<p><strong>ಆಯುಷಃ ಕ್ಷಣ ಏಕೋಪಿ ನ ತುಲ್ಯಂ ಸ್ವರ್ಣಕೋಟಿಭಿಃ ।</strong></p>.<p><strong>ಸ ವೃಥಾ ನೀಯತೇ ಯೇನ ಪ್ರಮಾದಃ ಸುಮಹಾನಯಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕೋಟಿ ಹೊನ್ನುಗಳೂ ಆಯುಸ್ಸಿನ ಒಂದು ಕ್ಷಣಕ್ಕೆ ಸಮಾನವಲ್ಲ; ಅದನ್ನೇ ವ್ಯರ್ಥಗೊಳಿಸುವುದೆಂದರೆ ಬಹಳ ದೊಡ್ಡ ನಷ್ಟವೇ ಸರಿ.‘</p>.<p>ಜೀವನದಲ್ಲಿ ಬಹುಶಃ ಏನನ್ನು ಬೇಕಾದರೂ ಮರಳಿ ಪಡೆಯಬಹುದೇನೋ, ಆಯುಸ್ಸು ಒಂದನ್ನು ಹೊರತು ಪಡಿಸಿ!</p>.<p>ಸುಭಾಷಿತ ಇದನ್ನೇ ಹೇಳುತ್ತಿರುವುದು.</p>.<p>ನಾವುಆಸ್ತಿ–ಅಂತಸ್ತು–ಅಧಿಕಾರಗಳ ಬೇಟೆಯಲ್ಲಿಯೇ ಇಡಿಯ ಜೀವನವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆ. ಹಣ–ಅಧಿಕಾರ–ಐಶ್ವರ್ಯ–ದರ್ಪಗಳನ್ನೇನೋ ಗಳಿಸುತ್ತೇವೆ; ಆದರೆ ಈ ಸಂಪಾದನೆಯಲ್ಲಿ ನಮ್ಮ ಜೀವನವನ್ನೇ ಕಳೆದುಕೊಂಡಿರುತ್ತೇವೆ. ಹೀಗಿದ್ದರೂ ಈ ವಿದ್ಯಮಾನ ನಮ್ಮ ಗಮನಕ್ಕೇ ಬಂದಿರುವುದಿಲ್ಲ. ನಾವು ಸಂಪಾದಿಸಿರುವ ಒಂದು ಕೋಟಿಯಷ್ಟು ಮಾತ್ರವೇ ಅಲ್ಲ, ಸಹಸ್ರ ಸಹಸ್ರ ಕೋಟಿ, ಅಷ್ಟೇಕೆ ನಮ್ಮ ಸಮಸ್ತ ಆಸ್ತಿಯನ್ನು ಸುರಿದರೂ ನಾವು ಕಳೆದುಕೊಂಡ ಆಯುಸ್ಸಿನಲ್ಲಿ ಒಂದೇ ಒಂದು ಕ್ಷಣವನ್ನೂ ಮತ್ತೆ ಪಡೆಯಲು ಸಾಧ್ಯವಾಗುವುದೇ ಇಲ್ಲ!</p>.<p><strong>ದಿನದ ಸೂಕ್ತಿ ಕೇಳಲು:<a href="https://anchor.fm/prajavani/episodes/ep-ei2ajn/a-a2tsb9a" target="_blank">ಮಾನವಜನ್ಮ ದೊಡ್ಡದು</a></strong></p>.<p>ಹಾಗಾದರೆ ಜೀವನದಲ್ಲಿ ಏನನ್ನೂ ಸಾಧಿಸಬಾರದೆ? ಸುಮ್ಮನೆ ಜೀವನವನ್ನು ನೋಡುತ್ತ ಕುಳಿತಿರಬೇಕೆ?</p>.<p>ಹಾಗೇನಿಲ್ಲ; ಜೀವನದಲ್ಲಿ ಕ್ರಿಯಾಶೀಲವಾಗಿರಬೇಕು; ಜೀವನವನ್ನು ಸವಿಯುವುದು ಎಂದರೆ ಸುಮ್ಮನೆ ಸೋಮಾರಿಯಾಗಿ ಕುಳಿತಿರುವುದಲ್ಲವಷ್ಟೆ!</p>.<p><strong>ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ ।</strong></p>.<p><strong>ನಾಸ್ತ್ಯುದ್ಯಮಸಮೋ ಬಂಧುಃಕೃತ್ವಾ ಯಂ ನಾವಸೀದತಿ ।।</strong></p>.