ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯ ಮತದಾನ ಪ್ರಕ್ರಿಯೆ ನಗರದ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆಯಿತು.
ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ನಡೆಯಲಿದೆ.ಆದರೆ ಫಲಿತಾಂಶ ಘೋಷಿಸಬಾರದು ಎಂದು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ ಎಂದು ಚುನಾವಣಾಧಿಕಾರಿ ರಮೇಶ ಪಿ. ಕೋನರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಹರಪನಹಳ್ಳಿಯ ಐದು ಹಾಲು ಉತ್ಪಾದಕ ಸಹಕಾರ ಸಂಘಗಳು ಈ ಮೊದಲು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಸೇರಿದ್ದು, ಈಗ ಬಳ್ಳಾರಿ ಗೆ ಸೇರಿರುವುದರಿಂದ ಇಲ್ಲಿನ ಒಕ್ಕೂಟದ ಚುನಾವಣೆ ಯಲ್ಲೂ ಮತದಾನದ ಅವಕಾಶ ನೀಡಲಾಗಿದೆ.ಈ ವಿವಾದ ಬಗೆಹರಿಯುವವರೆಗೂ ಫಲಿತಾಂಶ ಘೋಷಿಸುವುದಿಲ್ಲ ಎಂದರು.
ಕೊಪ್ಪಳದಲ್ಲಿ 75 ಮತದಾರರರಿದ್ದು, 3 ಸಾಮಾನ್ಯ ಕ್ಷೇತ್ರಕ್ಕೆ 6 ಮಂದಿ, ಮಹಿಳೆ ಮೀಸಲು ಕ್ಷೇತ್ರಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ 31 ಮತದಾರರು ಇದ್ದು,3 ಸಾಮಾನ್ಯ- ಸ್ಥಾನಗಳ ಪೈಕಿ ಎರಡು ಸ್ಥಾನಕ್ಕೆ, ಮಹಿಳೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು.
ಬಳ್ಳಾರಿಯಲ್ಲಿ 133 ಮತದಾರರು ಇದ್ದು, ಮೂರು ಸಾಮಾನ್ಯ ಸ್ಥಾನಗಳಿಗೆ 6 ಮಂದಿ ಸ್ಪರ್ಧಿಸಿದ್ದಾರೆ.ಮಹಿಳೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ ಎಂದರು.22 ಮತಗಟ್ಟೆ ಸಿಬ್ಬಂದಿ ಹಾಗೂ 46 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.