ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಧರ್ಮ–ದರ್ಶನ

ವೈಶಾಖದ ಹುಣ್ಣಿಮೆ
Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೌದ್ಧದರ್ಶನದ ಅಧ್ಯಯನ ಸುಲಭವೇನಲ್ಲ. ಈ ದರ್ಶನದಲ್ಲಿ ಹತ್ತುಹಲವು ಶಾಖೆಗಳಿವೆ; ಬೌದ್ಧವಾಙ್ಮಯವಾದ ತ್ರಿಪಿಟಕಗಳ ಹರಹು ಕೂಡ ದೊಡ್ಡದು. ಹೀಗಿರುವಾಗ ಅದರ ಪರಿಚಯವನ್ನು ಸುಲಭವಾಗಿ ಹೇಗೆ ಮಾಡಿಕೊಳ್ಳುವುದು? ಅದಕ್ಕಾಗಿ ಈ ವಿಷಯದಲ್ಲಿರುವ ನಾಲ್ಕಾರು ಗ್ರಂಥಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಇಂಗ್ಲಿಷ್‌ ಮತ್ತು ಹಿಂದೀಭಾಷೆಗಳಲ್ಲಿ ಉತ್ತಮ ಗ್ರಂಥಗಳು ಹತ್ತಾರಿವೆ; ವಿದೇಶೀ ವಿದ್ವಾಂಸರೂ ನಮ್ಮ ದೇಶದ ವಿದ್ವಾಂಸರೂ ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದನ್ನು ಪರಿಚಯಮಾಡಿಕೊಳ್ಳಬಹುದು.

ಆಚಾರ್ಯ ನರೇಂದ್ರದೇವ (1889–1956) ‘ಬೌದ್ಧಧರ್ಮ–ದರ್ಶನ’ ಎಂಬ ಬೃಹತ್‌ ಕೃತಿಯನ್ನು ಹಿಂದಿಯಲ್ಲಿ ರಚಿಸಿದ್ದಾರೆ. (1955ರಲ್ಲಿ ಪ್ರಕಟವಾಗಿದ್ದ ಈ ಕೃತಿಯ ಕನ್ನಡ ಅನುವಾದವನ್ನು 2017ರಲ್ಲಿ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ ಪ್ರಕಟಿಸಿದೆ; ಆದರೆ ಅನುವಾದ ತೃಪ್ತಿದಾಯಕವಾಗಿಲ್ಲ.) ಈ ಗ್ರಂಥದ ಒಂದೆರಡು ವಾಕ್ಯಗಳನ್ನು ಇಲ್ಲಿ ನೋಡಬಹುದು. ಬುದ್ಧನ ಮೂಲ ಉಪದೇಶದ ಬಗ್ಗೆ ನರೇಂದ್ರದೇವ ಹೇಳುತ್ತಾರೆ:

‘ಬುದ್ಧನ ಉಪದೇಶ ಜನರ ಭಾಷೆಯಲ್ಲಿಯೇ ನಡೆಯುತ್ತಿತ್ತು. ಏಕೆಂದರೆ ಅವನ ಉಪದೇಶಗಳು ಸಾಮಾನ್ಯರನ್ನು ಉದ್ದೇಶಿಸಿಯೇ ಇರುತ್ತಿದ್ದವು. ಬುದ್ಧನ ಉಪದೇಶಗಳು ಉಪನಿಷತ್ತಿನ ಮಾತುಗಳನ್ನೇ ನೆನಪಿಸುತ್ತಿದ್ದವು. ಅವನ ಬೋಧನೆಯಲ್ಲಿ ಪ್ರಭುತ್ವವಿತ್ತು; ಹೀಗಾಗಿಯೇ ಒಂದು ಕಾಲಕ್ಕೆ ಜಗತ್ತಿನ ವಿಶಾಲ ಭೂಭಾಗದಲ್ಲಿ ಬೌದ್ಧಧರ್ಮ ಪ್ರಚಾರದಲ್ಲಿತ್ತು. ಬುದ್ಧನು ಮೋಕ್ಷಮಾರ್ಗವೊಂದನ್ನು ಕಂಡುಹಿಡಿದಿದ್ದ; ಆದರೆ ಅದು ಎಲ್ಲ ಜೀವಿಗಳಿಗೂ ಮುಕ್ತವಾಗಿತ್ತು. ಹುಟ್ಟಿನಿಂದಲೇ ಯಾರೊಬ್ಬರೂ ಜ್ಯೇಷ್ಠರೋ ಅಥವಾ ಕನಿಷ್ಠರೋ – ಎನ್ನುವುದನ್ನು ಅವನು ಒಪ್ಪುತ್ತಿರಲಿಲ್ಲ...

‘ಭಗವಾನ್‌ ಬುದ್ಧನ ಬೋಧನೆಗಳು ವ್ಯಾವಹಾರಿಕವಾದಂಥವು. ದುಃಖದಿಂದ ಬಿಡುಗಡೆಯಾಗುವ ಉಪಾಯವನ್ನು ಅವನು ತಿಳಿಸುತ್ತಿದ್ದ. ಜಗತ್ತು ಶಾಶ್ವತವೋ ಅಶಾಶ್ವತವೋ, ಲೋಕ ಅನಂತವೋ ಸಾಂತವೋ, ಜೀವ ಮತ್ತು ದೇಹ – ಒಂದೋ ಬೇರೆಯೋ, ತಥಾಗತತ್ವ ಪ್ರಾಪ್ತವಾಗುವುದು ಸಾವಿನ ಅನಂತರವೋ ಅಥವಾ ಇಲ್ಲವೋ – ಇಂಥ ವಿಷಯಗಳ ಬಗ್ಗೆ ಅವನು ಉಪದೇಶಿಸಲಿಲ್ಲ. ಏಕೆಂದರೆ ಈ ಶಬ್ದಗಳಿಗೆ ಅರ್ಥಸಂಹಿತೆ ಇರದು. ಇವುಗಳಿಗೂ ಬ್ರಹ್ಮಚರ್ಯೆಗೂ ನಂಟೂ ಇರದು. ಇವನ್ನು ತಿಳಿದುಕೊಂಡರೂ ಜನ್ಮ, ಮರಣ, ಜರಾ, ಶೋಕ, ದುಃಖ – ಇವನ್ನು ತಪ್ಪಿಸಲಾಗದು.

‘ಭಗವಾನ್‌ ಬುದ್ಧ ಉಪದೇಶಿಸಿದ ಮಾರ್ಗವನ್ನು ‘ಮಧ್ಯಮಮಾರ್ಗ’ ಎಂದು ಒಕ್ಕಣಿಸಲಾಗುತ್ತದೆ. ಏಕೆಂದರೆ ಅದು ಎರಡು ಆತ್ಯಂತಿಕ ಸಿದ್ಧಾಂತಗಳನ್ನು ಸಮರಸಗೊಳಿಸುತ್ತದೆ. ಆತ್ಮ ಇದೆ ಅಥವಾ ಆತ್ಮ ಇಲ್ಲ – ಇವೆರಡರ ನಡುವೆ ಅವನು ಸಮನ್ವಯ ಸಿದ್ಧಾಂತವಾದ ‘ಮಧ್ಯಮಮಾರ್ಗ’ವನ್ನು ಉಪದೇಶಿಸಿದ್ದಾನೆ. ಎಲ್ಲರಿಗೂ ಈ ಧರ್ಮವನ್ನು ಪರೀಕ್ಷಿಸಲು ಅವನು ಆಮಂತ್ರಿಸುತ್ತಾನೆ. ಬೇರೆಯವರು ಮಾಡಿಕೊಂಡ ಸಾಕ್ಷಾತ್ಕಾರ ಅದು ನಿಮ್ಮ ಸಾಕ್ಷಾತ್ಕಾರ ಆಗುವುದಿಲ್ಲ ಎಂದೂ ಎಚ್ಚರಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT