ಮೊದಲನೆಯದಾಗಿ ನಮ್ಮ ಮನಸ್ಸೇ ತುಂಬ ಚಂಚಲ; ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಈಗ ಸರಿ ಎಂದು ಕಂಡಿದ್ದು ನಮಗೆ ಮುಂದಿನ ಕ್ಷಣವೇ ತಪ್ಪು ಎಂದು ಅನಿಸುತ್ತಿರುತ್ತದೆ. ಇನ್ನು ನಾವು ಕಷ್ಟ ಪಟ್ಟು ಅಥವಾ ಮೋಸದಿಂದ ಸಂಪಾದಿಸಿದ ಸಂಪತ್ತಾದರೂ ಸ್ಥಿರವಾಗಿ ಇರುತ್ತದೆಯೋ? ಅದು ನಮ್ಮ ಜೊತೆಯಲ್ಲಿಯೇ ಎಷ್ಟು ಕಾಲ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಹೋಗಲಿ, ಮನಸ್ಸು, ಹಣ – ಇವುಗಳನ್ನು ಬಿಟ್ಟುಬಿಡೋಣ; ನಮ್ಮ ಜೀವನವಾದರೂ ಶಾಶ್ವತವಾಗಿರುತ್ತದೆಯೆ? ಅದೂ ಇಲ್ಲ. ಸುಭಾಷಿತ ಚೆನ್ನಾಗಿ ಹೇಳುತ್ತಿದೆ – ಯಮನಿಗೆ ಕರುಣೆಯೇ ಇಲ್ಲವಂತೆ. ಎಂದರೆ ನಾವು ಕಷ್ಟದಲ್ಲಿದ್ದೇವೆಯೋ ಸುಖದಲ್ಲಿದ್ದೇವೆಯೋ, ಯುವಕರೋ ಮುದುಕರೋ – ಇಂಥ ಸಂಗತಿಗಳನ್ನು ಯಮನು ಗಮನಿಸುವುದಿಲ್ಲ; ಯಾವ ಕ್ಷಣ ಬೇಕಾದರೂ ಅವನು ನಮ್ಮ ಪ್ರಾಣವನ್ನು ಅಪಹರಿಸಬಹುದು.