ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಪರ–ವಿರೋಧಗಳ ನಡುವೆ ಹೆಸರು ಬದಲಾವಣೆ ಗೀಳು

Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು ಮತ್ತು ಮೈಸೂರು ಮಧ್ಯೆ ಪ್ರತಿದಿನ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ನ ಹೆಸರನ್ನು ‘ಒಡೆಯರ್ ಎಕ್ಸ್‌ಪ್ರೆಸ್‌’ ಎಂದು ಮರುನಾಮಕರಣ ಮಾಡಲಾಗಿದೆ. ಮೈಸೂರು ಒಡೆಯರ್ ಮನೆತನಕ್ಕೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಟಿಪ್ಪು ಎಕ್ಸ್‌ಪ್ರೆಸ್‌ನ ಹೆಸರನ್ನು ಬದಲಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ, ಹೀಗೆ ಹೆಸರು ಬದಲಿಸುವುದನ್ನೂ ಒಂದು ಯೋಜನೆ ಎಂಬಂತೆ ಮಾಡಲಾಗುತ್ತಿದೆ. ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಗೆ ಸ್ವಾಗತ ಮತ್ತು ವಿರೋಧ ಎರಡೂ ವ್ಯಕ್ತವಾಗಿವೆ. ಈ ಮರುನಾಮಕರಣವು ಮೈಸೂರು ಸಂಸ್ಥಾನದ ಇತಿಹಾಸ ಮತ್ತು ಸಂಸ್ಕೃತಿಗೆ ಮಾಡುತ್ತಿರುವ ಅವಮಾನ ಎಂಬ ಆಕ್ಷೇಪವೂ ಕೇಳಿಬಂದಿದೆ.

ಕೇಂದ್ರ ಸರ್ಕಾರದ ಈ ಸ್ವರೂಪದ ಮರುನಾಮಕರಣ ಯತ್ನವು, ಭಾರತದಲ್ಲಿ ಮುಸ್ಲಿಮರ ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಮಾಚುವ ಕಾರ್ಯಸೂಚಿಯೇ ಆಗಿದೆ ಎಂಬ ಆರೋಪ ಇದೆ. ಕೇಂದ್ರದ ಬಿಜೆಪಿ ಸರ್ಕಾರ ಮಾಡಿರುವ ಮರುನಾಮಕರಣಗಳೂ ಈ ಆರೋಪವನ್ನು ಪುಷ್ಟೀಕರಿಸುತ್ತವೆ. ದೇಶದಲ್ಲಿ ಮುಸ್ಲಿಮರ ಆಡಳಿತವನ್ನು ಸೂಚಿಸುವ, ಅವರ ಸಂಸ್ಕೃತಿಯ ಪ್ರತೀಕವಾಗಿದ್ದ ನಗರ, ರೈಲು ನಿಲ್ದಾಣ ಮತ್ತು ರೈಲುಗಳನ್ನೇ ಮರುನಾಮಕರಣಕ್ಕೆ ಬಿಜೆಪಿ ಸರ್ಕಾರಗಳು ಆಯ್ಕೆ ಮಾಡಿಕೊಂಡಿವೆ.

ಟಿಪ್ಪು ಎಕ್ಸ್‌ಪ್ರೆಸ್‌ಗೆ ಮೈಸೂರು ಕರ್ನಾಟಕ ಭಾಗದ ಜನರೊಂದಿಗೆ ಒಂದು ಸಾಂಸ್ಕೃತಿಕ ಸಂಬಂಧವಿದೆ. 1980ರ ಏಪ್ರಿಲ್‌ 15ರಂದು ಆರಂಭವಾಗಿದ್ದ ಈ ರೈಲು, ಎರಡೂ ನಗರಗಳ ನಡುವಣ 139 ಕಿ.ಮೀ. ಅಂತರವನ್ನು 3.30 ಗಂಟೆಯಲ್ಲಿ ಕ್ರಮಿಸುತ್ತಿತ್ತು. ನಂತರದ ವರ್ಷಗಳಲ್ಲಿ ಈ ಸೂಪರ್‌ಫಾಸ್ಟ್‌ ರೈಲಿನ ವೇಗವನ್ನು ಹೆಚ್ಚಿಸಲಾಗಿತ್ತು. ಈಗ ಅದೇ ಅಂತರವನ್ನು 2.30 ಗಂಟೆಯಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ ಕ್ರಮಿಸುತ್ತದೆ. ಈ ನಗರಗಳ ಸಾವಿರಾರು ಜನರು ಕೆಲಸ ಕಾರ್ಯದ ನಿಮಿತ್ತ, ಪ್ರತಿದಿನ ಓಡಾಟಕ್ಕೆ ಈ ರೈಲನ್ನೇ ನೆಚ್ಚಿಕೊಂಡಿದ್ದಾರೆ. ಆಗಾಗ್ಗೆ ರೈಲಿನ ವೇಳಾಪಟ್ಟಿಯಲ್ಲಿ ಸ್ವಲ್ಪ ಏರುಪೇರಾದರೂ, ಈ ರೈಲನ್ನು ಈ ಭಾಗದ ಜನರು ನೆಚ್ಚಿಕೊಂಡಿದ್ದಾರೆ.

ಈ ರೈಲಿಗೆ ಒಡೆಯರ್ ಹೆಸರಿಟ್ಟಿರುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಮೈಸೂರು ಸಂಸ್ಥಾನ ಮತ್ತು ಒಡೆಯರ್ ಮನೆತನದೊಂದಿಗೆ ಈ ಭಾಗದ ಜನರಿಗೆ ಅಷ್ಟೇ ಪ್ರೀತಿ ಇದೆ. ಆದರೆ, ಟಿಪ್ಪು ಹೆಸರು ತೆಗೆದುಹಾಕಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬ್ರಿಟಿಷರು ಮತ್ತು ಟಿಪ್ಪು ಮಧ್ಯೆ ನಡೆದ ಆಂಗ್ಲೊ–ಮೈಸೂರು ಯುದ್ಧಗಳು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹತ್ವದ ಘಟ್ಟಗಳಾಗಿ ದಾಖಲಾಗಿವೆ. ಇವಷ್ಟೇ ಅಲ್ಲದೆ, ರಾಜ್ಯದ ಸಂಸ್ಕೃತಿಯ ಭಾಗವಾಗಿಯೂ ಟಿಪ್ಪು ಜನಜನಿತನಾಗಿದ್ದಾನೆ. ಶ್ರೀರಂಗಪಟ್ಟಣ, ಶೃಂಗೇರಿಯಲ್ಲಿ ಸಲಾಂ ಆರತಿ, ಬೆಂಗಳೂರಿನ ಬೇಸಿಗೆ ಅರಮನೆ, ನಂದಿದುರ್ಗದ ಟಿಪ್ಪು ಡ್ರಾಪ್‌ ಇವೆಲ್ಲವೂ ಟಿಪ್ಪು ಆಡಳಿತ ಮಾತ್ರವಲ್ಲ, ಮೈಸೂರು ಸಂಸ್ಥಾನದ ಸಂಸ್ಕೃತಿಯ ಭಾಗವಾಗಿವೆ ಎಂದು ನೆಟ್ಟಿಗರು ನೆನಪು ಮಾಡುತ್ತಿದ್ದಾರೆ. ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಯು, ಈ ಸಂಸ್ಕೃತಿಯನ್ನು ಮರೆಮಾಚುವ ಯತ್ನ ಎಂದು ಆರೋಪಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮರುನಾಮಕರಣ ಕ್ರಮ ಆರಂಭವಾಯಿತು. ಅದು ಈಗ ಬಿಜೆಪಿ ಸರ್ಕಾರ ಇರುವ ಬಹುತೇಕ ರಾಜ್ಯಗಳಿಗೆ ಹರಡಿದೆ. ಮರುನಾಮಕರಣಕ್ಕೆ ಗುರಿ ಮಾಡಿಕೊಂಡಿರುವ ಹೆಸರುಗಳ ದೊಡ್ಡ ಪಟ್ಟಿಯೇ ಕೇಂದ್ರ ಸರ್ಕಾರದ ಮುಂದೆ ಇದೆ. ಅವೆಲ್ಲವೂ ಮುಸ್ಲಿಂ ಸಂಸ್ಕೃತಿಯನ್ನು ಪ್ರತಿನಿಧಿಸುವ ಉರ್ದು ಮತ್ತು ಅರೇಬಿಕ್‌ ಹೆಸರುಗಳೇ ಆಗಿವೆ ಎಂಬುದು ಗಮನಾರ್ಹ.

