ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಅಮೃತದ ಎರಡು ಹಣ್ಣುಗಳು

Last Updated 18 ಜುಲೈ 2020, 1:50 IST
ಅಕ್ಷರ ಗಾತ್ರ

ಸಂಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ ।

ಕಾವ್ಯಾಮೃತರಸಾಸ್ವಾದಃ ಸಂಗಮಃ ಸುಜನೈಃ ಸಹ ।।

ಇದರ ತಾತ್ಪರ್ಯ ಹೀಗೆ:

’ಸಂಸಾರ ಎಂಬ ವಿಷವೃಕ್ಷದಲ್ಲಿ ಅಮೃತದಂತಿರುವ ಫಲಗಳು ಎರಡೇ; ಒಂದು ಕಾವ್ಯಾಮೃತದ ರಸಾಸ್ವಾದ, ಮತ್ತೊಂದು ಸಜ್ಜನರ ಸಹವಾಸ.‘

ಸಂಸಾರ ದುಃಖಮಯ ಎಂದು ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಭಗವಂತ ಹೇಳಿದ್ದಾನೆ. ಬುದ್ಧ ಹೇಳದಿದ್ದರೂ ದಿನವೂ ನಮಗೆ ಇದು ಅನುಭವವೈದ್ಯವೇ ಹೌದೆನ್ನಿ!

ಹಾಗಾದರೆ ಈ ದುಃಖದಿಂದ ಪಾರಾಗುವ ವಿಧಾನ ಹೇಗೆ?

ಬುದ್ಧ ಇದಕ್ಕೆ ಎಂಟು ಆಯಾಮಗಳ ದಾರಿಯನ್ನು ಕಾಣಿಸಿದ, ದಿಟ. ಆದರೆ ಅದು ಸಾಧಕರಿಗೆ, ನಿರ್ವಾಣ – ಎಂದರೆ ಮೋಕ್ಷವನ್ನು ಬಯಸುವವರಿಗೆ ಸಲ್ಲುವಂಥದ್ದು. ನಮಗೆ, ಸಾಮಾನ್ಯರಿಗೆ ಈ ಕೂಡಲೇ ಒದಗುವಂಥ ದಾರಿ ಏನಾದರೂ ಇದೆಯೆ – ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅಂಥವರಿಗೆ ಸುಭಾಷಿತ ಉತ್ತರವನ್ನು ಕೊಡುವಂತಿದೆ.

ಸಂಸಾರ ಎನ್ನುವುದು ವಿಷವೃಕ್ಷಕ್ಕೆ ಸಮ. ಮರವೇ ವಿಷಮಯವಾದರೆ ಅದರಲ್ಲಿ ಬಿಡುವ ಹಣ್ಣು ಕೂಡ ವಿಷಯುಕ್ತವೇ ಆಗಿರಬೇಕಲ್ಲವೆ? ಆದರೆ ಸುಭಾಷಿತ ಸೃಷ್ಟಿಯ ವೈಚಿತ್ರ್ಯವೊಂದನ್ನು ಗುರುತಿಸಿದೆ: ಈ ಸಂಸಾರವಿಷವೃಕ್ಷದಲ್ಲಿಯೂ ಎರಡು ಹಣ್ಣುಗಳು ಮಾತ್ರ ಅಮೃತಪ್ರಾಯವಾಗಿವೆಯಂತೆ. ಅವು ಯಾವುವು? ಒಂದು: ಕಾವ್ಯ ಎಂಬ ಅಮೃತದ ರಸಾಸ್ವಾದ; ಮತ್ತೊಂದು: ಸಜ್ಜನರ ಸಹವಾಸ.

ಇಲ್ಲಿ ಸಂಸಾರ ಎಂದರೆ ’ಕುಟುಂಬ‘ ಎಂಬ ಅರ್ಥ ಅಲ್ಲ, ಇಡಿಯ ಸೃಷ್ಟಿ ಎಂದು ಅರ್ಥ.

ಕಾವ್ಯವೇ ಈ ಸೃಷ್ಟಿಯಲ್ಲಿರುವ ಅಮೃತವಂತೆ. ಇಡಿಯ ಜಗತ್ತಿನ ಸಾರಸಾರ ವಿವೇಚನೆಯನ್ನು ಮಾಡಬಲ್ಲ ಸಾಹಿತ್ಯಕೃತಿಯೇ ದಿಟವಾದ ಕಾವ್ಯ. ರಾಮಾಯಣ, ಮಹಾಭಾರತ, ರಘುವಂಶ, ಕುಮಾರವ್ಯಾಸಭಾರತ, ಷೇಕ್‌ಸ್ಪಿಯರ್‌ ಕೃತಿಗಳು, ಹೋಮರ್‌, ಬ್ಲೇಕ್‌ – ಇಂಥವರ ಕೃತಿಗಳು ಬದುಕಿನ ದಿಟವಾದ ಅರ್ಥವಂತಿಕೆಯನ್ನು ಕಾಣಿಸಬಲ್ಲದು. ಇಂಥ ಕೃತಿಗಳ ಅನುಸಂಧಾನ ಜೀವನಕ್ಕೊಂದು ಸೊಗಸನ್ನೂ ಅರ್ಥವನ್ನೂ ಕೊಡಬಲ್ಲವು; ದುಃಖಮಯವಾದ ಸಂಸಾರದಲ್ಲೂ ಸುಖ ಇದೆ ಎಂಬುದನ್ನು ಕಾಣಿಸಬಲ್ಲದು.

ಈಗ ಎರಡನೆಯ ಅಮೃತಫಲದ ಬಗ್ಗೆ ನೋಡೋಣ. ಸಜ್ಜನರ ಸ್ನೇಹವೇ ಈ ಎರಡನೆಯ ಅಮೃತಫಲ. ನಮ್ಮ ಜೀವನದಲ್ಲಿ ಎದುರಾಗುವ ಕಷ್ಟದ ಸಮಯದಲ್ಲಿ ನಮಗೆ ಧೈರ್ಯವನ್ನೂ ಸಹಾಯವನ್ನೂ ಒದಗಿಸುವವರು ಈ ಸಜ್ಜನರು. ಇವರು ನಾವು ಕೆಳಕ್ಕೆ ಬಿದ್ದಾಗ ಕೈ ಹಿಡಿದು ನಮ್ಮನ್ನು ಮೇಲೆತ್ತುತ್ತಾರೆಯೇ ಹೊರತು ನಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುವುದಿಲ್ಲ. ಇಂಥವರಿಂದ ದುಃಖಮಯವಾದ ಜೀವನವೂ ಸಹನೀಯ ಎಂದೆನಿಸುತ್ತದೆ.

ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು:

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್‌ ।

ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ ।।

’ಕಾವ್ಯ, ಶಾಸ್ತ್ರ – ಇವುಗಳನ್ನು ಓದಿ ಸಂತೋಷಪಡುವುದರಲ್ಲಿ ಬುದ್ಧಿವಂತರ ವೇಳೆ ಕಳೆಯುತ್ತದೆ; ಆದರೆ ಮೂರ್ಖರ ಸಮಯ ಜೂಜು ಮುಂತಾದ ವ್ಯಸನಗಳಲ್ಲಿ, ನಿದ್ರೆ ಅಥವಾ ಜಗಳದಲ್ಲಿಯೇ ಕಳೆದುಹೋಗುತ್ತದೆ.‘

ಪ್ರಸ್ತುತ ಸಂದರ್ಭಕ್ಕೂ ಸಲ್ಲುವ ಸುಭಾಷಿತ ಇದು.

ಇದನ್ನು ಪಾಡ್‌ಕಾಸ್ಟ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT