ಲೋಕಾಪುರ: ‘ಬಡತನ, ಕಷ್ಟದ ಜೀವನ ಮೆಟ್ಟಿ, ತಾನು ಕಷ್ಟ ಪಟ್ಟು ಶ್ರಮವಹಿಸಿ ಸಂಪಾದಿಸಿದ ಹಣದಲ್ಲಿ ಕೆಲವು ಪಾಲನ್ನು ಸಮಾಜ ಸೇವೆಗೆ ಮೀಸಲಿಟ್ಟು, 5 ರೂಪಾಯಿಗೆ ಉಪಾಹಾರ ನೀಡುವ ಸತೀಶ ಬಂಡಿವಡ್ಡರ ಫೌಂಡೇಷನ್ ಕಾರ್ಯ ಶ್ಲಾಘನೀಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಲೋಕಾಪುರದಲ್ಲಿ ನೂತನವಾಗಿ ಜನಸ್ನೇಹಿ ಸಿದ್ದರಾಮಯ್ಯ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಎಲ್ಲರಿಗೂ ಊಟ, ತಿಂಡಿ ಸಿಗಬೇಕು. ಯಾರೂ ಉಪವಾಸದಿಂದ ಮಲಗಬಾರದು. ಯಾವುದೇ ಬಡ ವ್ಯಕ್ತಿ ಹಸಿದ ಹೊಟ್ಟೆಯಲ್ಲಿ ಇರಬಾರದೆಂಬ ಕಾರಣಕ್ಕೆ ಸಿದ್ದರಾಮಯ್ಯ ಕ್ಯಾಂಟೀನ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಲಾಗಿದೆ’ ಎಂದರು.
ನಂತರ ಮಹದಾಯಿ ಯೋಜನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಹಾದಾಯಿ ವಿವಾದವು ಪ್ರಾಮಾಣಿಕವಾಗಿ ಬಗೆಹರಿಯಬೇಕಿದೆ. ಈ ವಿವಾದಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಮಹದಾಯಿ ನದಿ ವಿವಾದ ಶೀಘ್ರ ಇತ್ಯರ್ಥವಾಗಲಿದೆ’ ಎಂದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟರೆ ಸಿದ್ದರಾಮಯ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕ ಮಾಡಲು ಹೊರಟಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸತೀಶ ಬಂಡಿವಡ್ಡರ, ದಯಾನಂದ ಪಾಟೀಲ, ಎಚ್.ಎಲ್.ಪಾಟೀಲ, ಲೋಕಣ್ಣ ಕೊಪ್ಪದ, ತಮ್ಮಣ್ಣಪ್ಪ ಅರಳಿಕಟ್ಟಿ ಇದ್ದರು.