<p>ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿ ಕುಳಿತಿದ್ದಾರೆ; ನಡುವೆ ಅವರ ಮುದ್ದಿನ ಮಗ ಗಣೇಶನನ್ನೂ ಕುಳ್ಳಿರಿಸಿಕೊಂಡಿದ್ದಾರೆ. ತಂದೆ–ತಾಯಿಗಳಿಗಿಬ್ಬರಿಗೂ ಏಕಕಾಲದಲ್ಲಿ ಒಂದು ಆಸೆ ಮೂಡಿದೆ – ಮಗನನ್ನು ಮುದ್ದಿಸಬೇಕು ಎಂದು. ಈ ಸಂಗತಿಯನ್ನು ಗಣೇಶ ಅದು ಹೇಗೋ ಗ್ರಹಿಸಿದ್ದಾನೆ. ಒಂದು ಕಡೆಯಿಂದ ಅಪ್ಪ, ಇನ್ನೊಂದು ಕಡೆಯಿಂದ ಅಮ್ಮ – ಗಣೇಶನ ಆ ಕಡೆ ಕೆನ್ನೆಗೆ, ಈ ಕಡೆ ಕೆನ್ನೆಗೆ ಮತ್ತು ಕೊಡಲು ಮುಂದಾದರು. ಇನ್ನೇನು ಅವರಿಬ್ಬರ ತುಟಿಗಳು ಗಣೇಶನ ಕೆನ್ನೆಗಳನ್ನು ಸ್ಪರ್ಶಿಸಬೇಕು – ಅಷ್ಟರಲ್ಲಿ ಅವನು ತನ್ನ ಮುಖವನ್ನು ಸ್ವಲ್ಪ ಹಿಂದಕ್ಕೆ ಸೆಳೆದುಕೊಂಡ! ಮಗನಿಗೆ ಮುತ್ತು ಕೊಡಲು ಬಂದ ದಂಪತಿ ಈಗ ಪರಸ್ಪರ ಮುತ್ತನ್ನು ಕೊಟ್ಟುಕೊಳ್ಳುವಂತಾಯಿತು!</p>.<p>ಸಂಸ್ಕೃತ ಪದ್ಯವೊಂದರ ತಾತ್ಪರ್ಯವಿದು.</p>.<p>ನಮ್ಮ ಸಂಸ್ಕೃತಿಯಲ್ಲಿ ದೇವತೆಗಳನ್ನೂ ನಮ್ಮ ಹಾಸ್ಯಕ್ಕೂ ವಿಮರ್ಶೆಗೂ ಪ್ರೀತಿಗೂ ಕ್ರೋಧಕ್ಕೂ ಬಳಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ನಮ್ಮ ಆಶಯಗಳು, ಆಲೋಚನೆಗಳು, ಮೌಲ್ಯಗಳು, ಔದಾರ್ಯಗಳು ದೇವತೆಗಳ ಕಲ್ಪನೆಯಲ್ಲಿ ಸಹಜವಾಗಿಯೇ ಪ್ರತಿಫಲನಗೊಳ್ಳುತ್ತವೆ. ಈ ಆತ್ಮವಿಸ್ತರಣದ ಭಾಗವಾಗಿ ತೋರಿಕೊಂಡಿರುವ ದೇವತೆಗಳಲ್ಲಿ ಗಣೇಶನಿಗೆ ತುಂಬ ವಿಶಿಷ್ಟವಾದ ಸ್ಥಾನವಿದೆ.</p>.<p>ಮೇಲಣ ಪದ್ಯವನ್ನು ಮೆಲುಕು ಹಾಕುವಾಗ ಒಂದು ಕುಟುಂಬದ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಕುಟುಂಬವಾದರೂ ಆದರ್ಶದ ಕುಟುಂಬ, ಸುಖೀ ಕುಟುಂಬ. ಗಣೇಶತತ್ತ್ವದ ಪ್ರಧಾನ ಸಂದೇಶವೇ ಇದು: ನಮ್ಮ ಕೌಟುಂಬಿಕ ಜೀವನ ಸುಖವಾಗಿರಬೇಕು. ಶಿವನ ಸಂಸಾರ ಎಂದರೆ ಅದು ಆದರ್ಶದ ಸಂಸಾರ. ಎಷ್ಟೆಲ್ಲ ಇಜ್ಜೋಡುಗಳು ನಡುವೆಯೂ ಸಾಮರಸ್ಯವನ್ನೂ ಆನಂದವನ್ನೂ ಸಾಧಿಸಿರುವ ಕುಟುಂಬವದು. ಶಿವನ ವಾಹನ ಎತ್ತು, ಪಾರ್ವತಿಯ ವಾಹನ ಸಿಂಹ; ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು; ಶಿವನ ಆಭರಣ ಹಾವು; ಇಷ್ಟನ್ನು ನೋಡಿದರೂ ಸಾಕು, ಜಗತ್ತಿನ ಸಮಸ್ಯೆಗಳೆಲ್ಲವೂ ಏಕತ್ರ ಸೇರಿಕೊಂಡಿರುವುದು ಎದ್ದುಕಾಣುತ್ತದೆ. ಆದರೆ ಶಿವನ ಪರಿವಾರ ಇಷ್ಟೆಲ್ಲ ವೈರಗಳನ್ನು ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದರೂ ಅದು ಸಾಮರಸ್ಯದಿಂದಿದೆ, ಸಂತೋಷದಿಂದಿದೆ. ಮಾತ್ರವಲ್ಲ, ಬೇರೆಯವರಿಗೂ ಅಭಯ–ಆನಂದಗಳನ್ನು ನೀಡುತ್ತಿದೆ. ಈ ಕುಟುಂಬದ ಕೌಟುಂಬಿಕ ಪ್ರೀತಿಗೆ ಸಂಕೇತದಂತಿದೆ, ಗೌರೀ–ಗಣೇಶ ಹಬ್ಬ. ತಾಯಿಯೊಬ್ಬಳೇ ತವರಿಗೆ ಬಂದದ್ದು ತಿಳಿದು ಗಣೇಶ ಕೂಡಲೇ ಇಲ್ಲಿಗೆ ಓಡಿಬರುತ್ತಾನೆ; ತಾಯಿ ಇರುವಷ್ಟು ದಿನ ಅವಳೊಂದಿಗೆ ಉಳಿಯುತ್ತಾನೆ; ಬಳಿಕ ಜೊತೆಯಲ್ಲಿಯೇ ಜೋಪಾನವಾಗಿ ಮನೆಗೆ ಕರೆದುಕೊಂಡುಹೋಗುತ್ತಾನೆ.</p>.<p>ನಮ್ಮ ಜೀವನದ ಹಲವು ಆಯಾಮಗಳ ಮೀಮಾಂಸೆಯನ್ನು ಗಣೇಶನ ಕಲ್ಪನೆಯಲ್ಲಿ ಕಾಣುತ್ತೇವೆ. ನಾವು ಜಗತ್ತಿಗೆ ಕಿವಿಯಾಗಬೇಕು ಎಂಬದುನ್ನು ಅವನ ಕಿವಿಗಳು ಸಂಕೇತಿಸುತ್ತವೆ. ಅವನ ಸೊಂಡಿಲು ಅದು ಪ್ರಣವಕ್ಕೆ ಸಂಕೇತ. ಅವನ ದೊಡ್ಡ ಶರೀರವನ್ನು ಇಲಿಯಂಥ ಸಣ್ಣ ಜೀವಿ ಹೊರುತ್ತಿದೆ; ದೊಡ್ಡದು–ಸಣ್ಣದು ಎಂಬುದು ಸಾಪೇಕ್ಷ ಎನ್ನುತ್ತಿದೆ. ಅವನು ಸೊಂಟಕ್ಕೆ ಸುತ್ತಿಕೊಂಡಿರುವ ಹಾವು ಅದು ಸಾಧನೆಗೆ ಸಂಕೇತ. ಅವನು ಬ್ರಹ್ಮಚಾರಿಯೇ ಹೌದು; ಆದರೆ ಸಿದ್ಧಿ–ಬುದ್ಧಿಗಳನ್ನೇ ಅವನು ವರಿಸಿದ್ದಾನೆ. ಆದಿದಂಪತಿಗಳನ್ನೇ ತನ್ನ ತುಂಟಾಟಕ್ಕೆ ವಸ್ತುವಾಗಿಸಿಕೊಂಡವನು ಗಣೇಶ. ಆದರೆ ಅಪಹಾಸ್ಯ ಮಾಡಿದ ಚಂದ್ರನನ್ನು ಅವನು ಶಪಿಸಿದೆ ಬಿಡಲಿಲ್ಲ.</p>.