<p>‘ಸೋಮಾರಿತನವು ಮನುಷ್ಯನ ದೇಹದಲ್ಲಿಯೇ ಇರುವಂಥ ದೊಡ್ಡ ಶತ್ರು. ಹೀಗೆಯೇ ಕಾಯಕಕ್ಕೆ ಸಮಾನವಾದ ಬಂಧುವೂ ಇಲ್ಲ; ನಿರಂತರ ಕ್ರಿಯಾಶೀಲನಾಗಿರುವವನು ಎಂದೂ ಕೆಡುವುದಿಲ್ಲ‘ – ಎನ್ನುತ್ತಿದೆ, ಈ ಶ್ಲೋಕ.</p>.<p>ಜೀವನವನ್ನು ಸವಿಯಬೇಕಾದರೆ ಕ್ರಿಯಾಶೀಲವಾಗಿರಬೇಕೇ ವಿನಾ ಸೋಮಾರಿಯಾಗಿರುವುದಲ್ಲ. ಆದರೆ ಈ ಕ್ರಿಯಾಶೀಲತೆಯನ್ನು ನಾವು ಅಭಿವ್ಯಕ್ತಿಸಬೇಕಾದುದು ಎಲ್ಲಿ ಎಂಬ ವಿವೇಕವೂ ನಮಗಿರಬೇಕೆನ್ನಿ!</p>.<p>ಅಕ್ಕಮಹಾದೇವಿಯ ವಚನವೊಂದನ್ನು ಇಲ್ಲಿ ನೋಡಬಹುದು:</p>.<p>ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ</p>.<p>ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ</p>.<p>ಶಿವನ ನೆನೆಯಿರೇ ! ಶಿವನ ನೆನೆಯಿರೇ !</p>.<p>ಈ ಜನ್ಮ ಬಳಿಕಿಲ್ಲ!</p>.<p>ಚೆನ್ನಮಲ್ಲಿಕಾರ್ಜುನದೇವರ ದೇವನ ನೆನೆದು</p>.<p>ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು</p>.<p>ಅಕ್ಕಮಹಾದೇವಿ ಬಳಸಿರುವ ಉಪಮೆ ಕೂಡ ಸೊಗಸಾಗಿದೆ. ಉದಯ ಮತ್ತು ಅಸ್ತಮಾನ – ಎಂಬುದು ಎರಡು ಕೊಳಗಗಳಂತೆ. ಇವು ನಮ್ಮ ಅಯುಷ್ಯವನ್ನು ಅಳೆದು ಅಳೆದು ಬರಿದು ಮಾಡುತ್ತಿದೆ. ನಮ್ಮ ಜೀವನ ಎಂಬ ಜನ್ಮರಾಶಿ ಬೇಗನೆ ಬರಿದಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಈ ರಾಶಿ ಒಮ್ಮೆ ಮುಗಿದರೆ ಮತ್ತೆ ಸಂಗ್ರಹಿಸಲು ಸಾಧ್ಯವಿಲ್ಲ. ಆದುದರಿಂದ ಶಿವನ ನೆನೆಯಿರಿ, ಶಿವನ ನೆನೆಯಿರಿ.</p>.<p>ಶಿವನನ್ನು ನೆನೆಯುವುದು ಎಂದರೇನು? ಶಿವ ಎಂದರೆ ಮಂಗಳ; ಒಳಿತು. ನಮ್ಮ ಜೀವನವನ್ನು ಒಳಿತಿಗೋಸ್ಕರ ಒಳಿತಿನಿಂದ ನಡೆಸುವುದೇ ಶಿವನನ್ನು ನೆನೆಯುವುದರ ತಾತ್ಪರ್ಯ. ಲೋಕಸಂಗ್ರಹಕ್ಕಾಗಿ ಜೀವನವನ್ನು ಸಿದ್ಧಗೊಳಿಸಿಕೊಳ್ಳುವುದೇ ನಮ್ಮ ಕ್ರಿಯಾಶೀಲವಾಗಬೇಕು; ಜೀವನದ ಸತ್ಯ ಶಿವ ಸುಂದರಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಅಣಿಯಾಗಬೇಕು. ಹೀಗಲ್ಲದೆ ಸಮಾಜಕ್ಕೆ ಮಾರಕವಾಗುವ ಹಾಗೆ ಜೀವನವನ್ನು ಸವೆಸುವುದು ಎಂದರೆ ಶವವಾಗಿ ಬದುಕಿದಂತೆಯೇ ಹೌದು.</p>.<p>ಮನುಷ್ಯಜನ್ಮ ಎನ್ನುವುದು ದೊಡ್ಡದು, ಶ್ರೇಷ್ಠವಾದುದು. ಇದನ್ನು ಹಾಳುಮಾಡಿಕೊಳ್ಳುವುದು ಬೇಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಯುಷಃ ಕ್ಷಣ ಏಕೋಪಿ ನ ತುಲ್ಯಂ ಸ್ವರ್ಣಕೋಟಿಭಿಃ ।