ಫೈಜಾಬಾದ್‌

ಭಾರತದ ಸಂಸ್ಕೃತಿ ಮತ್ತು ರಾಜಕಾರಣದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ಬಾಬರಿ ಮಸೀದಿ ಮತ್ತು ರಾಮಮಂದಿರ ಇದ್ದದ್ದು ಇದೇ ಫೈಜಾಬಾದ್‌ನಲ್ಲಿ. ಮೂಲ ಫೈಜಾಬಾದ್‌ ಅಯೋಧ್ಯೆಯಿಂದ 6 ಕಿ.ಮೀ. ದೂರದಲ್ಲಿದೆ. ಪುರಾಣ ಕಾಲದಲ್ಲಿ ಇಲ್ಲಿ ಸಾಕೇತ್ ಎಂಬ ನಗರವಿತ್ತು ಎಂದು ಹೇಳಲಾಗುತ್ತದೆ. ಆದರೆ, ಅವಧ್‌ನ ನವಾಬ ಸಾದತ್ ಅಲಿ ಖಾನ್‌ 1730ರಲ್ಲಿ ಫೈಜಾಬಾದ್‌ ನಗರವನ್ನು ಸ್ಥಾಪಿಸಿದ. ಅಂದು ಅದು ಅವಧ್‌ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ನಂತರದ ದಿನಗಳಲ್ಲಿ ರಾಜಧಾನಿಯನ್ನು ಲಖನೌಗೆ ಬದಲಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.ಈ ನಗರದ ಹೆಸರನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರವು ‘ಅಯೋಧ್ಯೆ’ ಎಂದು ಬದಲಿಸಿತು.

ಮುಘಲ್‌ಸರಾಯ್ ಜಂಕ್ಷನ್‌...

ದೇಶದ ಅತ್ಯಂತ ದಟ್ಟಣೆಯ ರೈಲು ಜಂಕ್ಷನ್‌ಗಳಲ್ಲಿ ಒಂದಾಗಿದ್ದ ‘ಮುಘಲ್‌ಸರಾಯ್ ಜಂಕ್ಷನ್‌’ನ ಹೆಸರನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು 2018ರಲ್ಲಿ ‘ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್‌’ ಎಂದು ಬದಲಾಯಿಸಿತು. 10ನೇ ಶತಮಾನದಿಂದಲೂ ಮಧ್ಯಪ್ರಾಚ್ಯ ಮತ್ತು ಐರೋಪ್ಯ ದೇಶಗಳೊಟ್ಟಿಗೆ ಭಾರತಕ್ಕೆ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದ ‘ಗ್ರ್ಯಾಂಡ್‌ ಟ್ರಂಕ್‌ ರೂಟ್‌’ ಮುಘಲ್‌ಸರಾಯ್ ಅನ್ನು ಹಾದುಹೋಗುತ್ತಿತ್ತು. ಭಾರತದಲ್ಲಿ ಮೊಘಲರ ಆಳ್ವಿಕೆ ಮತ್ತು ಮೊಘಲ್ ಸಂಸ್ಕೃತಿ, ಮೊಘಲ್‌ ಮತ್ತು ಹಿಂದೂ ಸಂಸ್ಕೃತಿಯ ಐಕ್ಯತೆಗೆ ಮುಘಲ್‌ಸರಾಯ್ ಹೆಸರಾಗಿತ್ತು.ಈ ಜಂಕ್ಷನ್‌ನಲ್ಲಿ ಇಳಿಯುವ ಪ್ರವಾಸಿಗರು ಇಲ್ಲಿನ ಖ್ಯಾತ ಕಾಳಿ ಮಾತಾ ಮಂದಿರ, ಗೌರಿ ಮಾತಾ ಮಂದಿರ ಮತ್ತು ಐತಿಹಾಸಿಕ ಜಾಮಾ ಮಸೀದಿಗೆ ಭೇಟಿ ನೀಡುತ್ತಾರೆ. ಮುಘಲ್‌ಸರಾಯ್‌ನ ಅವಧ್ ಸಂಸ್ಕೃತಿಯ ಖಾದ್ಯಗಳು, ಮೊಘಲ್‌ ಸಂಸ್ಕೃತಿಯ ಖಾದ್ಯಗಳು ಮತ್ತು ಪರ್ಷಿಯನ್‌ ಖಾದ್ಯಗಳು ಅತ್ಯಂತ ಜನಪ್ರಿಯವಾಗಿವೆ. ಈ ಎಲ್ಲಾ ಖಾದ್ಯಗಳನ್ನು ಬೆರೆಸಿದ ಫ್ಯೂಶನ್‌ ಖಾದ್ಯಗಳೂ ಅಲ್ಲಿ ಹೆಸರಾಗಿವೆ. ಇಲ್ಲಿ ಲಭ್ಯವಿದ್ದ ಖಾದ್ಯಗಳು ಮುಘಲ್‌ಸರಾಯ್ ಕ್ಯುಸೀನ್‌ ಎಂದೇ ಹೆಸರಾಗಿವೆ. ಅಂತಹ ಹೆಸರನ್ನು ಬಿಜೆಪಿ ಸರ್ಕಾರ ಬದಲಿಸಿದೆ.

