ವಿಜಯಪುರ:ಬೆಳೆಗಳಿಗೆ ಬರುವ ರೋಗ ತಡೆಗಟ್ಟಲು ರೈತರು ತಾವೇ ಔಷಧಿ ತಯಾರು ಮಾಡಿಕೊಂಡು ಹತೋಟಿಗೆ ತರಬಹುದು. ಈ ಕುರಿತು ಅಗತ್ಯ ತರಬೇತಿ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರಜ್ಞ ಡಾ.ನಾಗರಾಜ್ ಹೇಳಿದರು.
ಚನ್ನರಾಯಪಟ್ಟಣ ಹೋಬಳಿಯ ಬೀಡಿಗಾನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಅನುಭವದಲ್ಲಿ ಬೋರ್ಡೋ ಮಿಶ್ರಣ ತಯಾರಿಕೆ ಮತ್ತು ಕೊಟ್ಟಿಗೆ ಗೊಬ್ಬರದಲ್ಲಿ ಟ್ರೈಕೋಡರ್ಮಾ ಹದ ಮಾಡುವ ಕುರಿತು ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೋರ್ಡೋ ಮಿಶ್ರಣದಿಂದ ಬೆಳೆಗಳಿಗೆ ತಗಲುವ ಹಲವಾರು ರೋಗಗಳನ್ನು ನಿಯಂತ್ರಣ ಮಾಡಬಹುದು. ಅದನ್ನು ಮನೆಯಲ್ಲಿ ತಯಾರಿಸಿ ಹಣ ಉಳಿಸಬಹುದು. ಇದನ್ನು ತಯಾರಿಸಲು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಕಚ್ಚಾ ವಸ್ತುಗಳಿಂದಲೇ ತಯಾರಿಸಬಹುದಾಗಿದೆ. ಮೈಲುತುತ್ತ ಒಂದು ಕೆ.ಜಿ, ಸುಣ್ಣದ ಹರಳು ಒಂದು ಕೆ.ಜಿ, 100 ಲೀಟರ್ ನೀರು, ಪ್ಲಾಸ್ಟಿಕ್ ಅಥವಾ ಮಣ್ಣಿನ ಪಾತ್ರೆಗಳಿಂದ ಬೋರ್ಡೋ ಮಿಶ್ರಣ ತಯಾರಿಕೆ ಮಾಡಬಹುದು ಎಂದು ವಿವರಿಸಿದರು.
ಕೃಷಿ ವಿಸ್ತರಣಾ ಉಪನ್ಯಾಸಕಿ ಡಾ.ಯಶಸ್ವಿನಿ ಮಾತನಾಡಿ, ರೈತರು ತಯಾರಿಸಿಕೊಂಡು ಬೋರ್ಡೋ ಮಿಶ್ರಣದಿಂದ ಡೌನೀ ಮಿಲ್ಡ್ ಅಥವಾ ಬಯಲು ಮೇಲಿನ ಸಿಲಿಂಧ್ರವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು. ಆಲೂಗಡ್ಡೆಗೆ ಕಾಡುವ ಎಲೆಚುಕ್ಕೆ ರೋಗವನ್ನೂ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಸಚಿನ್, ಶಿಲ್ಪಾ, ಸಿದ್ದೇಶ್, ಸತೀಶ್, ಸರೀನ್ ಅಯ್ಯಪ್ಪ, ಶಶಿಕಲಾ, ರಕ್ಷಿತಾ, ಪ್ರಶಾಂತ್, ಶರತ್, ಶಾರದಾ, ರಿಷಿಕ್, ಶಿವಶಂಕರ್, ರಶ್ಮಿ, ಸಂತೃಪ್ತಿ, ರಿಯಾ, ಸಮೀಕ್ಷಾ, ರೇವಂತ್, ಗ್ರಾಮದ ಮುಖಂಡ ಮುನಿಕೃಷ್ಣಪ್ಪ, ಚಂದ್ರಣ್ಣ ಹಾಜರಿದ್ದರು.