<p>ಒಟ್ಟಿನಲ್ಲಿ ಗಣೇಶ ಹಬ್ಬದ ದಿನ ಅವನ ತತ್ತ್ವಗಳ ಅನುಸಂಧಾನವೂ ನಡೆಯಬೇಕು; ಆಗ ನಮ್ಮ ಜೀವನವು ಸತ್ಯ ಶಿವ ಸುಂದರಗಳ ನೆಲೆಯಾಗುವುದು ಖಂಡಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿ ಕುಳಿತಿದ್ದಾರೆ; ನಡುವೆ ಅವರ ಮುದ್ದಿನ ಮಗ ಗಣೇಶನನ್ನೂ ಕುಳ್ಳಿರಿಸಿಕೊಂಡಿದ್ದಾರೆ. ತಂದೆ–ತಾಯಿಗಳಿಗಿಬ್ಬರಿಗೂ ಏಕಕಾಲದಲ್ಲಿ ಒಂದು ಆಸೆ ಮೂಡಿದೆ – ಮಗನನ್ನು ಮುದ್ದಿಸಬೇಕು ಎಂದು. ಈ ಸಂಗತಿಯನ್ನು ಗಣೇಶ ಅದು ಹೇಗೋ ಗ್ರಹಿಸಿದ್ದಾನೆ. ಒಂದು ಕಡೆಯಿಂದ ಅಪ್ಪ, ಇನ್ನೊಂದು ಕಡೆಯಿಂದ ಅಮ್ಮ – ಗಣೇಶನ ಆ ಕಡೆ ಕೆನ್ನೆಗೆ, ಈ ಕಡೆ ಕೆನ್ನೆಗೆ ಮತ್ತು ಕೊಡಲು ಮುಂದಾದರು. ಇನ್ನೇನು ಅವರಿಬ್ಬರ ತುಟಿಗಳು ಗಣೇಶನ ಕೆನ್ನೆಗಳನ್ನು ಸ್ಪರ್ಶಿಸಬೇಕು – ಅಷ್ಟರಲ್ಲಿ ಅವನು ತನ್ನ ಮುಖವನ್ನು ಸ್ವಲ್ಪ ಹಿಂದಕ್ಕೆ ಸೆಳೆದುಕೊಂಡ! ಮಗನಿಗೆ ಮುತ್ತು ಕೊಡಲು ಬಂದ ದಂಪತಿ ಈಗ ಪರಸ್ಪರ ಮುತ್ತನ್ನು ಕೊಟ್ಟುಕೊಳ್ಳುವಂತಾಯಿತು!</p>.<p>ಸಂಸ್ಕೃತ ಪದ್ಯವೊಂದರ ತಾತ್ಪರ್ಯವಿದು.</p>.<p>ನಮ್ಮ ಸಂಸ್ಕೃತಿಯಲ್ಲಿ ದೇವತೆಗಳನ್ನೂ ನಮ್ಮ ಹಾಸ್ಯಕ್ಕೂ ವಿಮರ್ಶೆಗೂ ಪ್ರೀತಿಗೂ ಕ್ರೋಧಕ್ಕೂ ಬಳಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ನಮ್ಮ ಆಶಯಗಳು, ಆಲೋಚನೆಗಳು, ಮೌಲ್ಯಗಳು, ಔದಾರ್ಯಗಳು ದೇವತೆಗಳ ಕಲ್ಪನೆಯಲ್ಲಿ ಸಹಜವಾಗಿಯೇ ಪ್ರತಿಫಲನಗೊಳ್ಳುತ್ತವೆ. ಈ ಆತ್ಮವಿಸ್ತರಣದ ಭಾಗವಾಗಿ ತೋರಿಕೊಂಡಿರುವ ದೇವತೆಗಳಲ್ಲಿ ಗಣೇಶನಿಗೆ ತುಂಬ ವಿಶಿಷ್ಟವಾದ ಸ್ಥಾನವಿದೆ.</p>.<p>ಮೇಲಣ ಪದ್ಯವನ್ನು ಮೆಲುಕು ಹಾಕುವಾಗ ಒಂದು ಕುಟುಂಬದ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಕುಟುಂಬವಾದರೂ ಆದರ್ಶದ ಕುಟುಂಬ, ಸುಖೀ ಕುಟುಂಬ. ಗಣೇಶತತ್ತ್ವದ ಪ್ರಧಾನ ಸಂದೇಶವೇ ಇದು: ನಮ್ಮ ಕೌಟುಂಬಿಕ ಜೀವನ ಸುಖವಾಗಿರಬೇಕು. ಶಿವನ ಸಂಸಾರ ಎಂದರೆ ಅದು ಆದರ್ಶದ ಸಂಸಾರ. ಎಷ್ಟೆಲ್ಲ ಇಜ್ಜೋಡುಗಳು ನಡುವೆಯೂ ಸಾಮರಸ್ಯವನ್ನೂ ಆನಂದವನ್ನೂ ಸಾಧಿಸಿರುವ ಕುಟುಂಬವದು. ಶಿವನ ವಾಹನ ಎತ್ತು, ಪಾರ್ವತಿಯ ವಾಹನ ಸಿಂಹ; ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು; ಶಿವನ ಆಭರಣ ಹಾವು; ಇಷ್ಟನ್ನು ನೋಡಿದರೂ ಸಾಕು, ಜಗತ್ತಿನ ಸಮಸ್ಯೆಗಳೆಲ್ಲವೂ ಏಕತ್ರ ಸೇರಿಕೊಂಡಿರುವುದು ಎದ್ದುಕಾಣುತ್ತದೆ. ಆದರೆ ಶಿವನ ಪರಿವಾರ ಇಷ್ಟೆಲ್ಲ ವೈರಗಳನ್ನು ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದರೂ ಅದು ಸಾಮರಸ್ಯದಿಂದಿದೆ, ಸಂತೋಷದಿಂದಿದೆ. ಮಾತ್ರವಲ್ಲ, ಬೇರೆಯವರಿಗೂ ಅಭಯ–ಆನಂದಗಳನ್ನು ನೀಡುತ್ತಿದೆ. ಈ ಕುಟುಂಬದ ಕೌಟುಂಬಿಕ ಪ್ರೀತಿಗೆ ಸಂಕೇತದಂತಿದೆ, ಗೌರೀ–ಗಣೇಶ ಹಬ್ಬ. ತಾಯಿಯೊಬ್ಬಳೇ ತವರಿಗೆ ಬಂದದ್ದು ತಿಳಿದು ಗಣೇಶ ಕೂಡಲೇ ಇಲ್ಲಿಗೆ ಓಡಿಬರುತ್ತಾನೆ; ತಾಯಿ ಇರುವಷ್ಟು ದಿನ ಅವಳೊಂದಿಗೆ ಉಳಿಯುತ್ತಾನೆ; ಬಳಿಕ ಜೊತೆಯಲ್ಲಿಯೇ ಜೋಪಾನವಾಗಿ ಮನೆಗೆ ಕರೆದುಕೊಂಡುಹೋಗುತ್ತಾನೆ.</p>.<p>ನಮ್ಮ ಜೀವನದ ಹಲವು ಆಯಾಮಗಳ ಮೀಮಾಂಸೆಯನ್ನು ಗಣೇಶನ ಕಲ್ಪನೆಯಲ್ಲಿ ಕಾಣುತ್ತೇವೆ. ನಾವು ಜಗತ್ತಿಗೆ ಕಿವಿಯಾಗಬೇಕು ಎಂಬದುನ್ನು ಅವನ ಕಿವಿಗಳು ಸಂಕೇತಿಸುತ್ತವೆ. ಅವನ ಸೊಂಡಿಲು ಅದು ಪ್ರಣವಕ್ಕೆ ಸಂಕೇತ. ಅವನ ದೊಡ್ಡ ಶರೀರವನ್ನು ಇಲಿಯಂಥ ಸಣ್ಣ ಜೀವಿ ಹೊರುತ್ತಿದೆ; ದೊಡ್ಡದು–ಸಣ್ಣದು ಎಂಬುದು ಸಾಪೇಕ್ಷ ಎನ್ನುತ್ತಿದೆ. ಅವನು ಸೊಂಟಕ್ಕೆ ಸುತ್ತಿಕೊಂಡಿರುವ ಹಾವು ಅದು ಸಾಧನೆಗೆ ಸಂಕೇತ. ಅವನು ಬ್ರಹ್ಮಚಾರಿಯೇ ಹೌದು; ಆದರೆ ಸಿದ್ಧಿ–ಬುದ್ಧಿಗಳನ್ನೇ ಅವನು ವರಿಸಿದ್ದಾನೆ. ಆದಿದಂಪತಿಗಳನ್ನೇ ತನ್ನ ತುಂಟಾಟಕ್ಕೆ ವಸ್ತುವಾಗಿಸಿಕೊಂಡವನು ಗಣೇಶ. ಆದರೆ ಅಪಹಾಸ್ಯ ಮಾಡಿದ ಚಂದ್ರನನ್ನು ಅವನು ಶಪಿಸಿದೆ ಬಿಡಲಿಲ್ಲ.</p>.<p>ಒಟ್ಟಿನಲ್ಲಿ ಗಣೇಶ ಹಬ್ಬದ ದಿನ ಅವನ ತತ್ತ್ವಗಳ ಅನುಸಂಧಾನವೂ ನಡೆಯಬೇಕು; ಆಗ ನಮ್ಮ ಜೀವನವು ಸತ್ಯ ಶಿವ ಸುಂದರಗಳ ನೆಲೆಯಾಗುವುದು ಖಂಡಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>