</strong></p>.<p><strong>ಸ ವೃಥಾ ನೀಯತೇ ಯೇನ ಪ್ರಮಾದಃ ಸುಮಹಾನಯಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕೋಟಿ ಹೊನ್ನುಗಳೂ ಆಯುಸ್ಸಿನ ಒಂದು ಕ್ಷಣಕ್ಕೆ ಸಮಾನವಲ್ಲ; ಅದನ್ನೇ ವ್ಯರ್ಥಗೊಳಿಸುವುದೆಂದರೆ ಬಹಳ ದೊಡ್ಡ ನಷ್ಟವೇ ಸರಿ.‘</p>.<p>ಜೀವನದಲ್ಲಿ ಬಹುಶಃ ಏನನ್ನು ಬೇಕಾದರೂ ಮರಳಿ ಪಡೆಯಬಹುದೇನೋ, ಆಯುಸ್ಸು ಒಂದನ್ನು ಹೊರತು ಪಡಿಸಿ!</p>.<p>ಸುಭಾಷಿತ ಇದನ್ನೇ ಹೇಳುತ್ತಿರುವುದು.</p>.<p>ನಾವುಆಸ್ತಿ–ಅಂತಸ್ತು–ಅಧಿಕಾರಗಳ ಬೇಟೆಯಲ್ಲಿಯೇ ಇಡಿಯ ಜೀವನವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆ. ಹಣ–ಅಧಿಕಾರ–ಐಶ್ವರ್ಯ–ದರ್ಪಗಳನ್ನೇನೋ ಗಳಿಸುತ್ತೇವೆ; ಆದರೆ ಈ ಸಂಪಾದನೆಯಲ್ಲಿ ನಮ್ಮ ಜೀವನವನ್ನೇ ಕಳೆದುಕೊಂಡಿರುತ್ತೇವೆ. ಹೀಗಿದ್ದರೂ ಈ ವಿದ್ಯಮಾನ ನಮ್ಮ ಗಮನಕ್ಕೇ ಬಂದಿರುವುದಿಲ್ಲ. ನಾವು ಸಂಪಾದಿಸಿರುವ ಒಂದು ಕೋಟಿಯಷ್ಟು ಮಾತ್ರವೇ ಅಲ್ಲ, ಸಹಸ್ರ ಸಹಸ್ರ ಕೋಟಿ, ಅಷ್ಟೇಕೆ ನಮ್ಮ ಸಮಸ್ತ ಆಸ್ತಿಯನ್ನು ಸುರಿದರೂ ನಾವು ಕಳೆದುಕೊಂಡ ಆಯುಸ್ಸಿನಲ್ಲಿ ಒಂದೇ ಒಂದು ಕ್ಷಣವನ್ನೂ ಮತ್ತೆ ಪಡೆಯಲು ಸಾಧ್ಯವಾಗುವುದೇ ಇಲ್ಲ!</p>.<p><strong>ದಿನದ ಸೂಕ್ತಿ ಕೇಳಲು:<a href="https://anchor.fm/prajavani/episodes/ep-ei2ajn/a-a2tsb9a" target="_blank">ಮಾನವಜನ್ಮ ದೊಡ್ಡದು</a></strong></p>.<p>ಹಾಗಾದರೆ ಜೀವನದಲ್ಲಿ ಏನನ್ನೂ ಸಾಧಿಸಬಾರದೆ? ಸುಮ್ಮನೆ ಜೀವನವನ್ನು ನೋಡುತ್ತ ಕುಳಿತಿರಬೇಕೆ?</p>.<p>ಹಾಗೇನಿಲ್ಲ; ಜೀವನದಲ್ಲಿ ಕ್ರಿಯಾಶೀಲವಾಗಿರಬೇಕು; ಜೀವನವನ್ನು ಸವಿಯುವುದು ಎಂದರೆ ಸುಮ್ಮನೆ ಸೋಮಾರಿಯಾಗಿ ಕುಳಿತಿರುವುದಲ್ಲವಷ್ಟೆ!</p>.<p><strong>ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ ।</strong></p>.<p><strong>ನಾಸ್ತ್ಯುದ್ಯಮಸಮೋ ಬಂಧುಃಕೃತ್ವಾ ಯಂ ನಾವಸೀದತಿ ।।</strong></p>.<p>‘ಸೋಮಾರಿತನವು ಮನುಷ್ಯನ ದೇಹದಲ್ಲಿಯೇ ಇರುವಂಥ ದೊಡ್ಡ ಶತ್ರು. ಹೀಗೆಯೇ ಕಾಯಕಕ್ಕೆ ಸಮಾನವಾದ ಬಂಧುವೂ ಇಲ್ಲ; ನಿರಂತರ ಕ್ರಿಯಾಶೀಲನಾಗಿರುವವನು ಎಂದೂ ಕೆಡುವುದಿಲ್ಲ‘ – ಎನ್ನುತ್ತಿದೆ, ಈ ಶ್ಲೋಕ.