ಹೊಸಪೇಟೆ/ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಗುರುವಾರ ಸಂಜೆ ಗಾಳಿಯಿಂದ ಕೂಡಿದ ಸಾಧಾರಣ ಮಳೆ ಸುರಿಯಿತು. ಕೆಲವೆಡೆ ಮರಗಳು ಧರೆಗೆ ಉರುಳಿದ್ದರೆ, ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಸಿಡಿಲಿಗೆ ಮೂರು ಹಸುಗಳು ಹಾಗೂ ಹರಪನಹಳ್ಳಿಯ ಕುಮಾರನಹಳ್ಳಿಯಲ್ಲಿ ಒಂದು ಹಸು ಸತ್ತಿದೆ.
ಹರಾಳು ಗ್ರಾಮದ ಕೃಷಿಕ ಅಂಬಳಿ ಪ್ರಕಾಶ್ಗೆ ಸೇರಿದ ಹಸುಗಳ ಮೌಲ್ಯ ₹1.50 ಲಕ್ಷ ಎಂದು ಅಂದಾಜಿಸಲಾಗಿದೆ. ಕುಮಾರನಹಳ್ಳಿಯ ಚಂದ್ರಪ್ಪ ಅವರಿಗೆ ಇನ್ನೊಂದು ಹಸು ಸೇರಿತ್ತು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ, ಗಾದಿಗನೂರು ಭಾಗಗಳಲ್ಲಿ ಭಾರಿ ಗಾಳಿ ಸಹಿತ ಸಾಧಾರಣ ಮಳೆ ಸುರಿಯಿತು. ಬಳ್ಳಾರಿ ನಗರದಲ್ಲಿ ಹತ್ತು ನಿಮಿಷ ತುಂತುರು ಮಳೆ ಸುರಿದರೆ, ಸಂಡೂರಿನಲ್ಲಿ ಭಾರಿ ಗಾಳಿ, ಗುಡುಗು, ಸಿಡಿಲಿನೊಂದಿಗೆ 40 ನಿಮಿಷ ಮಳೆ ಸುರಿಯಿತು. ತೋರಣಗಲ್, ಕಂಪ್ಲಿ ಭಾಗದಲ್ಲೂ ಮಳೆಯಾಗಿದೆ.