ಪ್ರಯಾಗರಾಜ್‌

ಅಲಹಾಬಾದ್‌ನ ಹೆಸರನ್ನು ಉತ್ತರ ಪ್ರದೇಶ ಸರ್ಕಾರವು ‘ಪ್ರಯಾಗರಾಜ್‌’ ಎಂದು ಬದಲಿಸಿದೆ. ಈ ನಗರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಮುಸ್ಲಿಮರು, ಜೈನರು, ಬೌದ್ಧರು ಮತ್ತು ಕ್ರೈಸ್ತ ಧರ್ಮೀಯರೂ ನೆಲೆಸಿದ್ದಾರೆ.

‘ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಸ್ಥಳದಲ್ಲಿ ಮೊದಲು ವಸತಿಯನ್ನು ಸ್ಥಾಪಿಸಿದ್ದು ಆರ್ಯನ್ನರು’ ಎಂದು ಪ್ರಯಾಗರಾಜ್‌ ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ವಿವರಿಸಲಾಗಿದೆ. ಆದರೆ, ಇಲ್ಲಿ ಒಂದು ವ್ಯವಸ್ಥಿತ ನಗರವೊಂದನ್ನು ಸ್ಥಾಪಿಸಿದ್ದು ಮೊಘಲ್‌ ದೊರೆ ಅಕ್ಬರ್‌ ಎನ್ನುತ್ತದೆ ಇದೇ ಜಾಲತಾಣ. ಸರ್ಕಾರವೇ ಹೇಳುತ್ತಿರುವಂತೆ, ಈ ನಗರವನ್ನು 1575ರಲ್ಲಿ ಅಕ್ಬರ್ ಸ್ಥಾಪಿಸಿದ. ಅಕ್ಬರನೇ ಈ ನಗರಕ್ಕೆ ಇಲಾಹಾಬಾದ್‌ ಎಂದು ನಾಮಕರಣ ಮಾಡಿದ್ದ, ಕಾಲಾನಂತರದಲ್ಲಿ ಅದು ಅಲಹಾಬಾದ್‌ ಎಂದು ಬದಲಾಯಿತು.

ಈ ನಗರದ ಹೆಸರನ್ನು ಪ್ರಯಾಗರಾಜ್‌ ಎಂದು ಬದಲಿಸಿದ್ದರ ಹಿಂದೆ, ಅಕ್ಬರನ ಇತಿಹಾಸವನ್ನು ಅಳಿಸುವ ಹುನ್ನಾರವಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

‘ಮೀರಠ್‌ಗೆ ಗೋಡ್ಸೆ ಹೆಸರಿಡಿ’

ಸುಲ್ತಾನ್‌ಪುರಕ್ಕೆ ಶ್ರೀರಾಮನ ಮಗ ಕುಶನ ಹೆಸರಿಟ್ಟು ‘ಕುಶ್ ಭವನಪುರ’ ಎಂಬುದಾಗಿ ಬದಲಾವಣೆ ಮಾಡಬೇಕು ಎಂಬ ಆಗ್ರಹವಿದೆ. ಅಲಿಗಡವನ್ನು ಹರಿಗಢ, ಮೈನ್‌ಪುರಿಯನ್ನು ಮಾಯನ್ ನಗರ, ಫಿರೋಜಾಬಾದ್‌ ಅನ್ನು ಚಂದ್ರನಗರ, ಮಿರ್ಜಾಪುರವನ್ನು ವಿಂಧ್ಯಧಾಮ, ಗಾಜಿಯಾಬಾದ್ ಅನ್ನು ದಿಗ್ವಿಜಯ ನಗರ, ಹಾಪುರವನ್ನು ಅವೈದ್ಯನಾಥ ನಗರ ಎಂದು ಬದಲಿಸುವ ಬೇಡಿಕೆಗಳಿವೆ.ಅಚ್ಚರಿಯೆಂದರೆ, ಮೀರಠ್ ನಗರಕ್ಕೆ ಪಂಡಿತ್ ನಾಥೂರಾಮ್ ಗೋಡ್ಸೆ ಹೆಸರು ಇರಿಸಬೇಕು ಎಂಬ ಬೇಡಿಕೆಯೂ ಇದೆ. 2018ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಈ ಪ್ರಸ್ತಾವವನ್ನು ಸಲ್ಲಿಸಿದ್ದ ಬಗ್ಗೆ ವರದಿಯಾಗಿತ್ತು.

