ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮೇಯರ್‌ ಚುನಾವಣೆ ಕೊನೆ ಕ್ಷಣದಲ್ಲಿ ಮುಂದಕ್ಕೆ

Published 28 ನವೆಂಬರ್ 2023, 15:39 IST
Last Updated 28 ನವೆಂಬರ್ 2023, 15:39 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಮೇಯರ್‌ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷದಲ್ಲಿನ ಗುಂಪುಗಾರಿಕೆ ಪರಿಣಾಮವಾಗಿ ಕೊನೆ ಕ್ಷಣದಲ್ಲಿ ಮುಂದೂಡಲಾಯಿತು. ಕೈ ಪಾಳೆಯದ ಒಡಕಿನ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿಗೆ ಇದರಿಂದ ಹಿನ್ನಡೆಯಾಯಿತು. ಹೆಚ್ಚು ಸ್ಥಾನ ಪಡೆದು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷವೂ ಮುಜುಗರದಿಂದ ಪಾರಾಯಿತು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಬೆಳಿಗ್ಗೆ ಆರಂಭವಾದ ‘ರಾಜಕೀಯ ಹೈಡ್ರಾಮಾ’ ಮಧ್ಯಾಹ್ನದವರೆಗೂ ನಡೆಯಿತು. ಮೇಯರ್‌ ಚುನಾವಣೆಯನ್ನು ಅನಿವಾರ್ಯ ಕಾರಣದ ನೆಪವೊಡ್ಡಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಂದೂಡಲಾಯಿತು. ಇದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದರು.

ಬೆಳಿಗ್ಗೆ ಮೇಯರ್‌ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ 31ನೇ ವಾರ್ಡ್‌ ಸದಸ್ಯೆ ಬಿ.ಶ್ವೇತಾ, 35ನೇ ವಾರ್ಡ್‌ನ ಮಿಂಚು ಶ್ರೀನಿವಾಸ್‌ ಹಾಗೂ 38ನೇ ವಾರ್ಡ್‌ನ ಕುಬೇರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ 1ನೇ ವಾರ್ಡ್‌ ಸದಸ್ಯ ಗುಡಗಂಟಿ ಹನುಮಂತ ಕಣಕ್ಕಿಳಿದರು.

ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಶ್ವೇತಾ ಅವರನ್ನು ಬೆಂಬಲಿಸಿದ್ದರು. ಪಕ್ಷೇತರವಾಗಿ ಗೆದ್ದು, ಕಾಂಗ್ರೆಸ್‌ ಸದಸ್ಯರಾಗಿ ಸೇರ್ಪಡೆಯಾಗಿರುವ ಮಿಂಚು ಶ್ರೀನಿವಾಸ್‌ ಅವರನ್ನು ಮೇಯರ್‌ ಮಾಡಬೇಕೆಂದು ಶಾಸಕ ಭರತ್‌ ರೆಡ್ಡಿ ಪಣ ತೊಟ್ಟಿದ್ದರು. ಸಚಿವ ನಾಗೇಂದ್ರ ಅವರ ಕೈ ಮೇಲಾಗದಂತೆ ತಂತ್ರ ಹೆಣೆಯಲಾಯಿತು. ಒಂದು ಗುಂಪು ಬಿಜೆಪಿ ಜತೆ ರಹಸ್ಯ ಒಪ್ಪಂದವನ್ನೂ ಮಾಡಿಕೊಂಡಿತು. ಇದರ ಸುಳಿವು ಸಿಗುತ್ತಿದ್ದಂತೆ ಚುನಾವಣೆ ಮುಂದೂಡಲಾಯಿತು.

ಚುನಾವಣಾ ಅಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಕಮಿಷನರ್‌ ನೀಡಿದ್ದ ನೋಟಿಸ್‌ ಪ್ರಕಾರ ಇಂದು ಚುನಾವಣೆ ಮುಗಿಯಬೇಕಿತ್ತು. ಬೆಳಿಗ್ಗೆ 10.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಚುನಾವಣೆ ನಡೆಯಬೇಕಿತ್ತು. ಮಧ್ಯಾಹ್ನ 1.30 ಕಳೆದರೂ ಚುನಾವಣಾಧಿಕಾರಿಯು ಪಾಲಿಕೆ ಕಡೆ ತಲೆ ಹಾಕದಿದ್ದರಿಂದ ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ಬಳಿಕ ಚುನಾವಣೆ ಮುಂದೂಡಿದ ತೀರ್ಮಾನ ಹೊರಬಿತ್ತು.

