ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕ್ಷಣವಾದರೂ ಸಾರ್ಥಕಜೀವನ

Last Updated 29 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ

ವಿಜ್ಞಾನಶೌರ್ಯವಿಭವಾರ್ಯಗುಣೈಃ ಸಮೇತಮ್‌ ।

ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ

ಕಾಕೋಪಿ ಜೀವತಿ ಚಿರಾಯ ಬಲಿಂ ಚ ಭುಂಕ್ತೇ ।।

ಇದರ ತಾತ್ಪರ್ಯ ಹೀಗೆ:

‘ಜ್ಞಾನ, ಪರಾಕ್ರಮ ಮತ್ತು ವೈಭವ – ಇಂಥ ಸದ್ಗುಣಗಳನ್ನು ಸಂಪಾದಿಸಿಕೊಂಡು ಕೀರ್ತವಂತರಾಗಿ ಒಂದೇ ಒಂದು ಕ್ಷಣ ಬದುಕಿದರೂ ಅದು ನಿಜವಾದ ಜೀವನ ಎಂದು ತಿಳಿದವರು ಹೇಳುತ್ತಾರೆ. ಆದರೆ ಕಾಗೆಯೂ ಬಹಳ ಕಾಲ ಬದುಕಿರುತ್ತದೆ – ಇತರರು ಇಟ್ಟ ಅನ್ನವನ್ನಷ್ಟೆ ಅದು ತಿನ್ನುತ್ತದೆ.’

ಈ ಸುಭಾಷಿತ ಇರುವುದು ಕಾಗೆಯ ಬಗ್ಗೆ ಅಲ್ಲ; ಇನ್ನೊಬ್ಬರ ಆಲಂಬನೆಯಲ್ಲಿ ತಿಂದು ಬದುಕುವವರ ಬಗ್ಗೆ.

ಜೀವನದಲ್ಲಿ ಸಾಧಿಸಬೇಕು. ಏನನ್ನು ಸಾಧಿಸಬೇಕು? ಕೀರ್ತಿಯನ್ನು ತಂದುಕೊಡುವಂಥದ್ದರಲ್ಲಿ ಸಾಧನೆ ಮಾಡಬೇಕು? ಹೇಗೆ ಸಾಧನೆಯನ್ನು ಮಾಡಬೇಕು? ನಮ್ಮ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಬೇಕು; ಇತರರ ಹೆಗಲಿನ ಮೇಲೆ ನಿಂತು ನಮ್ಮ ಬಾವುಟವನ್ನು ಹಾರಿಸಬಾರದು. ಇದು ಸುಭಾಷಿತದ ಸಂದೇಶ.

ಸುಭಾಷಿತವು ಹಲವಾರು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಚಿಸಿದೆ; ಅವುಗಳಲ್ಲಿ ಮೂರನ್ನು ಸ್ಪಷ್ಟವಾಗಿಯೇ ಹೆಸರಿಸಿದೆ; ಜ್ಞಾನ, ಪರಾಕ್ರಮ ಮತ್ತು ವೈಭವ – ಇವು ಆ ಮೂರು ಗುಣಗಳು.

ಜ್ಞಾನ ಎಂದರೆ ತಿಳಿವಳಿಕೆ; ಇದು ನಮ್ಮ ಬುದ್ಧಿಶಕ್ತಿಗೆ ದ್ಯೋತಕ. ಪರಾಕ್ರಮ ಎಂದರೆ ಶರೀರದ ಸಾಮರ್ಥ್ಯ; ಇದು ನಮ್ಮ ದೈಹಿಕಶಕ್ತಿಗೆ ದ್ಯೋತಕ. ವೈಭವ ಎಂದರೆ ಸಂತೋಷ, ಸಂಭ್ರಮ; ಇದು ನಮ್ಮ ಮನಸ್ಸಿಗೆ, ಪರಿಸರಕ್ಕೆ ದ್ಯೋತಕ. ನಮ್ಮ ಜೀವನವು ಸಮಗ್ರವಾಗಿ ಅರಳಬೇಕು ಎಂಬುದು ಇಲ್ಲಿರುವ ಸಂದೇಶ. ಜೀವನವನ್ನು ಹೀಗೆ ಸಮಗ್ರವಾಗಿ ಕಟ್ಟಿಕೊಂಡು ಒಂದು ಕ್ಷಣ ಬದುಕಿದರೂ ಅದು ಸಾರ್ಥಕವಾದ ಜೀವನ ಎನ್ನುವುದನ್ನು ಸುಭಾಷಿತ ಸ್ಪಷ್ಟವಾಗಿ ಹೇಳಿದೆ.

ನಮ್ಮ ಜೀವನಕ್ಕೆ ಸ್ಪಷ್ಟವಾದ ಗುರಿಯಿರಬೇಕು; ಆ ಗುರಿಯನ್ನು ತಲಪುವಲ್ಲಿ ಆದರ್ಶವೂ ಇರಬೇಕು. ಗುರಿ ಮತ್ತು ಮಾರ್ಗ – ಎರಡೂ ಮುಖ್ಯ. ನಮ್ಮ ಬೆವರಿನ ಸುವಾಸನೆಯಲ್ಲಿ ನಮ್ಮ ಜೀವನದ ಸೌರಭವನ್ನು ನಾಲ್ಕು ದಿಕ್ಕುಗಳಲ್ಲಿ ಪಸರಿಸಬೇಕು. ಹೀಗಲ್ಲದೆ ಇನ್ನೊಬ್ಬರ ದುಡಿಮೆಯಲ್ಲಿ ಬದುಕುವುದೋ ಅಥವಾ ಇನ್ನೊಬ್ಬರ ಹೆಸರಿನ ಮರೆಯಲ್ಲಿ ನಮ್ಮ ಕೀರ್ತಿಪತಾಕೆಯನ್ನು ಹಾರಿಸುವುದೋ ಆಗಬಾರದು; ಹೀಗೆ ಬೇರೊಬ್ಬರ ಆಶ್ರಯದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಸಲ್ಲದು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT