ಬಾಗಲಕೋಟೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಅಂಗೀಕರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿಯ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪರಿಶಿಷ್ಟರ ಶೇ 15ರಷ್ಟು ಮೀಸಲಾತಿ ಸೌಲಭ್ಯಗಳನ್ನು 101 ಉಪಜಾತಿಗಳಿಗೂ ಸಮಾನವಾಗಿ ಹಂಚಿ ಸಬಲೀಕರಣ ಮಾಡುವ ಸಂವಿಧಾನದ ಆಶಯ ಮರೀಚಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಾತಿವಾದಿಗಳು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದಂತೆ ಷಡ್ಯಂತ್ರ ನಡೆಸಿದ್ದಾರೆ. ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಮೀಸಲಾತಿಯ ಲಾಭ ಅರ್ಹರಿಗೆ ದಕ್ಕದೇ ಅನ್ಯರ ಪಾಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ವರದಿಯನ್ನು ವಿರೋಧಿಸುವ ರಾಜಕಾರಣಿಗಳಿಗೂ ತುಳಿತಕ್ಕೊಳಗಾದವರ ಹಿತ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾದಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಗಮಪ್ಪ ಮಾದರ, ರಾಜ್ಯ ಉಪಾಧ್ಯಕ್ಷ ಹಣಮಂತ ಮಾದರ, ಮಾದಿಗ ಮಹಾಸಭಾ ಸಮನ್ವಯ ಸಮಿತಿ ಅಧ್ಯಕ್ಷ ಮುತ್ತಣ್ಣ ಬೆನ್ನೂರ, ಮುಖಂಡರಾ ಅರ್ಜುನ ಸರವಿ, ಅಶೋಕ ಮೇತ್ರಿ, ಮಾರುತಿ ಭಿ.ಗಸ್ತಿ, ಆನಂದ ಸ.ದೊಡಮನಿ, ಅರ್ಜುನ ದೊಡಮನಿ, ಭೀಮಶಿ ಗೌಂಡಿ ಪಾಲ್ಗೊಂಡಿದ್ದರು.