</p>.<p>ಜೀವನವನ್ನು ಸವಿಯಬೇಕಾದರೆ ಕ್ರಿಯಾಶೀಲವಾಗಿರಬೇಕೇ ವಿನಾ ಸೋಮಾರಿಯಾಗಿರುವುದಲ್ಲ. ಆದರೆ ಈ ಕ್ರಿಯಾಶೀಲತೆಯನ್ನು ನಾವು ಅಭಿವ್ಯಕ್ತಿಸಬೇಕಾದುದು ಎಲ್ಲಿ ಎಂಬ ವಿವೇಕವೂ ನಮಗಿರಬೇಕೆನ್ನಿ!</p>.<p>ಅಕ್ಕಮಹಾದೇವಿಯ ವಚನವೊಂದನ್ನು ಇಲ್ಲಿ ನೋಡಬಹುದು:</p>.<p>ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ</p>.<p>ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ</p>.<p>ಶಿವನ ನೆನೆಯಿರೇ ! ಶಿವನ ನೆನೆಯಿರೇ !</p>.<p>ಈ ಜನ್ಮ ಬಳಿಕಿಲ್ಲ!</p>.<p>ಚೆನ್ನಮಲ್ಲಿಕಾರ್ಜುನದೇವರ ದೇವನ ನೆನೆದು</p>.<p>ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು</p>.<p>ಅಕ್ಕಮಹಾದೇವಿ ಬಳಸಿರುವ ಉಪಮೆ ಕೂಡ ಸೊಗಸಾಗಿದೆ. ಉದಯ ಮತ್ತು ಅಸ್ತಮಾನ – ಎಂಬುದು ಎರಡು ಕೊಳಗಗಳಂತೆ. ಇವು ನಮ್ಮ ಅಯುಷ್ಯವನ್ನು ಅಳೆದು ಅಳೆದು ಬರಿದು ಮಾಡುತ್ತಿದೆ. ನಮ್ಮ ಜೀವನ ಎಂಬ ಜನ್ಮರಾಶಿ ಬೇಗನೆ ಬರಿದಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಈ ರಾಶಿ ಒಮ್ಮೆ ಮುಗಿದರೆ ಮತ್ತೆ ಸಂಗ್ರಹಿಸಲು ಸಾಧ್ಯವಿಲ್ಲ. ಆದುದರಿಂದ ಶಿವನ ನೆನೆಯಿರಿ, ಶಿವನ ನೆನೆಯಿರಿ.</p>.<p>ಶಿವನನ್ನು ನೆನೆಯುವುದು ಎಂದರೇನು? ಶಿವ ಎಂದರೆ ಮಂಗಳ; ಒಳಿತು. ನಮ್ಮ ಜೀವನವನ್ನು ಒಳಿತಿಗೋಸ್ಕರ ಒಳಿತಿನಿಂದ ನಡೆಸುವುದೇ ಶಿವನನ್ನು ನೆನೆಯುವುದರ ತಾತ್ಪರ್ಯ. ಲೋಕಸಂಗ್ರಹಕ್ಕಾಗಿ ಜೀವನವನ್ನು ಸಿದ್ಧಗೊಳಿಸಿಕೊಳ್ಳುವುದೇ ನಮ್ಮ ಕ್ರಿಯಾಶೀಲವಾಗಬೇಕು; ಜೀವನದ ಸತ್ಯ ಶಿವ ಸುಂದರಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಅಣಿಯಾಗಬೇಕು. ಹೀಗಲ್ಲದೆ ಸಮಾಜಕ್ಕೆ ಮಾರಕವಾಗುವ ಹಾಗೆ ಜೀವನವನ್ನು ಸವೆಸುವುದು ಎಂದರೆ ಶವವಾಗಿ ಬದುಕಿದಂತೆಯೇ ಹೌದು.</p>.<p>ಮನುಷ್ಯಜನ್ಮ ಎನ್ನುವುದು ದೊಡ್ಡದು, ಶ್ರೇಷ್ಠವಾದುದು. ಇದನ್ನು ಹಾಳುಮಾಡಿಕೊಳ್ಳುವುದು ಬೇಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>