ಬಾಗಲಕೋಟೆ: ಇಲ್ಲಿನ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಪ್ರತಿ ವರ್ಷ ನೀಡಲಾಗುವ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ತೆಲಂಗಾಣ ರಾಜ್ಯದ ರೈತರ ಹಕ್ಕುಗಳ ಹೋರಾಟಗಾರ ಪ್ರಕಾಶರಾವ್ ವೀರಮಲ್ಲ ಭಾಜನರಾಗಿದ್ದಾರೆ.
ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಯ ವಿವರ ನೀಡಿದರು. ಪ್ರಕಾಶರಾವ್ ಸದ್ಯ ತೆಲಂಗಾಣ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ. ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ತಾಮ್ರಫಲಕ ಒಳಗೊಂಡಿದೆ.
ಕೂಡಲಸಂಗಮದಬಸವ ಸಭಾಭವನದಲ್ಲಿ ಜನವರಿ 14ರಂದು ನಡೆಯುವ ಕೃಷಿ ಸಂಕ್ರಾಂತಿ ಹಾಗೂ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಕುರಿತು ನಾಡಿನ ರೈತರೊಂದಿಗೆ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.