ಬಳ್ಳಾರಿ: ಬಳ್ಳಾರಿ ಮೇಯರ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಪರಿಣಾಮವಾಗಿ ಕೊನೆ ಕ್ಷಣದಲ್ಲಿ ಮುಂದೂಡಲಾಯಿತು. ಕೈ ಪಾಳೆಯದ ಒಡಕಿನ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿಗೆ ಇದರಿಂದ ಹಿನ್ನಡೆಯಾಯಿತು. ಹೆಚ್ಚು ಸ್ಥಾನ ಪಡೆದು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೂ ಮುಜುಗರದಿಂದ ಪಾರಾಯಿತು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಬೆಳಿಗ್ಗೆ ಆರಂಭವಾದ ‘ರಾಜಕೀಯ ಹೈಡ್ರಾಮಾ’ ಮಧ್ಯಾಹ್ನದವರೆಗೂ ನಡೆಯಿತು. ಮೇಯರ್ ಚುನಾವಣೆಯನ್ನು ಅನಿವಾರ್ಯ ಕಾರಣದ ನೆಪವೊಡ್ಡಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಂದೂಡಲಾಯಿತು. ಇದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದರು.
ಬೆಳಿಗ್ಗೆ ಮೇಯರ್ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ 31ನೇ ವಾರ್ಡ್ ಸದಸ್ಯೆ ಬಿ.ಶ್ವೇತಾ, 35ನೇ ವಾರ್ಡ್ನ ಮಿಂಚು ಶ್ರೀನಿವಾಸ್ ಹಾಗೂ 38ನೇ ವಾರ್ಡ್ನ ಕುಬೇರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ 1ನೇ ವಾರ್ಡ್ ಸದಸ್ಯ ಗುಡಗಂಟಿ ಹನುಮಂತ ಕಣಕ್ಕಿಳಿದರು.
ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಶ್ವೇತಾ ಅವರನ್ನು ಬೆಂಬಲಿಸಿದ್ದರು. ಪಕ್ಷೇತರವಾಗಿ ಗೆದ್ದು, ಕಾಂಗ್ರೆಸ್ ಸದಸ್ಯರಾಗಿ ಸೇರ್ಪಡೆಯಾಗಿರುವ ಮಿಂಚು ಶ್ರೀನಿವಾಸ್ ಅವರನ್ನು ಮೇಯರ್ ಮಾಡಬೇಕೆಂದು ಶಾಸಕ ಭರತ್ ರೆಡ್ಡಿ ಪಣ ತೊಟ್ಟಿದ್ದರು. ಸಚಿವ ನಾಗೇಂದ್ರ ಅವರ ಕೈ ಮೇಲಾಗದಂತೆ ತಂತ್ರ ಹೆಣೆಯಲಾಯಿತು. ಒಂದು ಗುಂಪು ಬಿಜೆಪಿ ಜತೆ ರಹಸ್ಯ ಒಪ್ಪಂದವನ್ನೂ ಮಾಡಿಕೊಂಡಿತು. ಇದರ ಸುಳಿವು ಸಿಗುತ್ತಿದ್ದಂತೆ ಚುನಾವಣೆ ಮುಂದೂಡಲಾಯಿತು.
ಚುನಾವಣಾ ಅಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಕಮಿಷನರ್ ನೀಡಿದ್ದ ನೋಟಿಸ್ ಪ್ರಕಾರ ಇಂದು ಚುನಾವಣೆ ಮುಗಿಯಬೇಕಿತ್ತು. ಬೆಳಿಗ್ಗೆ 10.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಚುನಾವಣೆ ನಡೆಯಬೇಕಿತ್ತು. ಮಧ್ಯಾಹ್ನ 1.30 ಕಳೆದರೂ ಚುನಾವಣಾಧಿಕಾರಿಯು ಪಾಲಿಕೆ ಕಡೆ ತಲೆ ಹಾಕದಿದ್ದರಿಂದ ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ಬಳಿಕ ಚುನಾವಣೆ ಮುಂದೂಡಿದ ತೀರ್ಮಾನ ಹೊರಬಿತ್ತು.
ಪಾಲಿಕೆ ಸದಸ್ಯರು ಕುಳಿತಿದ್ದ ಸಭಾಂಗಣಕ್ಕೆ ಕೌನ್ಸಿಲ್ ಸೆಕ್ರೆಟರಿ ಬಂದು ಚುನಾವಣೆ ಮುಂದಕ್ಕೆ ಹೋಗಿರುವ ವಿಷಯ ತಿಳಿಸಿದರು. ಅಧಿಕಾರಿಗಳ ಧೋರಣೆಯನ್ನು ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ‘ಕಾಂಗ್ರೆಸ್ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಬಳಿಕ ಗಡಗಿ ಚನ್ನಪ್ಪ ವೃತ್ತದಲ್ಲಿ ಧರಣಿ ನಡೆಸಿದರು.
ಕಳೆದ ಮಾರ್ಚ್ 29ರಂದು ಮೇಯರ್ ಚುನಾವಣೆ ನಡೆದಾಗ ತ್ರೀವೇಣಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆರು ತಿಂಗಳು ಮಾತ್ರ ಅವರ ಅವಧಿ ಎಂದು ಷರತ್ತು ಹಾಕಲಾಗಿತ್ತು. ತ್ರಿವೇಣಿ ನವೆಂಬರ್ 4ರಂದು ರಾಜೀನಾಮೆ ನೀಡಿದರು. ಈಗ ನಾಲ್ಕು ತಿಂಗಳ ಅವಧಿಗೆ ಹೊಸ ಮೇಯರ್ ಆರಿಸಬೇಕಿತ್ತು.
ಬಳ್ಳಾರಿ ಪಾಲಿಕೆಯ ಒಟ್ಟು ಸದಸ್ಯರ ಬಲ 39. ಕಾಂಗ್ರೆಸ್ 21, ಬಿಜೆಪಿ 13, ಐವರು ಪಕ್ಷೇತರರು. ಐವರೂ ಪಕ್ಷೇತರರು ಕಾಂಗ್ರೆಸ್ನಲ್ಲಿ ಸೇರಿದ್ದಾರೆ.
ಮುಜುಗರ ತಪ್ಪಿಸಿಕೊಂಡ ಕಾಂಗ್ರೆಸ್ ಸಚಿವ ನಾಗೇಂದ್ರ ವರ್ಸಸ್ ಭರತ್ ರೆಡ್ಡಿ ಬಿಜೆಪಿ ಜತೆ ಕಾಂಗ್ರೆಸ್ನ ಒಂದು ಬಣ ರಹಸ್ಯ ಒಪ್ಪಂದ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.