ಬಾಗಲಕೋಟೆ: ಮುಧೋಳ ತಾಲ್ಲೂಕಿನ ಕುಳಲಿ ಬಳಿ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು ಇಬ್ಬರು ನೀರು ಪಾಲಾಗಿದ್ದಾರೆ.
ಗ್ರಾಮದ ಸಮೀಪದ ಘಟಪ್ರಭಾ ಎಡದಂಡೆ ಕಾಲುವೆಗೆ ತಡರಾತ್ರಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ.
ಭಾನುವಾರ ರಾತ್ರಿ ಕೆಲಸಕ್ಕೆಂದು ಹೊಲಕ್ಕೆ ಹೋಗಿ ವಾಪಸ್ ಬರುವಾಗ ಕತ್ತಲಲ್ಲಿ ದಿಢೀರನೆ ಆಕಳು ಎದುರಿಗೆ ಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅವಘಡ ನಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಆಕಳು ಕೂಡ ನೀರುಪಾಲಾಗಿದೆ.
ಗ್ರಾಮದ ಶಿವರುದ್ರಪ್ಪ ಪೋಳ್ (55) ಪೈಗಂಬರ್ ಲಾಡಖಾನ್ (25) ಸಾವಿಗೀಡಾದವರು.
ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಶಂಕ್ರಪ್ಪ ಗೌಡರ ಈಜಿ ಹೊರಗೆ ಬಂದು ಬದುಕುಳಿದಿದ್ದಾರೆ.
ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.