ಲೋಕಾಪುರ: ಇಲ್ಲಿನ 6ನೇ ವಾರ್ಡ್ನಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.
ಚರಂಡಿಗಳು ಕಟ್ಟಿಕೊಂಡಿದ್ದು, ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಲ್ಲ. ಕೆಲವು ಕಡೆಗಳಲ್ಲಿ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ವಾಸನೆ ಬಡಿಯುತ್ತಿದೆ. ಮತ್ತೂ ಕೆಲವುಕ ಕಡೆಗಳಲ್ಲಿ ಚರಂಡಿಗಳೇ ಇಲ್ಲ. ಯಾವುದೇ ಮೂಲ ಸೌಲಭ್ಯ ಇಲ್ಲವಾಗಿದೆ ಎಂದು ಜನರು ದೂರಿದ್ದಾರೆ.
ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಲೇರಿಯಾ, ಚಿಕೂನ್ ಗುನ್ಯ, ಡೆಂಗಿ ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಮಳೆಗಾಲದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ರಸ್ತೆಗಳು ಸಹ ಸಮರ್ಪಕವಾಗಿಲ್ಲ. ಸುತ್ತಮುತ್ತಲೂ ಗಿಡ ಗಂಟೆ ಬೆಳೆದಿರುವುದರಿಂದ ಮಕ್ಕಳನ್ನು ಸಹ ಹೊರಗೆ ಬಿಡಲು ಇಲ್ಲಿನ ಪಾಲಕರು ಹೆದರುವಂತಾಗಿದೆ.
ಒಳಚರಂಡಿ ನಿರ್ಮಾಣ ಮಾಡಬೇಕು. ಸಿ.ಸಿ.ರಸ್ತೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳುತ್ತಾರೆ.
ಸಿ.ಸಿ.ರಸ್ತೆ ಮಾಡಲು ಒಪ್ಪಿಗೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್.ಕೆ.ಮಹೇದ್ರಕರ ’ಪ್ರಜಾವಾಣಿ’ಗೆ ತಿಳಿಸಿದರು.