ತೇರದಾಳ: ‘ಲೋಕಸಭೆ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ಹಾಗೂ ಆಕರ್ಷಿಸಲು ಸ್ವೀಪ್ ಯೋಜನೆಯಡಿ ತೇರದಾಳ ಮತಕ್ಷೇತ್ರದಲ್ಲಿ 9 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುವುದು’ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.
ಪಟ್ಟಣದ ದೇವರಾಜ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯುವಕರಿಗಾಗಿ ತೆರೆಯಲಾದ ಯುವ ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಜಿಲ್ಲಾ ಪಂಚಾಯಿತಿ ಇಒ ಶಶಿಧರ ಕುರೇರ ಅವರ ಮಾರ್ಗದರ್ಶನದ ಮೇರೆಗೆ ತಾಲ್ಲೂಕಿನ ಹಲವು ಚಿತ್ರಕಲಾ ಶಿಕ್ಷಕರು ಮತಗಟ್ಟೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಯುವ ಮತಗಟ್ಟೆ ಸೇರಿದಂತೆ ಅಂಗವಿಕಲರ ಮತಗಟ್ಟೆ, ವೃದ್ಧರ ಮತಗಟ್ಟೆ, ಮಹಿಳಾ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆಗಳೆಂದು ಗುರುತಿಸಿ ಬಣ್ಣ ಬಳಿದು ಅಲಂಕರಿಸಲಾಗುತ್ತಿದೆ’ ಎಂದರು.
ಬಿಇಒ ಕಚೇರಿಯ ಸಿಬ್ಬಂದಿ ದಿಡ್ಡಿ, ಡಬ್ಲ್ಯು.ವೈ.ಭಜಂತ್ರಿ, ಶಾಲಾ ಮುಖ್ಯ ಶಿಕ್ಷಕಿ ಕೆ.ಜಿ.ಮುದಕನ್ನವರ, ಚಿತ್ರಕಲಾ ಶಿಕ್ಷಕರಾದ ರಮೇಶ ತಹಶೀಲ್ದಾರ್, ಚಂದ್ರಕಾಂತ ಪೊಲೀಸ್, ಯಶವಂತ ವಾಜಂತ್ರಿ ಇದ್ದರು.