ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕಣ್ಣೂ ಬೇಕು, ಕಾಲೂ ಬೇಕು

Last Updated 15 ಸೆಪ್ಟೆಂಬರ್ 2020, 1:57 IST
ಅಕ್ಷರ ಗಾತ್ರ

ಹತಂ ಜ್ಞಾನಂ ಕ್ರಿಯಾಶೂನ್ಯಂ ಹತಾ ಚಾಜ್ಞಾನಿನಃ ಕ್ರಿಯಾ।
ಧಾವನ್ನಪ್ಯಂಧಕೋ ನಷ್ಟಃ ಪಶ್ಯನ್ನಪಿ ಚ ಪಂಗುಕಃ।।

ಇದರ ತಾತ್ಪರ್ಯ ಹೀಗೆ:‘ಕ್ರಿಯೆಯಿಲ್ಲದ ತಿಳಿವು ನಷ್ಟವಾದಂತೆ ವ್ಯರ್ಥ. ತಿಳಿವಿಲ್ಲದವರ ಕ್ರಿಯೆಯೂ ವ್ಯರ್ಥವೇ ಹೌದು. ಕುರುಡನು ಓಡಿದರೂ ನಷ್ಟನಾಗುತ್ತಾನೆ; ಕುಂಟನು ನೋಡುತ್ತಿದ್ದರೂ ಫಲವಿಲ್ಲದೆ ನಷ್ಟನಾಗುತ್ತಾನೆ.‘

ಯಾವುದಾದರೂ ಕೆಲಸವೊಂದು ಯಶಸ್ಸನ್ನು ಪಡೆಯಬೇಕಾದರೆ ಕ್ರಿಯೆ ಮತ್ತು ಜ್ಞಾನ – ಎರಡೂ ಬೇಕು. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ನಮ್ಮಲ್ಲಿ ಕೆಲವರು ಇರುತ್ತಾರೆ; ಅವರಿಗೆ ವಿಷಯಜ್ಞಾನ ಚೆನ್ನಾಗಿರುತ್ತದೆ. ಹತ್ತಾರು ದಿಕ್ಕುಗಳಿಂದ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ. ಆದರೆ ನಿಷ್ಕ್ರಿಯರಾಗಿರುತ್ತಾರೆ; ಅವರು ಕಾರ್ಯಕ್ಕೆ ಕೈ ಹಾಕುವುದೇ ಇಲ್ಲ. ಹೀಗಾಗಿ ಅವರಿಗೆ ಎಷ್ಟೆಲ್ಲ ತಿಳಿವಳಿಕೆ ಇದ್ದರೂ ಅದು ಪ್ರಯೋಜನಕ್ಕೆ ಬರದೆ ವ್ಯರ್ಥವಾಗುತ್ತಿರುತ್ತದೆ. ಸುಭಾಷಿತ ಇಂಥವರನ್ನು ಕುಂಟನಿಗೆ ಹೋಲಿಸಿದೆ. ಕುಂಟನಿಗೆ ಕಣ್ಣು ಇದೆ; ಆದರೆ ಅವನು ಓಡಲಾರ. ಕಣ್ಣು ಎಂದರೆ ತಿಳಿವಳಿಕೆ; ಕಾಲಿಲ್ಲದಿರುವುದು ಜಡತೆಗೆ ಸಂಕೇತ.

ಇನ್ನು ಕೆಲವರು ಇರುತ್ತಾರೆ; ಅವರಿಗೆ ವಿಷಯದ ತಲೆಬುಡವೇ ಗೊತ್ತಿರುವುದಿಲ್ಲ. ಆದರೆ ಯಾವ ಕೆಲಸಕ್ಕೂ ಒಮ್ಮೆಲೇ ಹಾರುತ್ತಾರೆ. ತಿಳಿವಳಿಕೆಯೇ ಇರದ ಕಾರಣ ಇವರು ಮಾಡುವ ಕೆಲಸಗಳೆಲ್ಲವೂ ವ್ಯರ್ಥವೇ ಆಗುವುದು ಸಹಜ. ಇಂಥವರನ್ನು ಸುಭಾಷಿತ ಕುರುಡನಿಗೆ ಹೋಲಿಸುತ್ತಿದೆ. ಕುರುಡನಿಗೆ ಕಣ್ಣು ಇಲ್ಲ; ಆದರೆ ಅವನು ಓಡುತ್ತಿದ್ದಾನೆ. ಆಗ ಅವನಿಗೆ ಅಪಾಯ ಎದುರಾಗುವುದು ಸಹಜ. ಕಣ್ಣನ್ನು ಇಲ್ಲಿ ತಿಳಿವಳಿಕೆಗೆ ಸಂಕೇತವಾಗಿ ಸೂಚಿಸಿದೆ. ಓಡುವುದು ಅವನ ಉತ್ಸಾಹವನ್ನೂ ಕ್ರಿಯಾಶೀಲತೆಯನ್ನೂ ಸೂಚಿಸುತ್ತದೆ.

ಇಲ್ಲಿ ಸುಭಾಷಿತ ಕುರುಡನನ್ನೂ ಕುಂಟನನ್ನೂ ಬಳಸಿಕೊಂಡಿರುವುದು ವ್ಯಕ್ತಿಗಳ ಗುಣ–ಸ್ವಭಾವಗಳ ಫಲವನ್ನು ನಿರೂಪಿಸುವ ಸಂಕೇತಗಳನ್ನಾಗಿ ಮಾತ್ರ; ಯಾರನ್ನೂ ಹಂಗಿಸುವುದು ಅದರ ಉದ್ದೇಶ ಅಲ್ಲ ಎಂಬುದನ್ನು ಗಮನಿಸಬೇಕು.

ಅರಿವು ಮತ್ತು ಕ್ರಿಯಾಶೀಲತೆ – ಎರಡನ್ನೂ ದಕ್ಕಿಸಿಕೊಂಡಾಗ ಮಾತ್ರವೇ ವ್ಯಕ್ತಿತ್ವದ ಪರಿಪೂರ್ಣತೆ; ಯಾವುದೋ ಒಂದು ಮಾತ್ರವೇ ಇದ್ದರೆ ಪ್ರಯೋಜವಿಲ್ಲ. ಕಾಲುಗಳಷ್ಟೆ ಇದ್ದರೂ ಪ್ರಯೋಜನವಿಲ್ಲ; ಕಣ್ಣಗಳಷ್ಟೆ ಇದ್ದರೂ ಪ್ರಯೋಜವಿಲ್ಲ. ನಮಗೆ ಕಣ್ಣುಗಳೂ ಬೇಕು; ಕಾಲುಗಳೂ ಬೇಕು. ಆಗಷ್ಟೆ ನಮ್ಮ ಬಾಳಿನ ಪ್ರಯಾಣ ಸುಗಮವಾಗಿ ನಡೆಯುತ್ತದೆ. ಕಣ್ಣು–ಕಾಲುಗಳ ಜೊತೆಗೆ ಹೃದಯವೂ ಬೇಕೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT