p><strong>ಸಮರ್ಪ್ಯೈಕಂ ಚೇತಃಸರಸಿಜಮುಮಾನಾಥ ಭವತೇ</strong></p>.<p><strong>ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ।।</strong></p>.<p>‘ನಿನ್ನ ಪೂಜೆಗೆ ಹೂ ತರಲು ಆಳವಾದ ಸರೋವರವನ್ನೋ ನಿರ್ಜನವಾದ ಕಾಡನ್ನೋ ವಿಶಾಲವಾದ ಬೆಟ್ಟವನ್ನೋ ಹೊಕ್ಕು ತಿಳಿಗೇಡಿಗಳು ಅಲೆಯುತ್ತಾರೆ. ಎಲೈ, ಪಾರ್ವತೀಪತಿಯೇ! ತಮ್ಮ ಮನಸ್ಸು ಎಂಬ ಅದ್ವಿತೀಯವಾದ ಕಮಲವನ್ನು ನಿನಗೆ ಸಮರ್ಪಿಸಿ ಸುಖವಾಗಿರುವ ಮಾರ್ಗ ಇವರಿಗೆ ತಿಳಿಯುವುದಿಲ್ಲವಲ್ಲ, ಏನು ಆಶ್ಚರ್ಯ!!‘ – ಎಂದಿದ್ದಾರೆ, ಆಚಾರ್ಯ ಶಂಕರರು.</p>.<p>ಪೂಜೆಗೆ ಹೂವನ್ನು ತರಲು ನಾವು ಎಲ್ಲೆಲ್ಲೂ ಅಲೆಯಬೇಕು; ಕಾಡು, ಬೆಟ್ಟ, ಸರೋವರ – ಹೀಗೆ ಹಲವು ದೂರ ದೂರದ ಸ್ಥಳಗಳಲ್ಲಿ ಹುಡುಕಬೇಕು. ಆದರೆ ನಮ್ಮ ಅತ್ಯಂತ ಸನಿಹದಲ್ಲಿಯೇ ಇರುವ ಹೂವನ್ನು ನಾವು ಗಮನಿಸುವುದೇ ಇಲ್ಲ; ನಮ್ಮ ಹೃದಯಲ್ಲಿಯೇ ಇರುವ ಹೃದಯಕಮಲವನ್ನು ಅರ್ಪಿಸುವ ಮನಸ್ಸು ಮಾಡದೆ ಎಲ್ಲೆಲ್ಲೂ ಅಲೆಯುತ್ತಿದ್ದಾನಲ್ಲ ಎಂದು ಶಂಕರರು ಅಚ್ಚರಿಪಟ್ಟಿದ್ದಾರೆ. ಈ ಹೃದಯಕಮಲದ ಸೌರಭವೇ ಭಕ್ತಿ. ಇದೇ ಎಲ್ಲ ಪೂಜೆಗಳ, ವಿಧಿ–ವಿಧಾನಗಳ ದಿಟವಾದ ದ್ರವ್ಯ, ಶಕ್ತಿ, ಯುಕ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>