ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಧನ್ನೂರು ಬಳಿ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ಗುರುವಾರ ಬೋಟ್ ಮುಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹರನಾಳ ಗ್ರಾಮದ ಶರಣಪ್ಪ, ಯಮನಪ್ಪ ಹಾಗೂ ಬೋಟ್ ಚಲಾಯಿಸುತ್ತಿದ್ದ ಕೂಡಲಸಂಗಮ ಗ್ರಾಮದ ಪರಸಪ್ಪ ಮೃತಪಟ್ಟವರು.
ಎರಡು ದಿನಗಳ ಹಿಂದೆ ಹರನಾಳದ ವೃದ್ಧ ಶಿವಪ್ಪ ಎಂಬುವವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಹುಡುಕಲು ಮೂವರು ಬೋಟ್ ನಲ್ಲಿ ತೆರಳಿದ್ದು, ನದಿಯಲ್ಲಿ ಕಳೆ ಬಳ್ಳಿಗಳ ನಡುವೆ ಸಿಲುಕಿದ ಬೋಟ್ ಮುಗುಚಿದ್ದು, ಈ ವೇಳೆ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳ ಹುಡುಕಾಟ ನಡೆಸಿದ್ದು, ನದಿ ದಂಡೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.