ಬಲಪಂಥೀಯರ ಹೆಸರು

ದೊಡ್ಡ ನಗರಗಳಷ್ಟೇ ಅಲ್ಲದೆ, ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ಉದ್ಯಾನಗಳಿಗೂ ಮರುನಾಮಕರಣ ಮಾಡುವ ಯತ್ನ ನಡೆಯುತ್ತಿದೆ. ಬಲಪಂಥೀಯ ವಿಚಾರಧಾರೆಗಳನ್ನು ಹೊಂದಿರುವ ವ್ಯಕ್ತಿಗಳ ಹೆಸರನ್ನು ಇರಿಸುವ ಪ್ರಸ್ತಾವಕ್ಕೆ ಲಖನೌ ಮಹಾನಗರ ಪಾಲಿಕೆ ಕಾರ್ಯಕಾರಿ ಸಮಿತಿಯು ಇತ್ತೀಚೆಗೆ ಒಪ್ಪಿಗೆ ನೀಡಿದೆ.

ಲಖನೌದ ಬರ್ಲಿಂಗ್ಟನ್ ಕ್ರಾಸಿಂಗ್‌ಗೆವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಹೆಸರು, ಸರ್ವೋದಯ ನಗರದ ದ್ವಾರಕ್ಕೆ ಸಾವರ್ಕರ್ ಹೆಸರು, ನಿರ್ಮಲ ನಗರದ ತಿಕೋನ ಉದ್ಯಾನಕ್ಕೆ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಹೆಸರು ಪ್ರಸ್ತಾಪವಾಗಿದ್ದವು. ಈ ಪ್ರಸ್ತಾವಗಳಿಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳೆದ ತಿಂಗಳು ಒಪ್ಪಿಗೆ ನೀಡಲಾಗಿದೆ.

ಮುಗಿಯದ ಪಟ್ಟಿ

ಪ್ರಮುಖ ಮೆಟ್ರೊಪಾಲಿಟನ್ ನಗರ ಹೈದರಾಬಾದ್‌ ಹೆಸರನ್ನು ‘ಭಾಗ್ಯನಗರ’ ಎಂಬುದಾಗಿ ಬದಲಿಸಲು ಬಿಜೆಪಿ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮೊದಲಾದವರು ಹೈದರಾಬಾದ್‌ ಹೆಸರು ಬದಲಿಸುವ ಕುರಿತು ಸ್ಪಷ್ಟ ಧ್ವನಿಯಲ್ಲಿ ಮಾತನಾಡಿದ್ದಾರೆ. ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಹೆಸರು ಬದಲಾವಣೆ ಮಾಡುವುದಾಗಿ ಇವರು ಹೇಳಿದ್ದಾರೆ.

ಗುಜರಾತ್‌ ರಾಜಧಾನಿ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಅಹಮದಾಬಾದ್ ಅನ್ನು ‘ಕರ್ಣಾವತಿ’ ಎಂಬುದಾಗಿ ಬದಲಿಸಬೇಕು ಎಂಬ ಕೂಗು ಆಗಾಗ್ಗೆ ಕೇಳಿಬಂದಿದೆ. ‘ಶಿವಸೇನಾ ಸರ್ಕಾರವು ಔರಂಗಾಬಾದ್ ಹಾಗೂ ಉಸ್ಮಾನಾಬಾದ್‌ ಹೆಸರುಗಳನ್ನು ಬದಲಿಸುವ ಧೈರ್ಯ ತೋರಿದೆ. ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಅಹಮದಾಬಾದ್ ಹೆಸರು ಬದಲಿಸಲು ಬಿಜೆಪಿಯಿಂದ ಸಾಧ್ಯವೇ’ ಎಂದು ಶಿವಸೇನಾ ಇತ್ತೀಚೆಗೆ ಸವಾಲು ಹಾಕಿತ್ತು. ‘ನಮಗೆ ಕರ್ಣಾವತಿ ಬೇಕು’ ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಟ್ವಿಟರ್‌ನಲ್ಲಿ ಇತ್ತೀಚೆಗೆ ಭಾರಿ ಚರ್ಚೆ ನಡೆದಿತ್ತು.

ಅಧಿಕಾರಕ್ಕೆ ಬಂದ ಆರಂಭದಲ್ಲಿ, ಅಲಹಾಬಾದ್ ಹಾಗೂ ಫೈಜಾಬಾದ್‌ ಹೆಸರುಗಳನ್ನು ಬದಲಿಸಿದ್ದ ಯೋಗಿ ಸರ್ಕಾರದ ಮರುನಾಮಕರಣ ಪಟ್ಟಿಯಲ್ಲಿ ಈಗ ಹತ್ತಾರು ನಗರಗಳು ಇವೆ. ರಾಜಧಾನಿ ಲಖನೌ ಅನ್ನು ‘ಲಕ್ಷ್ಮಣಪುರಿ’ ಎಂಬ ಹೆಸರಿನಿಂದ ಕರೆಯಬೇಕೆಂಬ ಒತ್ತಡವಿದ್ದರೂ, ಈ ಬಗ್ಗೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಜೆಪಿ ಸರ್ಕಾರವು ಇಲ್ಲಿ ಬೃಹತ್ ಲಕ್ಷ್ಮಣ ದೇವಸ್ಥಾನವನ್ನು ನಿರ್ಮಿಸುತ್ತಿರುವುದು ಉಲ್ಲೇಖಾರ್ಹ.

ವಿಶ್ವವಿಖ್ಯಾತ ತಾಜ್‌ಮಹಲ್ ಇರುವ ಆಗ್ರಾದ ಹೆಸರನ್ನು ಆಗ್ರಾವನ ಎಂಬುದಾಗಿ ಬದಲಿಸುವಂತೆ ಒತ್ತಡವಿದೆ. ಅದರ ಜತೆ ಮುಜಫ್ಫರ್‌ನಗರದ ಹೆಸರನ್ನು ಲಕ್ಷ್ಮಿ ನಗರ ಎಂದು ಕರೆಯಬೇಕು ಎಂಬ ಪ್ರಸ್ತಾವವೂ ರಾಜ್ಯ ಸರ್ಕಾರದ ಮುಂದಿದೆ.

ಅಲಿಗಡ, ಅಜಂಗಡ, ಷಾಜಹಾನ್‌ಪುರ, ಗಾಜಿಯಾಬಾದ್, ಫಿರೋಜಾಬಾದ್, ಫಾರೂಕಾಬಾದ್, ಮಿರ್ಜಾಪುರ, ಸುಲ್ತಾನ್‌ಪುರ, ಮೈನ್‌ಪುರಿ, ಮೊರಾದಾಬಾದ್ ಸೇರಿದಂತೆ ರಾಜ್ಯದ ಹಲವು ನಗರಗಳು ಮುಂದಿನ ದಿನಗಳಲ್ಲಿ ಮರು ನಾಮಕರಣ ಕಾಣಲಿವೆ ಎಂದು ಮೂಲಗಳು ಹೇಳುತ್ತವೆ.ಸುಲ್ತಾನ್‌ಪುರ, ಮಿರ್ಜಾಪುರ, ಅಲಿಗಡ, ಫಿರೋಜಾಬಾದ್ ಹಾಗೂ ಮೈನ್‌ಪುರಿ ಹೆಸರು ಬದಲಿಸುವಂತೆ ಯೋಗಿ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಸ್ತಾಪವಿತ್ತು. ಆದರೆ, ಪ್ರಯಾಗರಾಜ್ ಹಾಗೂ ಅಯೋಧ್ಯೆ ಹೆಸರುಗಳು
ಮಾತ್ರ ಬದಲಾಗಿದ್ದವು.

ಆಧಾರ: ಪಿಟಿಐ, ಪಿಐಬಿ ಪತ್ರಿಕಾ ಪ್ರಕಟಣೆಗಳು, ಟ್ವೀಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT