ಬಾಗಲಕೋಟೆ: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕುಡಿಯುವ ನೀರು ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಎಂದು ದೂರವಾಣಿ ಕರೆ ಬಂದ 12 ಗಂಟೆಯೊಳಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೆ ಆಯಾ ತಾಲ್ಲೂಕಿನ ತಹಶೀಲ್ದಾರರು ಹೊಣೆಗಾರರಾಗಿದ್ದು, ಉಪವಿಭಾಗಾಧಿಕಾರಿ ಸಹಕಾರದೊಂದಿಗೆ ಸನ್ನಿವೇಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮುಧೋಳ ತಾಲ್ಲೂಕಿಗೆ ಘಟಪ್ರಭಾ ನದಿ ನೀರು ಬರದಿರುವುದಕ್ಕೆ ಕಾರಣ ತಿಳಿದುಕೊಂಡು, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಿರಿ ಎಂದರು.
ಮುಂದಿನ ಮೂರು ತಿಂಗಳು ಬರ ಪರಿಸ್ಥಿತಿ ಗಂಭೀರ ಆಗವುದೆಂದು ಅಂದಾಜಿಸಿರುವುದರಿಂದ ಜುಲೈವರೆಗೆ ಕುಡಿಯುವ ನೀರಿನ ನಿರ್ವಹಣೆ ಹೇಗೆ ನಿಬಾಯಿಸಲಾಗುತ್ತದೆ ಎಂಬ ಕ್ರಿಯಾ ಯೋಜನೆಯನ್ನು ಸೋಮವಾರದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಹಾಗೂ ಭೂ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ, ಸಮಸ್ಯಾತ್ಮಕ ಪ್ರದೇಶಗಳಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಪರಿಶೀಲಿಸಿ, ಕೂಡಲೇ ವರದಿ ಸಲ್ಲಿಸಿರು. ವಸತಿ ನಿಲಯ, ಅಂಗನವಾಡಿ ಮತ್ತು ಶಾಲೆಗಳ ಆವರಣದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆಧ್ಯತೆಯ ಮೇರೆಗೆ ಪರಿಶೀಲಿಸಿ, ನೀರಿನ ಟ್ಯಾಂಕ್ ಸ್ವಚ್ಚವಾಗಿರುವ ಬಗ್ಗೆ ಗಮನ ಹರಿಸಬೇಕು ಎಂದರು.
ಬೇಸಿಗೆಯಾಗಿರುವುದರಿಂದ ವಾಂತಿ, ಭೇದಿ ಉಲ್ಬಣಿಸುವ ಸಂಭವವಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಬೇಜವಾಬ್ದಾರಿ ತೋರುವಂತಿಲ್ಲ ಎಂದು ಹೇಳಿದರು