ಪಾಲಿಕೆ ಸದಸ್ಯರು ಕುಳಿತಿದ್ದ ಸಭಾಂಗಣಕ್ಕೆ ಕೌನ್ಸಿಲ್‌ ಸೆಕ್ರೆಟರಿ ಬಂದು ಚುನಾವಣೆ ಮುಂದಕ್ಕೆ ಹೋಗಿರುವ ವಿಷಯ ತಿಳಿಸಿದರು. ಅಧಿಕಾರಿಗಳ ಧೋರಣೆಯನ್ನು ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ‘ಕಾಂಗ್ರೆಸ್‌ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಬಳಿಕ ಗಡಗಿ ಚನ್ನಪ್ಪ ವೃತ್ತದಲ್ಲಿ ಧರಣಿ ನಡೆಸಿದರು.

ಕಳೆದ ಮಾರ್ಚ್‌ 29ರಂದು ಮೇಯರ್‌ ಚುನಾವಣೆ ನಡೆದಾಗ ತ್ರೀವೇಣಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆರು ತಿಂಗಳು ಮಾತ್ರ ಅವರ ಅವಧಿ ಎಂದು ಷರತ್ತು ಹಾಕಲಾಗಿತ್ತು. ತ್ರಿವೇಣಿ ನವೆಂಬರ್‌ 4ರಂದು ರಾಜೀನಾಮೆ ನೀಡಿದರು. ಈಗ ನಾಲ್ಕು ತಿಂಗಳ ಅವಧಿಗೆ ಹೊಸ ಮೇಯರ್‌ ಆರಿಸಬೇಕಿತ್ತು.

ಬಳ್ಳಾರಿ ಪಾಲಿಕೆಯ ಒಟ್ಟು ಸದಸ್ಯರ ಬಲ 39. ಕಾಂಗ್ರೆಸ್‌ 21, ಬಿಜೆಪಿ 13, ಐವರು ಪಕ್ಷೇತರರು. ಐವರೂ ಪಕ್ಷೇತರರು ಕಾಂಗ್ರೆಸ್‌ನಲ್ಲಿ ಸೇರಿದ್ದಾರೆ.

ಬಳ್ಳಾರಿ ಮೇಯರ್‌ ಚುನಾವಣೆ ಮುಂದೂಡಿರುವುದನ್ನು ಪ್ರಕಟಿಸಿ ಪೊಲೀಸರ ನೆರವಿನಿಂದ ಪಾಲಿಕೆಯ ಸಭಾಂಗಣದಿಂದ ಹೊರ ಬರುತ್ತಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್‌ ಜುಬೇರ
ಪ್ರಜಾವಾಣಿ ಚಿತ್ರ– ಮುರಳಿಕಾಂತ ರಾವ್‌
ಬಳ್ಳಾರಿ ಮೇಯರ್‌ ಚುನಾವಣೆ ಮುಂದೂಡಿರುವುದನ್ನು ಪ್ರಕಟಿಸಿ ಪೊಲೀಸರ ನೆರವಿನಿಂದ ಪಾಲಿಕೆಯ ಸಭಾಂಗಣದಿಂದ ಹೊರ ಬರುತ್ತಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್‌ ಜುಬೇರ ಪ್ರಜಾವಾಣಿ ಚಿತ್ರ– ಮುರಳಿಕಾಂತ ರಾವ್‌
ಬಳ್ಳಾರಿ ಮೇಯರ್‌ ಚುನಾವಣೆ ಮುಂದೂಡಿದ ಕ್ರಮ ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಬಳ್ಳಾರಿ ಮೇಯರ್‌ ಚುನಾವಣೆ ಮುಂದೂಡಿದ ಕ್ರಮ ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಮುಜುಗರ ತಪ್ಪಿಸಿಕೊಂಡ ಕಾಂಗ್ರೆಸ್‌ ಸಚಿವ ನಾಗೇಂದ್ರ ವರ್ಸಸ್‌ ಭರತ್‌ ರೆಡ್ಡಿ ಬಿಜೆಪಿ ಜತೆ ಕಾಂಗ್ರೆಸ್‌ನ ಒಂದು ಬಣ ರಹಸ್ಯ ಒಪ್ಪಂದ?
ಬಿಜೆಪಿ ಸದಸ್ಯರ ಧರಣಿ
ಮೇಯರ್‌ ಚುನಾವಣೆಯನ್ನು ದಿಢೀರ್‌ ಮುಂದೂಡಿದ ಅಧಿಕಾರಿಗಳ ಕ್ರಮ ಖಂಡಿಸಿ ಪಾಲಿಕೆ ಬಿಜೆಪಿ ಸದಸ್ಯರು ಮಂಗಳವಾರ ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ‘ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಈಗ ರಿಪಬ್ಲಿಕ್‌ ಆಫ್‌ ಬಳ್ಳಾರಿ ಆರಂಭವಾಗಿದೆ. ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬಳಿಕ ರಾಜಕೀಯ ವಾತಾವರಣ ಬದಲಾಗುತ್ತಿದೆ. ಪಕ್ಷೇತರ ಸದಸ್ಯರ ಮುಖಾಂತರ ಬಿಜೆಪಿ ಇಲ್ಲಿ ಅಧಿಕಾರ ಹಿಡಿಯಲಿದೆ ಎಂಬ ಆತಂಕದಿಂದ ಚುನಾವಣೆ ಮುಂದೂಡಲಾಗಿದೆ’ ಎಂದು ಪಾಲಿಕೆ ಬಿಜೆಪಿ ಸದಸ್ಯ ಶ್ರೀನಿವಾಸ್‌ ಮೋತ್ಕರ್‌ ಆರೋಪಿಸಿದರು. ‘ಕಮಿಷನರ್‌ ಎಡಿಸಿ ಸೇರಿದಂತೆ ಎಲ್ಲರೂ ಕಾಂಗ್ರೆಸ್‌ ಒತ್ತಡಕ್ಕೆ ಮಣಿದಿದ್ದಾರೆ. ಅವರು ಚುನಾವಣೆ ಮುಂದೂಡಿಕೆಗೆ ಕಾರಣ ಕೊಡಲಿ’ ಎಂದು ಆಗ್ರಹಿಸಿದರು. ‘ಮುಂದೆ ಮೇಯರ್‌ ಚುನಾವಣೆ ನಡೆದರೂ ಬಹಿಷ್ಕರಿಸುತ್ತೇವೆ. ಯಾವುದೇ ಕಾರಣ ಇಲ್ಲದೆ ಚುನಾವಣೆ ಮುಂದೂಡಲಾಗುತ್ತದೆ ಎಂದರೆ ಏನರ್ಥ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಬಾಬು ಪ್ರಶ್ನಿಸಿದರು. ‘ಪ್ರಾದೇಶಿಕ ಆಯುಕ್ತರು ಬಳ್ಳಾರಿಯಲ್ಲಿದ್ದಾರೆ. ಅವರು ಇಲ್ಲಿ ಇಲ್ಲವೆಂದಾದರೆ ನಾನು ಇವತ್ತೇ ರಾಜೀನಾಮೆ ಕೊಡುತ್ತೇನೆ’ ಎಂದು ಮೋತ್ಕರ್‌ ಸವಾಲು ಹಾಕಿದರು. ‘ಮೇಯರ್‌ ಚುನಾವಣೆಗೆ ಏಳು ದಿನ ಮೊದಲು ನೋಟಿಸ್‌ ಕೊಡಬೇಕು. ಆದರೆ 20 ದಿನ ಮೊದಲೇ ನೋಟಿಸ್‌ ಕೊಡಲಾಗಿದೆ. ಆದರೂ ಪರವಾಗಿಲ್ಲ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಚುನಾವಣೆ ಮುಂದೂಡಿಕೆ ಕಾರಣ ಕೊಡುತ್ತಿಲ್ಲ. ಮಾಧ್ಯಮದವರು ಹೋಗಿ ಕಾರಣ ಏನೆಂದು ಪ್ರಶ್ನಿಸಲಿ’ ಎಂದು ಕೆ. ಹನುಮಂತಪ್ಪ ಒತ್ತಾಯಿಸಿದರು. 
ಕಾಂಗ್ರೆಸ್‌ ಸದಸ್ಯರಿಗೆ ಅನಾರೋಗ್ಯ!
‘ಅನಾರೋಗ್ಯದ ಕಾರಣ ತಾವು ಮೇಯರ್‌ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ’ ಎಂದು ಕೆಲವು ಕಾಂಗ್ರೆಸ್‌ ಸದಸ್ಯರು ಪತ್ರ ಕಳುಹಿಸಿದ್ದರು’ ಎಂದು ಪಾಲಿಕೆ ಕಮಿಷನರ್‌ ಖಲೀಲ್‌ ಸಾಬ್‌ ಸ್ಪಷ್ಟಪಡಿಸಿದರು. ‘ಸದಸ್ಯರ ಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಕಳಿಸಿದ್ದೇನೆ. ಐವರು ಪತ್ರ ಕಳಿಸಿದ್ದಾರೋ ಅಥವಾ ಒಂಭತ್ತು ಮಂದಿ ಕಳಿಸಿದ್ದಾರೋ ಎಂಬುದು ನೆನಪಿಲ್ಲ’ ಎಂದು ಕಮಿಷನರ್‌ ತಿಳಿಸಿದರು. ಡಿ.19ರಂದು ಮೇಯರ್ ಚುನಾವಣೆ! ಮುಂದೂಡಿದ ಮೇಯರ್ ಚುನಾವಣೆ ಡಿ.19ರಂದು ಮಧ್ಯಾಹ್ನ 12.30ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಕಮಿಷನರ್‌ ಅಧಿಸೂಚನೆ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT